ಮಹಾಲಿಂಗಪುರ: ಸತ್ಯ ಸಂಗತಿಗಳನ್ನು ಅರಿತುಕೊಂಡು ಜಗತ್ತಿಗೆ ಬೆಳಕು ನೀಡುವವನೇ ವಿಜ್ಞಾನಿ ಎಂದು ಅವರಾದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಎಸ್.ಸಿ. ಅರಗಿ ಹೇಳಿದರು.
ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂಮಿ ತಿರುಗುತ್ತಿರುವ ಮತ್ತು ಅದರ ಮೇಲಿರುವ ಒತ್ತಡದ ಕಾರಣದಿಂದಾಗಿ ದುಂಡಾಗಿದೆ. ಇದೇ ಕಾರಣದಿಂದ ಸಸ್ಯಗಳ ಕಾಂಡಗಳು ದುಂಡಾಗಿರುತ್ತವೆ. ಜಗತ್ತಿನಲ್ಲಿ ಸತ್ಯವಾಗಿ ಇರುವುದೇ ವಿಜ್ಞಾನ. ಇರುವುದನ್ನು ಸಂಶೋಧಿಸುವವನೇ ವಿಜ್ಞಾನಿ. ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇರುವುದನ್ನು ಶೋಧಿಸಿದ ವಿಜ್ಞಾನಿ ನ್ಯೂಟನ್. ಆದರೆ, ವಿಜ್ಞಾನಿಯಿಂದ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಬಂದಿಲ್ಲ. ವಿಜ್ಞಾನಿ ಆಗಲು ಬಹಳ ಜಾಣ ಆಗಿರುವ ಅವಶ್ಯಕತೆ ಇಲ್ಲ. ಜಗತ್ತಿನಲ್ಲಿ ಅತ್ಯಂತ ಸರಳ ವಿಷಯ ಯವುದೆಂದರೆ ವಿಜ್ಞಾನ ಮಾತ್ರ ಎಂದರು.
ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಎಚ್.ಜಿ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು.
ಕೆಎಲ್ಇ ಡಿಪ್ಲೊಮಾ ಕಾಲೇಜು ಪ್ರಾಚಾರ್ಯ ಎಸ್.ಐ. ಕುಂದಗೋಳ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರುಗಳ ಮಾರ್ಗದರ್ಶನ ಇದ್ದಾಗ ಮಾತ್ರ ಸಾಧ್ನೆ ಸಾಧ್ಯ ಎಂದರು.
ಜೇಸಿ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿದರು.
ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಕುಂಚನೂರಿನ ಶಿಕ್ಷಕ ಎ.ಕೆ. ಮಾಗಿ, ಜ್ಞಾನ ಗುರುಕುಲ ಶಾಲೆಯ ಮುಖ್ಯಶಿಕ್ಷಕ ಷಣ್ಮುಖ ಹಿರೇಮಠ, ಕೆಎಲ್ಇ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಎನ್. ಅರಕೇರಿ ಇತರರಿದ್ದರು.
ವಿದ್ಯಾರ್ಥಿನಿ ಸುಮಕ್ಷಾ ಭರತನಾಟ್ಯ ಪ್ರದರ್ಶಿಸಿದರು. ಕುಮಾರ ಡೋಣಿ ಪ್ರಾರ್ಥಿಸಿದರು. ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಸಪ್ನಾ ಅನಿಗೋಳ ಸ್ವಾಗತಿಸಿದರು. ನಿರ್ಮಲಾ ಕೀರಪುರ ನಿರೂಪಿಸಿದರು. ಶಿಲ್ಪಾ ಬೀರನಗಡ್ಡಿ ವಂದಿಸಿದರು.
ಗಮನ ಸೆಳೆದ ವಸ್ತು ಪ್ರದರ್ಶ ಮತ್ತು ನರ್ತನ: ಡಿಪ್ಲೊಮಾ ಕಾಲೇಜಿನ ಎಲ್ಲ ವಿಭಾಗಗಳಲ್ಲಿ ತಾಂತ್ರಿಕ ವಸ್ತು ಪ್ರದರ್ಶನ ಹಾಗೂ ಸುತ್ತಲಿನ ಹತ್ತಾರು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ವೈಯಕ್ತಿಕ ಮತ್ತು ಸಮೂಹ ನೃತ್ಯದಿಂದ ವಿದ್ಯಾರ್ಥಿಗಳು ಸಭಿಕರನ್ನು ರಂಜಿಸಿದರು.