ಬೆಳಗಾವಿ : ಬೇಸಿಗೆ ರಜೆ ಮುಕ್ತಾಯಗೊಂಡು ಶಾಲೆಗಳು ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬುಧವಾರ ತಾಲೂಕಿನ ಬೆಂಡಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ನೆರವೇರಿತು.
ಡೊಳ್ಳು ಬಡಿತದೊಂದಿಗೆ ಟ್ರ್ಯಾಕ್ಟರ್ಗಳಲ್ಲಿ ವಿದ್ಯಾರ್ಥಿಗಳನ್ನು ಮೆರವಣಿಗೆ ಮಾಡುವ ಮೂಲಕ ಶಾಲೆಗೆ ಕರೆ ತರಲಾಯಿತು. ವಿವಿಧ ವೇಷಧಾರಿಗಳಾದ ಚಿಣ್ಣರು ಗ್ರಾಮಸ್ಥರ ಗಮನ ಸೆಳೆದರು. ಜಿಪಂ ಸಿಇಒ ಹರ್ಷಲ್ ಬೋಯರ್ ವಿದ್ಯಾರ್ಥಿಗಳಿಗೆ ಹೂವು ನೀಡಿ, ಹಾರ ಹಾಕಿ ಸ್ವಾಗತಿಸಿದರೆ, ಡಿಡಿಪಿಐ ಬಸವರಾಜ ನಾಲತವಾಡ ಗುಲಾಬಿ ಜತೆಗೆ ಪಠ್ಯಪುಸ್ತಕ ಹಾಗೂ ಕುಡಿಯಲು ಹಾಲು ವಿತರಿಸಿ ಸಂತಸದ ಕಲಿಕೆಗೆ ಮಕ್ಕಳನ್ನು ಬರಮಾಡಿಕೊಂಡಿರು.
ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು, ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲೂ ಸ್ಮಾರ್ಟ್ ಕ್ಲಾಸ್ ಮಾಡಲಾಗುವುದು ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರತಿದಿನ ತಪ್ಪದೆ ಶಾಲೆಗೆ ಕಳುಹಿಸಿ. ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದಂತೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವಂತೆ ಮಾಡಬೇಕು. ಇದರಿಂದ ಅವರ ಆರೋಗ್ಯವು ಸುಧಾರಿಸುವುದು ಅಲ್ಲದೆ ಕೆಟ್ಟ ಚಟಗಳಿಗೆ ಅಂಟುವುದನ್ನು ತಪ್ಪಿಸಬಹುದು ಎಂದರು.
ಗ್ರಾಪಂ ಅಧ್ಯಕ್ಷೆ ನೀಲವ್ವ ಹುಲಿಕವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗೆ ತಲಾ 50 ಸಾವಿರ ರೂ.ದೇಣಿಗೆ ನೀಡಿದ ಶಂಕರ ಕುಂದ್ರಾಳ, ಸೋಮಶೇಖರ ಸುಳೇಬಾವಿ ಸೇರಿದಂತೆ ಹಲವು ದಾನಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗಾಗಿ ಹತ್ತಾರು ಸಾಂಸ್ಕೃತಿಕ ಹಾಗೂ ಮನರಂಜನೆ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಹಾಗೂ ಅಧಿಕಾರಿಗಳೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಬಿಇಒ ಎಸ್.ಪಿ.ದಾಸಪ್ಪನವರ, ಬಸವರಾಜ ಮಿಲಾನಟ್ಟಿ, ರಾಮನಗೌಡ ಮುದಕನಗೌಡರ, ಎಸ್.ವೈ.ಬೆಂಡಿಗೇರಿ, ಸಿದ್ದಪ್ಪ ಕುರುಬರ, ಸಿ.ಎಸ್.ಪಾಟೀಲ, ಶಿವಾನಂದ ಮಾಸ್ತಮರಡಿ, ಶಂಕರ ಕುಲಕರ್ಣಿ, ಸಿಎಫ್.ಪಾಟೀಲ ಹಾಗೂ ಶಂಕರ ತಾರಾಪೂರ, ನಿವೃತ್ತ ಅಭಿಯಂತ ಎ.ವೈ. ಬೆಂಡಿಗೇರಿ ಇದ್ದರು. ಪಿ.ಕೆ. ಹೊಸೂರ ಸ್ವಾಗತಿಸಿದರು. ವಿ.ಎಂ.ಶೀಗಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ವಿ.ಎಂ. ಕುಂಬಾರ, ಎ.ಜಿ.ಮುಲ್ಲಾ ನಿರೂಪಿಸಿದರು. ಸಿ.ಎಸ್.ಪಾಟೀಲ ವಂದಿಸಿದರು.