More

    ಕರೊನಾ ಗೆಲ್ಲಲು ರಾಮನಾಮವೆಂಬ ದಿವ್ಯಾಸ್ತ್ರ

    ಸೇತುಬಂಧನ ನಡೆಯುತ್ತಿತ್ತು.

    ಕರೊನಾ ಗೆಲ್ಲಲು ರಾಮನಾಮವೆಂಬ ದಿವ್ಯಾಸ್ತ್ರವಾನರಸೈನಿಕರು ದೊಡ್ಡದೊಡ್ಡ ಬಂಡೆಗಲ್ಲುಗಳನ್ನು, ಪರ್ವತಗಳನ್ನೇ ಕಿತ್ತುತಂದು ಸೇತುವೆಯಂತೆ ಸಮುದ್ರದಲ್ಲಿ ಜೋಡಿಸುತ್ತಿದ್ದರು. ಏನಾಶ್ಚರ್ಯ… ನೀರಿನಲ್ಲಿ ಮುಳುಗುವ ಬದಲು ಕಲ್ಲುಗಳು ತೇಲುತ್ತಿದ್ದವು. ಶರವೇಗದಲ್ಲಿ ಸೇತುವೆ ನಿರ್ವಣವಾಗುತ್ತಿತ್ತು. ವಾನರರು ಪ್ರತಿಯೊಂದು ಕಲ್ಲಿನ ಮೇಲೂ ‘ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಬರೆದು ಸಮುದ್ರದಲ್ಲಿ ಜೋಡಿಸುತ್ತಿದ್ದರು. ಇದನ್ನೆಲ್ಲ ಮರೆಯಲ್ಲಿ ಅವಿತು ನೋಡುತ್ತಿದ್ದ ರಾಕ್ಷಸ ಬೇಹುಗಾರರು ರಾವಣನ ಆಸ್ಥಾನಕ್ಕೆ ತೆರಳಿ ಸೇತುಬಂಧದ ಪವಾಡದ ಬಗ್ಗೆ ಮಾಹಿತಿ ನೀಡಿದ್ದರು. ಅದೇನು ಮಹಾ ಪವಾಡ? ನಾನು ಕೂಡ ಸಮುದ್ರದಲ್ಲಿ ಬಂಡೆಗಲ್ಲನ್ನು ತೇಲಿಸಬಲ್ಲೆ ಎಂದು ರಾವಣ ಕೊಚ್ಚಿಕೊಂಡಿದ್ದ.

    ಸರಿ, ನೋಡಿಯೇ ಬಿಡೋಣ ಎಂದು ರಾವಣನ ಜೊತೆ ರಾಕ್ಷಸ ಪ್ರಮುಖರು, ಅಂತಃಪುರದ ಅರಸಿಯರೆಲ್ಲ ಸಮುದ್ರದಂಡೆಗೆ ಬಂದಿದ್ದರು. ರಾವಣ ದೊಡ್ಡ ಬಂಡೆಗಲ್ಲೊಂದನ್ನು ಎತ್ತಿ ಸಮುದ್ರಕ್ಕೆ ಎಸೆದ. ಆಶ್ಚರ್ಯ. ಈ ಕಲ್ಲು ಸಹ ತೇಲತೊಡಗಿತ್ತು. ‘ನೋಡಿದಿರಾ ನನ್ನ ಶಕ್ತಿ? ರಾಮನಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ’ ಎಂದು ರಾವಣ ಕೊಚ್ಚಿಕೊಂಡಾಗ ಎಲ್ಲರೂ ಮೆಚ್ಚುಗೆಯಿಂದ ತಲೆಬಾಗಿದ್ದರು.

    ಆದರೂ, ಪತ್ನಿ ಮಂಡೋದರಿಗೆ ಅನುಮಾನ ನೀಗಿರಲಿಲ್ಲ. ಏಕಾಂತದಲ್ಲಿದ್ದಾಗ ಅದನ್ನೇ ಪ್ರಶ್ನಿಸಿದ್ದಳು. ಆಗ ರಾವಣ ನಿಜ ಬಾಯ್ಬಿಟ್ಟಿದ್ದ. ಮುಂದೆ ಘನಘೊರ ಸಮರ ನಡೆಯುವುದಿದೆ. ನರ-ವಾನರ ಸೈನ್ಯ ಸಮುದ್ರಕ್ಕೇ ಸೇತುವೆ ಕಟ್ಟಿ ಲಂಕೆಗೆ ಬರುತ್ತಿರುವಾಗ ನನ್ನಿಂದ ಒಂದು ಕಲ್ಲನ್ನೂ ಸಮುದ್ರದಲ್ಲಿ ತೇಲಿಸಲು ಸಾಧ್ಯವಾಗದೇ ಹೋದರೆ ನಮ್ಮ ಸೈನಿಕರು ಎದೆಗುಂದಿ ಯುದ್ಧಕ್ಕೆ ಮೊದಲೇ ಸೋತುಹೋಗುತ್ತಾರೆ. ಹಾಗಾಗಿ ನಾನು ಯುಕ್ತಿ ಮೆರೆದೆ. ‘ರಾಮಚಂದ್ರ, ನಾನೆಸೆಯುವ ಬಂಡೆಗಲ್ಲು ಸಮುದ್ರದಲ್ಲಿ ಮುಳುಗಿದರೆ ನಿನ್ನ ಮೇಲಾಣೆ’ ಎಂದು ಹೇಳಿ ಸಮುದ್ರಕ್ಕೆಸೆದೆ. ಕಲ್ಲು ತೇಲಿತು, ನನ್ನ ಮರ್ಯಾದೆ ಉಳಿಯಿತು ಎಂದು ರಾವಣ ನಿಜ ಹೇಳಿದ್ದ.

    ರಾವಣ ರಾಕ್ಷಸನಾಯಕ. ಛಲಗಾರ, ಅಪಾರ ಪರಾಕ್ರಮಿ. ತಪಸ್ಸು ಮಾಡಿ ಶಿವನನ್ನೇ ಒಲಿಸಿಕೊಂಡವನು. ಮಾಯಾಯುದ್ಧದಲ್ಲಿ ನಿಷ್ಣಾತ. ತನ್ನ ಮಾಯಾಶಕ್ತಿಯಿಂದ ಕಲ್ಲು ಸಮುದ್ರದಲ್ಲಿ ತೇಲುತ್ತಿರುವಂತೆ ಭ್ರಮೆ ಸೃಷ್ಟಿಸುವುದು ಆತನಿಗೇನು ಕಷ್ಟದ ಕೆಲಸವಾಗಿರಲಿಲ್ಲ. ಆದರೆ, ರಾಮ ಎಂಬ ಹೆಸರಿನ ಶಕ್ತಿಯನ್ನು, ಮಹತ್ವವನ್ನು ರಾವಣನೂ ಅರಿತಿದ್ದ ಎಂದು ತಿಳಿಸುವುದಷ್ಟೇ ಈ ಕಥೆಯ ಉದ್ದೇಶ.

    ನಾಳೆ ರಾಮನವಮಿ. ರಾಮನ ಜನ್ಮಭೂಮಿ, ರಾಮಾಯಣದ ಪುಣ್ಯಭೂಮಿ, ರಾಮಾವತಾರದ ಕರ್ಮಭೂಮಿ ಭಾರತದಲ್ಲಿ ಪ್ರತೀ ವರ್ಷ ರಾಮೋತ್ಸವದ ಸಡಗರ ಆವರ್ಣನೀಯ. ಅಹೋರಾತ್ರಿ ಭಜನೆ, ರಾಮನಾಮ ಸಂಕೀರ್ತನೆ, ಬಗೆಬಗೆಯಲ್ಲಿ ರಾಮನನ್ನು ಪೂಜಿಸುವ, ಆರಾಧಿಸುವ, ಉಪಾಸಿಸುವ ಸಂಭ್ರಮ ಹೇಳತೀರದು. ಆದರೆ, ಈ ವರ್ಷ ಕರೊನಾ ಲಾಕ್​ಡೌನ್​ನಿಂದಾಗಿ ಇಡೀ ದೇಶ ಮನೆಯೊಳಗೆ ಬಂಧಿಯಾಗಿದೆ. ರಸ್ತೆಗಳು ಖಾಲಿಯಾಗಿವೆ, ಉತ್ಸಾಹ ಬರಿದಾಗಿದೆ. ಭಕ್ತರ ಪಾಲಿಗೆ ದೇಗುಲಗಳ ಬಾಗಿಲು ಮುಚ್ಚಿವೆ. ಸಾರ್ವಜನಿಕವಾಗಿ ಜನ ಒಂದೆಡೆ ಸೇರುವ, ಸಂಭ್ರಮಿಸುವ, ಭಕ್ತಿಪರಾಕಾಷ್ಠೆಯಲ್ಲಿ ಕುಣಿದಾಡುವ ಅವಕಾಶ ತಪ್ಪಿಹೋಗಿದೆ. ತಾವಿದ್ದಲ್ಲೇ, ಇರುವಲ್ಲೇ ರಾಮನನ್ನು ಭಜಿಸುವ, ಪೂಜಿಸುವ ಮನೆಮನೆ ರಾಮೋತ್ಸವ ಈ ಬಾರಿ ಬಹುಶಃ ರಾಮನ ಇಚ್ಛೆ ಆಗಿರಬಹುದು.

    ಚೀನಾದಿಂದ ದಾಂಗುಡಿ ಇಟ್ಟಿರುವ ಕರೊನಾ ವೈರಸ್ ಮಹಾಮಾರಿಯನ್ನು ಅಧ್ಯಾತ್ಮ ಶಕ್ತಿಯಿಂದ ಎದುರಿಸಬಹುದಾಗಿದೆ. ಹದಿನೈದನೇ ಶತಮಾನದಲ್ಲಿ ಬುಧಕೌಶಿಕ ಕವಿ ರಚಿಸಿರುವ ರಾಮರಕ್ಷಾಸ್ತೋತ್ರ ಮಾರಕ ಕಾಯಿಲೆಗಳಿಂದ ಕಾಪಾಡುವ ಮಹಾ ಅಸ್ತ್ರಗಳಲ್ಲೊಂದು. ಕರೊನಾ ಮೂಗು ಮತ್ತು ಬಾಯಿಯಿಂದ ಹರಡುವ ಶ್ವಾಸಸಂಬಂಧಿ ಕಾಯಿಲೆ. ರಾಮರಕ್ಷಾ ಸ್ತೋತ್ರ ದೇಹದ ಪ್ರತಿಯೊಂದು ಅಂಗಾಂಗವನ್ನೂ ವಿವಿಧ ಕಾಯಿಲೆಗಳಿಂದ ಕಾಪಾಡುವ ರಕ್ಷಾಕವಚ ನಿರ್ವಿುಸುತ್ತದೆ ಎಂಬ ನಂಬಿಕೆ ಇದೆ. ಈ ಸ್ತೋತ್ರದ ನಾಲ್ಕರಿಂದ 12ರವರೆಗಿನ ಚರಣದಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಾಂಗವನ್ನು ರಾಮಚಂದ್ರ ನಾನಾ ರೂಪಗಳಲ್ಲಿ ಹೇಗೆ ಸಂರಕ್ಷಿಸುತ್ತಾನೆಂಬ ವರ್ಣನೆಯಿದೆ.

    ರಾಮರಕ್ಷಾಮ್ ಪಠೇತ್ಪ್ರಾಜ್ಞಃ ಪಾಪಘೀಂ ಸರ್ವಕಾಮದಾಮ್​ಶಿರೋ ಮೇ ರಾಘವಃ ಪಾತುಫಾಲಂ ದಶರಥಾತ್ಮಜಃ/ಕೌಶಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯಾಃ ಶ್ರುತೀ/ಘ್ರಾಣಮ್ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ/ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಮ್ ಭರತವಂದಿತಃ/ಸ್ಕಂಧೌ ದಿವ್ಯಾಯುಧ ಪಾತು ಭುಜೌ ಭಗ್ನೇಶಕಾಮುಕಃ

    ನಮ್ಮ ಶಿರವನ್ನು, ಹಣೆಯನ್ನು, ನೇತ್ರಗಳನ್ನು, ಕಿವಿಗಳನ್ನು, ನಾಸಿಕವನ್ನು, ಮುಖವನ್ನು, ನಾಲಿಗೆಯನ್ನು, ಕಂಠವನ್ನು, ಹೃದಯವನ್ನು, ಭುಜಗಳನ್ನು, ಸರ್ವಾಂಗಗಳನ್ನೂ ರಾಮಚಂದ್ರನು ನಾನಾ ರೂಪಗಳಿಂದ ಕಾಪಾಡಲಿ ಎಂಬ ಆಶಯ ಅಲ್ಲಿದೆ. ಇದನ್ನೇ ಪುರಂದರ ದಾಸರು ಕೀರ್ತನೆಯ ರೂಪದಲ್ಲಿ ರಾಮ ಮಂತ್ರವ ಜಪಿಸೋ ಹೇ ಮನುಜ / ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ/ ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ ಎಂದು ಬಣ್ಣಿಸಿದ್ದಾರೆ.

    ಭಾರತೀಯರ ಪಾಲಿಗೆ ರಾಮ ಎಂದರೆ ಭರವಸೆ, ನಂಬುಗೆ, ಆತ್ಮವಿಶ್ವಾಸದ ಮೂರ್ತರೂಪ. ಕಷ್ಟಕಾಲದಲ್ಲಿ, ಪ್ರತಿಕೂಲ ಸನ್ನಿವೇಶದಲ್ಲಿ, ಒಂಟಿತನದ ಭಯ, ಶತ್ರುಗಳ ಕಾಟ, ಮಾನಸಿಕ ಕ್ಲೇಷ ಏನೇ ಇರಲಿ, ರಾಮ ಎಂದರೆ ಅಭಯ; ರಾಮ ಎಂದರೆ ಧೈರ್ಯ. ಇಂದಿಗೂ ಹಳ್ಳಿಗಳಲ್ಲಿ ಹಿರಿಯರು ಕತ್ತಲಿನಲ್ಲಿ ಭಯವಾದರೆ ರಾಮ ರಾಮ ಎಂದು ಜಪಿಸುವಂತೆ ಮಕ್ಕಳಿಗೆ ಹೇಳಿಕೊಳ್ಳುತ್ತಾರೆ. ಅದೆಷ್ಟೋ ಮನೆಗಳಲ್ಲಿ ರಾತ್ರಿ ಮಲಗುವಾಗ ಮಕ್ಕಳಿಗೆ ರಾಮಸ್ಕಂಧಂ ಹನುಮಂತಂ ಶ್ಲೋಕ ಹೇಳಿಕೊಡುತ್ತಾರೆ. ಪ್ರಪಂಚವೆಂದ ಮೇಲೆ ಎಲ್ಲ ಬಗೆಯ ಜನರೂ ಇರುತ್ತಾರೆ. ಅಂಧಾನುಕರಣೆ ಮೂಢನಂಬಿಕೆ. ಆದರೆ, ಸಾತ್ವಿಕ ಶಿಸ್ತುಪಾಲನೆಗಳು ಅವರವರ ನಂಬಿಕೆಗೆ ಬಿಟ್ಟಿದ್ದು. ಅದೇ ರೀತಿ ಈ ದೇಶದ ಜನ ರಾಮನಲ್ಲಿ ತಮ್ಮ ಆತ್ಮಗೌರವವನ್ನು ಕಂಡುಕೊಳ್ಳುವುದು, ರಾಮನ ಮೂಲಕ ಭರವಸೆ ಪಡೆದುಕೊಳ್ಳುವುದು ಅನಾದಿಕಾಲದಿಂದ ನಡೆದು ಬಂದಿದೆ. ಏಕೆಂದರೆ, ರಾಮ ಅರಮನೆಯಲ್ಲಿ ಹುಟ್ಟಿದರೂ ಜನರ ನಡುವೆ ಜನಸಾಮಾನ್ಯನಂತೆ ಬದುಕಿದವನು. ಹೆಂಡತಿ, ಅನುಜನ ಜೊತೆ ಕಾಡುಮೇಡು ಅಲೆದವನು. ಗುಡಿಸಲಲ್ಲಿ ಬದುಕಿದವನು, ಗೆಡ್ಡೆಗೆಣಸು ಇತ್ಯಾದಿ ಸಿಕ್ಕಿದ ಆಹಾರಕ್ಕೆ ತೃಪ್ತಿ ಪಟ್ಟುಕೊಂಡವನು. ಹಸಿವು, ನಿದ್ರೆ, ಚಳಿ, ಗಾಳಿ, ಮಳೆ, ಪ್ರಕೃತಿ ವಿಕೋಪಗಳ ಕೋಪತಾಪವನ್ನು ಸಾಮಾನ್ಯವ್ಯಕ್ತಿಯಾಗಿಯೇ ಎದುರಿಸಿದವನು, ಅನುಭವಿಸಿದವನು. ತನ್ಮೂಲಕ ಜಗತ್ತಿಗೊಂದು ಮಾದರಿಯಾದವನು. ಇದೇ ಕಾರಣಕ್ಕೆ ರಾಮನೆಂದರೆ ಎಲ್ಲರಿಗೂ ಇಷ್ಟ, ರಾಮನ ಆದರ್ಶಗಳು ಅನುಕರಣೀಯ. ಗುಣಸ್ವಭಾವಗಳು ಮಾದರಿ. ಜಗತ್ತಿನ ಎಲ್ಲ ಸದ್ಗುಣಗಳ ಮೂರ್ತರೂಪ ರಾಮ.

    ರಾಮಾಯಣ ಯುದ್ಧದ ಆರಂಭದಲ್ಲಿ ಅದೆಷ್ಟೋ ಅಕ್ಷೋಹಿಣಿ ಸಂಖ್ಯೆಯಲ್ಲಿ ಸಮುದ್ರದಂತೆ ಬೊಬ್ಬಿರಿಯುತ್ತಿದ್ದ ರಾವಣನ ಅಗಾಧ ಸೈನ್ಯವನ್ನು ಕಂಡು ರಾಮನ ಜೊತೆ ಬಂದಿದ್ದ ವಾನರ ಸೇನೆ ಗಾಬರಿಗೊಂಡಿತಂತೆ. ಅಷ್ಟೊಂದು ದೊಡ್ಡ ರಾಕ್ಷಸ ಸೇನೆಯ ಎದುರು ನಾವು ಹೋರಾಡುವುದೆಂತು? ಎದುರಿಸಿ ಸಾಯುವುದಕ್ಕಿಂತ ಜೀವ ಉಳಿಸಿಕೊಳ್ಳುವುದೇ ಲೇಸೆಂದು ಬೆದರಿ ಓಡಲಾರಂಭಿಸಿತಂತೆ. ಅದನ್ನೇ ದಾಸರು ಬಣ್ಣಿಸುವುದು ಹೀಗೆ…

    ರಾವಣನ ಮೂಲಬಲ ಕಂಡು ಕಪಿಸೇನೆ / ಆವಾಗಲೇ ಬೆದರಿ ಓಡಿದವು/ ಈ ವೇಳೆ ನರನಾಗಿ ಇರಬಾರದೆಂದೆಣಿಸಿ /ದೇವ ರಾಮಚಂದ್ರ ಜಗವೆಲ್ಲ ತಾನಾದ..

    ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ / ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮ

    ಹೆದರಿದ ವಾನರರಿಗೆ ಧೈರ್ಯ ತುಂಬಲೆಂದೇ ರಾಮಚಂದ್ರ ಜಗವೇ ತಾನಾಗಿ ಸರ್ವವ್ಯಾಪಕನಾದನಂತೆ. ಆಗ ವಾನರರಿಗೆ ಕಂಡಿದ್ದೇನು? ಅವನಿಗೆ ಇವ ರಾಮ ಇವನಿಗೆ ಅವ ರಾಮ / ಅವನಿಯೊಳೀಪರಿ ರೂಪ ಉಂಟೆ / ಲವ ಮಾತ್ರದಿ ಅಸುರ ದುರುಳರೆಲ್ಲರು / ಅವರವರೆ ಹೊಡೆದಾಡಿ ಹತರಾಗಿ ಹೋದರು.

    ಅಯೋಧ್ಯೆಗೆ ಮರಳಿದ ಶ್ರೀರಾಮನಿಗೆ ರಾಜ್ಯ ಪಟ್ಟಾಭಿಷೇಕವೆಲ್ಲ ಮುಗಿದು ಅತಿಥಿ ಗಣ್ಯರೆಲ್ಲ ತಮ್ಮ ತಮ್ಮ ರಾಜ್ಯಗಳಿಗೆ ಮರಳಿದ ಮೇಲೆ ಹನುಮಂತ ರಾಮನ ಅರಮನೆಯಲ್ಲಿ ಕೃತಕೃತ್ಯನಾಗಿ ಉಳಿದುಕೊಂಡಿದ್ದ. ಕಣ್ಮುಚ್ಚಿ ಧ್ಯಾನಸ್ಥನಾಗಿ ಹನುಮ ಕುಳಿತನೆಂದರೆ ರಾಮ ಚಿಂತನೆಯ ಭಕ್ತಿಪರವಶತೆಯಲ್ಲಿ ಮುಳುಗಿಹೋಗುತ್ತಿದ್ದ. ಇಂಥ ಹನುಮನನ್ನು ಕಂಡ ರಾಮ ಪ್ರೀತಿಯಿಂದ ‘ನನ್ನ ಅವತಾರ ಮುಗಿದ ಮೇಲೆ ನಿನ್ನನ್ನೂ ವೈಕುಂಠಕ್ಕೆ ಕರೆದೊಯ್ಯುತ್ತೇನೆ’ ಎಂದು ಮಾತು ಕೊಡುತ್ತಾನೆ. ಆಗ ಹನುಮ ‘ವೈಕುಂಠದಲ್ಲೂ ನೀನು ರಾಮನಾಗಿಯೇ ಇರುವೆಯಾ?’ ಎಂದು ಪ್ರಶ್ನಿಸುತ್ತಾನೆ. ‘ಇಲ್ಲ ಮೂಲರೂಪದಲ್ಲಿ ನಾನು ಮಹಾವಿಷ್ಣು. ರಾಮನಾಗಿರುವುದು ಅವತಾರ ಮಾತ್ರ’ ಎನ್ನುತ್ತಾನೆ. ‘ಹಾಗಾದರೆ, ನಾನು ವೈಕುಂಠಕ್ಕೆ ಬರುವುದಿಲ್ಲ. ರಾಮನಿಲ್ಲದ ಜಾಗದಲ್ಲಿ ನಾನಿರುವುದಿಲ್ಲ. ನಾನು ಅಯೋಧ್ಯೆಯಲ್ಲೇ ಇರುತ್ತೇನೆ’ ಎಂದು ಹನುಮ ಉತ್ತರಿಸುತ್ತಾನೆ.

    ಕಮಲ ನಯನ ರಾಮ/ ಕಮಲ ಚರಣ ರಾಮ / ಕಮಲ ನಯನ ಕಮಲ ಚರಣ ಪತಿತ ಪಾವನ ರಾಮ/ ಪತಿತ ಪಾವನ ರಾಮ/ ಜಾನಕಿ ಜೀವನ ರಾಮ/ ಪತಿತ ಪಾವನ ಜಾನಕಿ ಜೀವನ ಆನಂದರೂಪ ರಾಮ / ಆನಂದರೂಪ ರಾಮ/ ಅಯೋಧ್ಯವಾಸೀ ರಾಮ/ ಆನಂದರೂಪ ಅಯೋಧ್ಯವಾಸಿ ಸಾಧಕ ಸಜ್ಜನ ರಾಮ

    ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಸೃಷ್ಟಿ- ಸ್ಥಿತಿ-ಲಯದ ನಡುವಿನ ಸಮತೋಲನವಿದ್ದಾಗಲೇ ಪ್ರಪಂಚದಲ್ಲಿ ಸಂತೋಷ. ಇಂದಿದ್ದವರು ನಾಳೆ ಇರುವುದಿಲ್ಲ. ನಿನ್ನೆಯ ಅಂಧಕಾರ ಇಂದಿಲ್ಲ. ವರ್ತಮಾನ ಪರಿಸ್ಥಿತಿ ನಾಳೆಗೆ ಮುಂದುವರಿಯುವುದಿಲ್ಲ. ಇಂಥ ಕಾಲಚಕ್ರದ ತಿರುಗಣೆಯಲ್ಲಿ ಮನುಷ್ಯನ ಹಣೆಬರಹ ಸಹ ಬರೆದಿದ್ದಂತೆ ನಡೆಯಲೇಬೇಕು. ಹಾಗಾದರೆ, ಇಂಥ ನಶ್ವರ ಬದುಕಿನಲ್ಲಿ ರಾಮನ ಜಪವನ್ನೇಕೆ ಮಾಡಬೇಕು ಎನ್ನುವುದಕ್ಕೆ ಶಂಕರಾಚಾರ್ಯರು ಶ್ರೀರಾಮ ಭುಜಂಗಪ್ರಯಾತ ಸ್ತೋತ್ರದಲ್ಲಿ ಕಾರಣ ಕೊಡುತ್ತಾರೆ.

    ಯದಾ ಮತ್ಸಮೀಪಂ ಕೃತಾಂತಸ್ಸಮೇತ್ಯ/ ಪ್ರಚಂಡೈಶ್ಚ ಕೋಪೈರ್ಭಟೈರ್ಭೀಷಯೇನ್ಮಾಮ್ ತದಾವಿಷ್ಕರೋಷಿ ತ್ವದೀಯಂ ಸ್ವರೂಪಂ /

    ಸದಾಪತ್ಪ್ರಣಾಶಂಸಕೋದಂಡಬಾಣಮ್

    ಕಾಲ ಯಮನು ಕೋಪೋದ್ರಿಕ್ತರಾದ ತನ್ನ ಭಟರೊಂದಿಗೆ ನನ್ನೆದುರು ಬಂದು ನಿನ್ನ ಅಂತ್ಯ ಕಾಲ ಬಂದಿದೆ ಬಾ ಎಂದು ಹೆದರಿಸುವಾಗ ಹೇ ರಾಮಚಂದ್ರನೇ ಆ ಸಂದರ್ಭದಲ್ಲಿ ನೀನು ನಿನ್ನ ಕೋದಂಡ ಬಿಲ್ಲು ಹಿಡಿದು ನನ್ನೆದುರು ಪ್ರಕಟನಾಗು. ಆಗ ನನ್ನೊಳಗಿನ ಎಲ್ಲ ಭಯಗಳು ದೂರವಾಗುತ್ತವೆ.

    ಗ್ರಹಣ ಕಾಲದಲ್ಲಿ ದೇವರಿಗೆ ಪೂಜೆ ಇರುವುದಿಲ್ಲ. ಈಗಲೂ ಒಂದು ರೀತಿ ಕರೊನಾ ವೈರಸ್ ಗ್ರಹಣದ ರೀತಿಯಲ್ಲಿ ಜಗತ್ತನ್ನು ಆವರಿಸಿದೆ. ಆದರೆ, ಕತ್ತಲು ಸರಿಯಲೇಬೇಕು, ಬೆಳಕು ಹರಿಯಲೇಬೇಕು. ಇಡೀ ದೇಶ ಲಾಕ್​ಡೌನ್ ಆಗಿರುವ ಸಂದರ್ಭದಲ್ಲಿ ಈ ರಾಮನವಮಿಯ ಸಂಭ್ರಮವನ್ನು ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಾಗದಿರಬಹುದು. ಆದರೆ, ನಮ್ಮ ನಮ್ಮ ಪರಿಮಿತಿಯಲ್ಲಿ, ನಮ್ಮ ಮನೆಯಲ್ಲಿ, ನಮ್ಮ ಹೃದಯದಲ್ಲಿ ರಾಮನನ್ನು ಆರಾಧಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಖಿನ್ನತೆ ಆತಂಕ ದೂರವಾಗುತ್ತದೆ.

    ಹೃದಯವೆಂಬೊ ಮಡಕೆಯಲ್ಲಿ ಭಾವವೆಂಬ ಎಸರನಿಟ್ಟು / ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು/ ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ / ವಿಠಲ ನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ

    ಶ್ರೀರಾಮ ಚಂದ್ರ ಎಲ್ಲರಿಗೂ ಒಳಿತು ಮಾಡಲಿ.

    ಜಯತು ಕೋದಂಡರಾಮ/ ಜಯತು ದಶರಥ ರಾಮ/ ಜಯತು ಸೀತಾರಾಮ/ ಜಯತು ರಘುರಾಮ/ ಜಯತು ಜಯತು.

    ಪ್ರಧಾನಿ ಮೋದಿ ತಾಯಿ ಹೀರಾಬೆನ್​ರಿಂದ ಕರೊನಾ ಪೀಡಿತರ ನೆರವಿಗೆ 25 ಸಾವಿರ ರೂ. ದೇಣಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts