ವಿಜಯವಾಣಿ ಸುದ್ದಿಜಾಲ ಗದಗ
ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಚಿನ್ಹೆ ಜೋಡೆತ್ತು ಆಗಿತ್ತು. ಜೋಡೆತ್ತುಗಳ ಲಾಭ ಪಡೆದು, ಈಗ ಗೋಹತ್ಯೆ ನಿಷೇಧ ವಾಪಾಸು ಪಡೆಯುತ್ತೇವೆ ಎಂದು ಯಾವ ಲಾಭಕ್ಕಾಗಿ ಹೇಳಿತ್ತೀರಿ ಎಂದು ಕಾಂಗ್ರೆಸ್ ಪಕ್ಷವನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ನಗರದ ಒಕ್ಕಲಗೇರಿ ಓಣಿಯಲ್ಲಿನ ಶ್ರೀರಾಮ ಸೇನಾ ಜಿಲ್ಲಾಧ್ಯ ಮಹೇಶ ರೋಖಡೆ ಮನೆಯ ಆವರಣದಲ್ಲಿ ಸಾವರ್ಕರ್ ಜಯಂತ್ಯುತ್ಸವ ನಿಮಿತ್ತ ವೀರ ಭಾನುವಾರ ಸಾವರ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಮತಬ್ಯಾಂಕ್ಗಾಗಿ ಗೋಹತ್ಯೆ ನಿಷೇಧ ಹಿಂಪಡೆಯುತ್ತೇವೆ ಎಂದು ಹೇಳತ್ತಾರೆ. ಮೊದಲ ಬಾರಿಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಿದ್ದು ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಬುದನ್ನು ಕಾಂಗ್ರೆಸ್ ಕೂಡ ಮರೆಯಬಾರದು. ಆಜಾನ್ ಮೈಕ್ ನಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ. ಆದರೆ, ಶಬ್ದದ ಪರಿಣಾಮಕ್ಕೆ ವಿರೋಧವಿದೆ ಎಂದು ಮುತಾಲಿಕ್ ಹೇಳಿದರು.
ಸಾನ್ನಿಧ್ಯ ವಹಿಸಿದ ಶಿವಾನಂದ ಬೃನ್ಮಠದ ಸದಾಶಿವಾನಂದ ಭಾರತಿ ಶ್ರೀಗಳು ಮಾತನಾಡಿ, ಮಹೇಶ ರೋಖಡೆಯವರು ಮನೆಯ ಆವರಣದಲ್ಲಿ ಸಾವರ್ಕರ್ ಪುತ್ಥಳಿ ಅನಾವರಣಗೊಳ್ಳಸಿದಂತೆ ಪ್ರತಿ ಮನೆ ಮತ್ತು ಮನದಲ್ಲಿ ಸಾವರ್ಕರ್ ಸ್ಥಾಪಿಸಿ ದೇಶದ ಶ್ರೇಯೋಭಿವೃದ್ಧಿಗಾಗಿ ಸರ್ವರೂ ತಮ್ಮ ಕೆಲಸವನ್ನು ಮಾಡಬೇಕು. ನವಯುವಕರು ದೇಶದಲ್ಲಿ ಸಾವರ್ಕರ್ ಹೆಸರನ್ನು ಪಸರಿಸಿ ಪ್ರೇರಣೆ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ರೋಖಡೆ ಮತ್ತು ಮಹೇಶ ರೋಖಡೆ ಕುಟುಂಬಸ್ಥರಿಗೆ ಪ್ರಮೋದ್ ಮುತಾಲಿಕ್ ಸನ್ಮಾನಿಸಿದರು.
ರಾಜು ಖಾನಪ್ಪನವರ, ಸಿದ್ಧು ಜೀವನಗೌಡ್ರ, ಎಂ. ಎಂ. ಹಿರೇಮಠ, ಜಯದೇವ ಮೆಣಸಗಿ, ವಿರುಪಾಪ್ಪ ಹೆಬ್ಬಳ್ಳಿ, ಮಲ್ಲಿಕಾರ್ಜುನ ಚಿಂಚಲಿ, ಜಗದೀಶ ಹುಬ್ಬಳ್ಳಿ, ವಿಠ್ಠಲ ಸಾರೆ ಇತರರು ಇದ್ದರು.