ತಿರುವನಂತಪುರ: ಚೀನಾದಲ್ಲಿ ಹಲವು ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಕರೋನಾ ವೈರಸ್ ಸೌದಿ ಅರೇಬಿಯಾದಲ್ಲಿರುವ ಕೇರಳದ 30 ಮಂದಿ ನರ್ಸ್ಗಳಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸೌದಿಯ ಅಭಾದ ಅಲ್ ಹಯಾತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ಗಳು ಈ ವೈರಸ್ಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳದ ದಾದಿಯರಲ್ಲಿ ವೈರಸ್ ಪತ್ತೆಯಾಗಿರುವುದು ತಿಳಿಯುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ವ್ಯವಹಾರ ಸಚಿವ ಜಯಶಂಕರ್ ಅವರಿಗೆ ಪತ್ರ ಬರೆದು ಕೂಡಲೇ ದಾದಿಯರ ಸಹಾಯಕ್ಕೆ ಮುಂದಾಗಬೇಕು. ಅವರಿಗೆ ಉತ್ತಮ ಚಿಕಿತ್ಸೆ ದೊರಕಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ವೈರಸ್ ಪತ್ತೆಯಾಗಿರುವ ನರ್ಸ್ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಪರೀಕ್ಷೆ ನಡೆಸಿಲ್ಲ ಹಾಗೂ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ನರ್ಸ್ಗಳು ಭಾರತೀಯ ರಾಯಭಾರ ಕಚೇರಿಗೆ ದೂರು ಕೂಡ ನೀಡಿದ್ದಾರೆ.
ಕೇರಳದ ನರ್ಸ್ಗಳಿಗೆ ವೈರಸ್ ಹರಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಾಲಿದಹ್ರಾನ್, ವೈರಸ್ ಪತ್ತೆಯಾಗಿರುವ ದಾದಿಯರಿಗೆ ಎಲ್ಲ ರೀತಿಯ ಪರೀಕ್ಷೆ ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ರಾಷ್ಟ್ರದ 100 ಮಂದಿ ನರ್ಸ್ಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 30 ಮಂದಿಗೆ ವೈರಸ್ ಹರಡಿದೆ. ಕೊಟ್ಟಾಯಂನ ಎಟ್ಟುಮನೂರ್ ಮೂಲದ 38 ವರ್ಷದ ಮಹಿಳೆಯಲ್ಲಿ ಮೊದಲು ವೈರಸ್ ಪತ್ತೆಯಾಯಿತು. ನಂತರ ಇವರ ಸಂಪರ್ಕಕ್ಕೆ ಬಂದ 29 ಮಂದಿಗೆ ವೈರಸ್ ಹರಡಿದೆ. ಹೀಗಾಗಿ ಇವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)