ನೆಲಮಂಗಲ: ಮಾದವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ರಾಜ್ಯ ಸಾರಿಗೆ ಐರಾವತ ಬಸ್ ಮತ್ತು 2 ಲಾರಿಗಳ ನಡುವಿನ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಬಸ್ಗೆ ಹಿಂದಿನಿಂದ ಬಂದ ಪೆಟ್ರೊಲ್ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಬಸ್ನಲ್ಲಿದದ 4 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿ ಚಾಲಕ ಅಂಜನ್ (35), ಸಹಾಯಕ ಆನಂದ್ (28) ಗಾಯಗೊಂಡಿದ್ದಾರೆ. ಕೆಲ ಹೊತ್ತಿನಲ್ಲೇ ಬೆಂಗಳೂರು ಕಡೆಯಿಂದ ನೀಲಗಿರಿ ಮರ ಸಾಗಿಸುತ್ತಿದ್ದ ಮತ್ತೊಂದು ಲಾರಿ ಪೆಟ್ರೋಲ್ ಟ್ಯಾಂಕರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಸುಧಾಕರ್ಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ತುಂಬಿದ್ದ ಲಾರಿ ಡಿಕ್ಕಿ ರಭಸಕ್ಕೆ ಟ್ಯಾಂಕರ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಪೆಟ್ರೋಲ್ ರಸ್ತೆ ಪಾಲಾಗಿದೆ. ಪೀಣ್ಯದ 2 ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ಮುಂಜಾಗ್ರತಾ ಕ್ರಮಕೈಗೊಂಡರು. ಗುರುವಾರವೂ 1 ಅಗ್ನಿಶಾಮಕ ವಾಹನ ಕಾವಲಿರಿಸಲಾಗಿದೆ.
ಪೊಲೀಸರ ಹರಸಾಹಸ: ಸರಣಿ ಅಪಘಾತಕ್ಕೀಡಾಗಿದ್ದ ರಾಜ್ಯ ಸಾರಿಗೆ ಬಸ್ ಮತ್ತು 2 ಲಾರಿ ಸ್ಥಳದಲ್ಲೇ ಇರುವುದು ಒಂದೆಡೆಯಾದರೆ ಟ್ಯಾಂಕರ್ ಲಾರಿಗೆ ಹಿಂಬಂದಿಯಿಂದ ಡಿಕ್ಕಿಹೊಡೆದ ರಭಸಕ್ಕೆ ಮರ ತುಂಬಿದ ಲಾರಿ ಮುಂಭಾಗ ಸಂಪೂರ್ಣ ಜಖಂಗೊಂಡು ಮರದ ತುಂಡುಗಳು ಲಾರಿ ಸೀಳಿಕೊಂಡು ಹೊರಬಂದಿದ್ದವು. ಇದರಿಂದ ಲಾರಿ ಕ್ಯಾಬಿನ್ನೊಳಗಿದ್ದ ಚಾಲಕನನ್ನು ಹೊರತರಲು ಹರಸಾಹಸ ಪಡಬೇಕಾಯಿತು.
ನಗರ ಠಾಣೆ ಎಸ್ಐ ಡಿ.ಆರ್.ಮಂಜುನಾಥ್, ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎಸ್ಐ ಹೊನ್ನೆಗೌಡ, ಸಂಚಾರಿ ಇನ್ಸ್ಪೆಕ್ಟರ್ ವೀರೇಂದ್ರಪ್ರಸಾದ್, ಎಎಸ್ಐ ಪ್ರಭು, ರಾಮಯ್ಯ, ಸಿಬ್ಬಂದಿ ಮಲ್ಲೇಶ್, ಮಂಜುನಾಥ್ ಮತ್ತಿತರರು ಇದ್ದರು.