ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸುಕೇಶ್ ಡಿ. ನಿರ್ದೇಶಿಸುತ್ತಿರುವ ಐತಿಹಾಸಿಕ “ಹಲಗಲಿ’ ಸಿನಿಮಾ ಪ್ರಾರಂಭದಿಂದಲೂ ಸುದ್ದಿಯಾಗುತ್ತಿದೆ. ಮೊದಲು ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಎರಡು ವರ್ಷಗಳ ಕಾಲ ಸಮಯ ನೀಡುವುದು ಕಷ್ಟಕರವೆಂದು ಅವರು ತಂಡದಿಂದ ಹೊರನಡೆದರು. ಆ ಬಳಿಕ ಡಾಲಿ ಧನಂಜಯ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಹಾಗಾದರೆ, “ಹಲಗಲಿ’ಗೆ ನಾಯಕಿ ಯಾರಿರಬಹುದು ಎಂಬ ಕುತೂಹಲ ಹಲವರಲ್ಲಿತ್ತು. ಇದೀಗ “ಕಾಂತಾರ’ ಚಿತ್ರದ ಲೀಲಾ, ಸಪ್ತಮಿ ಗೌಡ ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ರೆಡಿಯಾಗುತ್ತಿರುವ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.
ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮೂಡಿಬರಲಿರುವ ಈ ಚಿತ್ರದಲ್ಲಿ ಡಾಲಿ, ಸಪ್ತಮಿ ಜತೆ ಹಲವು ಬಹುಭಾಷಾ ನಟರು ಇರಲಿದ್ದಾರೆ. ಹಳ್ಳಿಯ ಬೃಹತ್ ಸೆಟ್ಗಳನ್ನು ನಿರ್ಮಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ರಾಷ್ಟ್ರಪ್ರಶಸ್ತಿ ವಿಜೇತ ಸಾಹಸ ನಿರ್ದೇಶಕ “ಕೆಜಿಎ್’ ಸರಣಿಯ ವಿಕ್ರಮ್ ಮೋರ್ ಸಾಹಸ ಸಂಯೋಜನೆಯಲ್ಲಿ “ಹಲಗಲಿ’ ಮೂಡಿಬರಲಿದೆ.
ಹಲಗಲಿ ವೀರರ ಕಥೆ
ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಬಾಗಲಕೋಟೆಯ ಹಲಗಲಿ ಊರಿನ ಬೇಡರ ಕುರಿತ ಚಿತ್ರವಿದು. 1857ರ ಭಾರತದ ಮೊದಲ ಸ್ವಾತಂತ್ರ$್ಯ ಸಂಗ್ರಾಮದಿಂದ ಎಚ್ಚೆತ್ತ ಬ್ರೀಟಿಷ್ ಸರ್ಕಾರ, ಸಾರ್ವಜನಿಕರು ಶಸ್ತ್ರಗಳನ್ನು ಬಳಸದಂತೆ ನಿಯಮ ಜಾರಿಗೊಳಿಸಿ, ಜನರ ಬಳಿಯಿದ್ದ ಶಸ್ತ್ರಗಳನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು. ಸೈನಿಕರು ಹಾಗೂ ಶಿಕಾರಿಗಳಾಗಿದ್ದ ಹಲಗಲಿಯ ಜನ ಬ್ರಿಟಿಷರ ನಿಯಮ ವಿರೋಧಿಸಿದರು. ಆಗ 600 ಸೈನಿಕರ ಜತೆ ಬಂದ ಸಹಾಯಕ ಮ್ಯಾಜಿಸ್ಟ್ರೆಟ್ ವಿಲಿಯಮ್ ಹೆನ್ರಿ ಹೇವ್ಲಾಕ್ ಬೇಡರ ವಿರುದ್ಧ ಸಮರ ಸಾರಿದ. ಬೇಡರು ಮತ್ತು ಬ್ರಿಟಿಷರ ನಡುವೆ ಘೋರ ಕಾಳಗ ನಡೆದು, ಹೆನ್ರಿ ಬೇಡರ ಬಾಣಕ್ಕೆ ಬಲಿಯಾದ. ನಂತರ ಹೆಚ್ಚುವರಿ ಸೇನೆಯ ಸಹಾಯದೊಂದಿಗೆ ಬ್ರೀಟಿಷರು ರಾತ್ರೋರಾತ್ರಿ ಹಲಗಲಿಗೆ ಬೆಂಕಿ ಹಚ್ಚಿ, ಗುಂಡಿನ ದಾಳಿ ನಡೆಸಿ ನೂರಾರು ಜನರನ್ನು ಕೊಂದರು. ಅದೇ ಕಥೆಯನ್ನು ನಿರ್ದೇಶಕ ಸುಕೇಶ್ ಡಿ.ಕೆ. ಇದೀಗ ಸಿನಿಮಾ ರೂಪ ನೀಡುತ್ತಿದ್ದಾರೆ.