ಮುಂಬೈ: ನಗರದ ಮೂವರು ಪ್ರಮುಖ ಅಂಡರ್ವರ್ಲ್ಡ್ ಡಾನ್ಗಳಲ್ಲಿ ಕರೀಂ ಲಾಲ್ನನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಭೇಟಿಯಾಗಿದ್ದರು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ನೀಡಿದ ಹೇಳಿಕೆ ವಿವಾದವನ್ನೇ ಸೃಷ್ಟಿಸಿದೆ.
ಹಿಂದೆ ಮುಂಬೈ ಮೇಲೆ ಅಂಡರ್ವರ್ಲ್ಡ್ ಪ್ರಭಾವ ಹೇಗಿತ್ತು ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ವಿವರಿಸುವಾಗ ಈ ಹೇಳಿಕೆ ನೀಡಿದ್ದರು. ಆದರೆ ಅದು ವಿವಾದಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿದ್ದ ಸಂಜಯ್ ರಾವತ್, ಇತಿಹಾಸ ತಿಳಿಯದವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಕರೀಮ್ ಲಾಲ್ ಪಠಾಣ್ ಸಮುದಾಯದ ನಾಯಕರಾಗಿದ್ದು ಪಖ್ತುನ್ ಇ-ಹಿಂದ್ ಎಂಬ ಸಂಘಟನೆಯ ನೇತೃತ್ವ ವಹಿಸಿ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದ್ದರು. ಹಾಗಾಗಿ ಅನೇಕ ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಅವರಿಗೆ ಸಿಕ್ಕಿತ್ತು. ಅದರಲ್ಲಿ ಇಂದಿರಾಗಾಂಧಿ ಕೂಡ ಒಬ್ಬರು ಎಂದು ಹೇಳಿದ್ದರು.
ಅಷ್ಟೇ ಅಲ್ಲದೆ ಕಾಂಗ್ರೆಸ್ ನಾಯಕರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ನಾನದನ್ನು ವಾಪಸ್ ಪಡೆಯುತ್ತೇನೆ ಎಂದೂ ತಿಳಿಸಿದ್ದರು.
ಈಗ ಕರೀಮ್ ಲಾಲ್ನ ಸಮಕಾಲೀನ, ಮುಂಬೈನ ಇನ್ನೋರ್ವ ಅಂಡರ್ವರ್ಲ್ಡ್ ಡಾನ್ ಆಗಿದ್ದ, ಹಾಜಿ ಮುಸ್ತಾನ್ ಅವರ ದತ್ತುಪುತ್ರ ಸುಂದರ್ ಶೇಖರ್ ಅವರು ಸಂಜಯ್ ರಾವತ್ ಹೇಳಿಕೆಯನ್ನು ಪುಷ್ಠೀಕರಿಸಿದ್ದಾರೆ.
ಸಂಜಯ್ ರಾವತ್ ಹೇಳಿದ್ದು ಸರಿಯಾಗಿಯೇ ಇದೆ. ಇಂದಿರಾ ಗಾಂಧಿ ಕರೀಂ ಲಾಲ್ನನ್ನು ಭೇಟಿ ಮಾಡಿದ್ದರು. ಬರೀ ಇಂದಿರಾಗಾಂಧಿಯಷ್ಟೇ ಅಲ್ಲ. ಹಲವು ರಾಜಕೀಯ ವ್ಯಕ್ತಿಗಳು ಅಂಡರ್ವಲ್ಡ್ ಡಾನ್ಗಳನ್ನು ಭೇಟಿಯಾಗಲು ಬರುತ್ತಿದ್ದರು. ಹಾಜಿ ಮುಸ್ತಾನ್ ಉದ್ಯಮಿಯೂ ಆಗಿದ್ದರು. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರು ಹಾಜಿ ಮುಸ್ತಾನ್ಗೆ ಒಳ್ಳೆಯ ಸ್ನೇಹಿತರು ಆಗಿದ್ದರು ಎಂದು ಮತ್ತೊಂದು ಅಚ್ಚರಿಯ ವಿಷಯವನ್ನು ಸುಂದರ್ ಶೇಖರ್ ಹೊರಹಾಕಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್ ಕರೀಮ್ ಲಾಲ್ರನ್ನು ಭೇಟಿಯಾಗಿದ್ದರು: ಸಂಜಯ್ ರಾವತ್