
ಸಂಡೂರು: ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ ಧೀರ ಮಹಿಳೆ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಆಚರಿಸುವ ಮೂಲಕ ಅವರ ಸಾಧನೆ, ಸಾಹಸವನ್ನು ಜನರಿಗೆ ತಿಳಿಸಬೇಕಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ.ನಾಗನಗೌಡ ಹೇಳಿದರು. ಪಟ್ಟಣದ ಬಿಕೆಜಿ ಆವರಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯ ಪೂರ್ವಭಾವಿ ಸಭೆ ಕುರಿತು ಸೋಮವಾರ ಮಾತನಾಡಿದರು.
ಬಿಕೆಜಿ ಫೌಂಡೇಷನ್ನಿಂದ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಕಿತ್ತೂರು ರಾಣಿ ಚನ್ನಮ್ಮನ ಭಾವಚಿತ್ರ ನೀಡುವ ಮೂಲಕ ಈ ಬಾರಿ ಜಯಂತಿಯನ್ನು ಅದ್ದೂರಿಯಾಗಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಿಸಲಾಗುವುದು. ಎಲ್ಲ ಸಮುದಾಯದವರು ಭಾಗಿಯಾಗಿ ಜಯಂತ್ಯುತ್ಸವ ಯಶಸ್ವಿಗೊಳಿಸಲು ಕೋರಿದರು.
ಸಭೆಯ ಅಧ್ಯಕ್ಷತೆವಹಿಸಿದ್ದ ತಾಲೂಕು ಅಧ್ಯಕ್ಷ ರಮೇಶ್ ಗಡಾದ್ ಮಾತನಾಡಿ, ವಿಜಯೋತ್ಸವ ಯಾವ ರೀತಿ ಆಚರಿಸಬೇಕೆಂಬ ಬಗ್ಗೆ ತಹಸೀಲ್ದಾರ್ ಜತೆ ಚರ್ಚಿಸಿ ರೂಪುರೇಷಗಳನ್ನು ಸಿದ್ದಪಡಿಸಲಾಗುವುದು. ಜಯಂತಿಯನ್ನು ಅ.23ರಂದು ಪಟ್ಟಣದಲ್ಲಿ, ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಚರಿಸಲಾಗುವುದು. ಇದಕ್ಕೆ ಒಂದು ತಿಂಗಳು ಅವಕಾಶ ವಿರುತ್ತದೆ. ಇದರ ಅಂಗವಾಗಿ ಕ್ಲಸ್ಟರ್ ಮಟ್ಟದಲ್ಲಿ ಪ್ರಬಂಧಸ್ಪರ್ಧೆ, ಭಾಷಣ ಹಾಗೂ ವೇಷಭೂಷಣ ಸ್ಪರ್ಧೆ ನಡೆಸಿ ವಿಜೇತರಿಗೆ ತಾಲೂಕು ಕೇಂದ್ರದ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸಮಾಜದ ಮಾಜಿ ಅಧ್ಯಕ್ಷ ಪಿ.ರವಿಕುಮಾರ್ ಬಂಡ್ರಿ, ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ವಿಷಯ ಪ್ರಸ್ತಾಪಿಸಿದರು.
ಕಾರ್ಯದರ್ಶಿ ಬಸವರಾಜ ಬಣಕಾರ, ಮೇಲುಸೀಮೆ ಶಂಕ್ರಪ್ಪ ಮಾತನಾಡಿದರು. ಮಹಿಳಾ ಘಟಕದ ಮುಖಂಡರಾದ ಎಚ್.ಕೆ.ಪರಿಮಳಾ, ಕೆ.ಜಿ. ಅರುಂಧತಿ, ನೀಲಾಂಬಿಕೆ, ನೌಕರರ ಘಟಕದ ಮುಖಂಡ ಕೆ.ಬಿ.ಪ್ರಕಾಶ್, ಟಿ. ಮಹೇಶ್, ಸಕ್ರಪ್ಪ, ಅಪ್ಪೇನಳ್ಳಿ ಕುಮಾರಸ್ವಾಮಿ, ಚೋರನೂರು ರುದ್ರೇಶ್, ಎಚ್.ಕೆ. ಹಳ್ಳಿ ಯರ್ರಿಸ್ವಾಮಿಗೌಡ, ಎಚ್.ಮಹೇಶ್, ಕೆ.ತಿಪ್ಪೇಸ್ವಾಮಿ, ತಾಳೂರು ಬಂಡ್ರಿ ಲಿಂಗಪ್ಪ, ಸುಶೀಲಾನಗರ ಷಣ್ಮುಖಪ್ಪ, ಎಂ.ತಿಪ್ಪೇಸ್ವಾಮಿ, ನಾರಾಯಣಪುರ ಷಣ್ಮುಖಪ್ಪ ಇತರರಿದ್ದರು.