More

    ವಲಸಿಗ ನಗರನಿವಾಸಿಗಳು: ಬದಲಾಗಬೇಕಾದ ಹಳ್ಳಿಯ ಚಿತ್ರ

    ವಲಸಿಗ ನಗರನಿವಾಸಿಗಳು: ಬದಲಾಗಬೇಕಾದ ಹಳ್ಳಿಯ ಚಿತ್ರಕೆ.ವಿ.ಸುಬ್ಬಣ್ಣನವರು ತಾವು ಮೈಸೂರು ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಿನ ಒಂದು ಪ್ರಸಂಗವನ್ನು ತಮ್ಮ ‘ಕುವೆಂಪುಗೆ ಪುಟ್ಟ ಕನ್ನಡಿ’ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ: ಒಮ್ಮೆ ಕುವೆಂಪು ತಮ್ಮ ‘ಹೋಗುವೆನು’ ಕವಿತೆಯನ್ನು ವಾಚನ ಮಾಡುತ್ತ ‘ಹೋಗುವೆನು ನಾ, ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ/ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ/ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ/ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ’ ಎಂಬ ಸಾಲುಗಳನ್ನು ಬಲು ಗಂಭೀರವಾಗಿ, ಭಾವುಕರಾಗಿ ಎಳೆದೆಳೆದು ಹೇಳುತ್ತಿದ್ದಾಗ ಹಿಂದಿನಿಂದ, ‘ಬೇಡ ಅಂದೋರ್ಯಾರು, ಹೋಗಬಹುದಲ್ಲ’ ಅಂತ ಗೆಳೆಯರೆಲ್ಲ ತಮ್ಮೊಳಗೇ ತಮಾಷೆ ಮಾಡಿಕೊಂಡಿದ್ದರಂತೆ.

    ಅದು ‘ಆಧುನಿಕ ವಿದ್ಯಾಭ್ಯಾಸವನ್ನು ಬಿಟ್ಟು ಯುವಕರು ಹಳ್ಳಿಗಳಿಗೆ ಹಿಂದಿರುಗಿ’ ಎಂದು ಗಾಂಧಿ ಕರೆ ಕೊಟ್ಟಿದ್ದ ಕಾಲ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಈ ಬಗೆಯ ನಿಲವು ಆಗ ಪ್ರಚಲಿತದಲ್ಲಿತ್ತು. ಇಂಗ್ಲಿಷ್ ಲೇಖಕ, ಸಮಾಜವಾದಿ ಚಿಂತಕ ಎಡ್ವರ್ಡ್ ಕಾರ್ಪೆಂಟರ್ (1844-1929) ‘ಹಳ್ಳಿಗೆ ಹಿಂದಿರುಗಿ’ ಎಂಬ ಚಳವಳಿಯನ್ನೇ ಹುಟ್ಟುಹಾಕಿದ್ದ. ಸ್ವತಃ ಆತನೇ ಹಳ್ಳಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ. ಈತ ವಾಲ್ಟ್ ವ್ಹಿಟಮನ್​ನ ಆಪ್ತ ಗೆಳೆಯನಾಗಿದ್ದುದು ಮಾತ್ರವಲ್ಲ, ಆತನಿಂದ ಪ್ರಭಾವಿತನಾಗಿದ್ದ. ವ್ಹಿಟಮನ್ ಯಂತ್ರನಾಗರಿಕತೆಯ ಕಡುದ್ವೇಷಿ, ಪ್ರಕೃತಿಯ ಆರಾಧಕ; ಸಮಾಜವಾದೀ ವ್ಯವಸ್ಥೆಯನ್ನು ತರಲು ರಾಜಕೀಯ ಕ್ರಾಂತಿಗಿಂತ ಗ್ರಾಮೀಣ ಬದುಕಿನಲ್ಲಿ ಬದಲಾವಣೆ ತರುವುದೇ ಸರಿಯಾದ ಮಾರ್ಗವೆಂದು ನಂಬಿದ್ದ. ಗಾಂಧೀಜಿ ಮೇಲೆ ಪ್ರಭಾವ ಬೀರಿದ್ದ ಜಾನ್ ರಸ್ಕಿನ್(1819-1900) 19ನೆಯ ಶತಮಾನದ ಆಕ್ರಮಣಶೀಲ ಬಂಡವಾಳಶಾಹಿಯನ್ನು ಕಟುವಾಗಿ ವಿರೋಧಿಸುತ್ತ ಪ್ರಕೃತಿಯ ಸಾನಿಧ್ಯದಲ್ಲಿ ಸತ್ಯದರ್ಶನವಾಗುತ್ತದೆಂದು ಪ್ರತಿಪಾದಿಸಿದ್ದ. ಟಾಲ್​ಸ್ಟಾಯ್ನ ‘ದ ಕಿಂಗ್​ಡಮ್ ಆಫ್ ಗಾಡ್ ಈಸ್ ವಿಥಿನ್ ಯು’ ಹಾಗೂ ರಸ್ಕಿನ್​ನ ‘ಅನ್​ಟು ದಿಸ್ ಲಾಸ್ಟ್’ ಗಾಂಧೀಜಿಯವರನ್ನು ಗಾಢವಾಗಿ ಪ್ರಭಾವಿಸಿದ ಕೃತಿಗಳು.

    ಯಂತ್ರಯುಗದ ನಾಗರಿಕತೆಯನ್ನು ಅದರ ಆರಂಭದಲ್ಲೇ ಕಟುವಾಗಿ ವಿರೋಧಿಸಿದವರಲ್ಲಿ ಆಳವಾದ ಧಾರ್ವಿುಕ ಶ್ರದ್ಧೆಯ ಅನುಭಾವಿ ಕವಿ ವಿಲಿಯಂ ಬ್ಲೇಕ್(1757-1827) ಕೂಡ ಒಬ್ಬ. ಜನರ ಲಾಭಬಡುಕತನ, ಭೋಗಲಾಲಸೆಗಳ ಬಗ್ಗೆ ತೀವ್ರ ತಿರಸ್ಕಾರವಿದ್ದ ಬ್ಲೇಕ್ ಬಂಡವಾಳಶಾಹಿ ಉತ್ಪಾದನಾ ಪದ್ಧತಿಯನ್ನು ‘ಕರಾಳ ಸೇಟನ್ನನ ಮಿಲ್ಲುಗಳು’ ಎಂದು ಕರೆದಿದ್ದ.

    ಕುವೆಂಪು ಅವರಿಗೆ ಗಾಂಧೀಜಿಯವರ ಅಭಿಪ್ರಾಯ ಸಮ್ಮತವಾಗಿತ್ತು. ಆ ಕಾಲದ ಅನೇಕ ಸಂವೇದನಾಶೀಲ ಮನಸ್ಸುಗಳಿಗೆ ಈ ನಿಲವು ಒಪ್ಪಿಗೆಯಾಗಿತ್ತು. ಕಾರಂತರ ‘ಮರಳಿ ಮಣ್ಣಿಗೆ’, ‘ಬೆಟ್ಟದಜೀವ’ ಕಾದಂಬರಿಗಳನ್ನು ನಾವಿಲ್ಲಿ ನೆನಪಿಸಿ ಕೊಳ್ಳಬಹುದು. ಆದರೆ ಆ ಕಾಲದ ಭಾರತೀಯ ಸಂದರ್ಭ ಸರಳವಾಗಿರಲಿಲ್ಲ, ಅನೇಕ ತೊಡಕುಗಳಿಂದ ಕೂಡಿ ಸಂಕೀರ್ಣವಾಗಿತ್ತು. ಇದನ್ನು ಕುವೆಂಪು ತಮ್ಮದೇ ರೀತಿಯಲ್ಲಿ ಎದುರಿಸಿದ್ದಾರೆ. ಕುವೆಂಪು ಆಧುನಿಕ ಶಿಕ್ಷಣದಿಂದಾಗಿಯೇ ಸಾಮಾಜಿಕವಾಗಿ ಮಹತ್ವದ ಸ್ಥಾನ ಗಳಿಸಿದ್ದರು. ಮುಂದುವರಿದ ವರ್ಗದೊಡನೆ ಸಮನಾಗಿ ನಿಂತು ಹೋರಾಡುವ ಶಕ್ತಿ ಪಡೆದುಕೊಂಡಿದ್ದರು. ಇವರ ಸಾಧನೆಯು ಎಷ್ಟು ವೈಯಕ್ತಿಕವೋ ಅಷ್ಟೇ ಸಾಮಾಜಿಕ ಮಹತ್ವದ ಸಂಗತಿಯೂ ಆಗಿತ್ತು. ಹಿಂದುಳಿದ ಸಮುದಾಯದ ಆಶೋತ್ತರಗಳನ್ನು ತನ್ನೊಡನೆ ಹೊತ್ತು ತಂದಿದ್ದ ಕುವೆಂಪು ಅದಕ್ಕೆ ತಕ್ಕಂತೆ ನಡೆದುಕೊಂಡು ಸಾಧಿಸಿ ತೋರಿಸುವುದೂ ಅಗತ್ಯವಿತ್ತು. ಹಿಂದುಳಿದ ಸಮುದಾಯಗಳಿಗೆ ಹೊಸ ಆಸೆ, ಭರವಸೆ, ಭದ್ರತೆಗಳನ್ನು ಒದಗಿಸುವ ಜವಾಬ್ದಾರಿಯೂ ಅವರ ಮೇಲಿತ್ತು. ಹಳ್ಳಿಗೆ ಹೋಗುವ ಹಂಬಲ, ನಗರದಲ್ಲೇ ಇದ್ದು ಸಾಧಿಸಿ, ಸಮುದಾಯವೊಂದಕ್ಕೆ ಆತ್ಮವಿಶ್ವಾಸ ಮೂಡಿಸಬೇಕಾದ ಹೊಣೆಗಾರಿಕೆ ಈ ದ್ವಂದ್ವ ಕುವೆಂಪು ಅವರಿಗಿತ್ತು.

    ಇದನ್ನೂ ಓದಿ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷವಲ್ಲ! ಮತ್ತೆಷ್ಟು ಗೊತ್ತಾ?

    ‘ಕಾನೂರು ಹೆಗ್ಗಡಿತಿ’ಯ ಮೊದಲ ಅಧ್ಯಾಯ ಓದಿದ ಯಾರಿ ಗಾದರೂ ಅಲ್ಲಿ ಬರುವ ವರ್ಣನೆ ಕುವೆಂಪು ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಆ ಬಿಂಬವನ್ನು ಸಂಭ್ರಮದಿಂದ ವರ್ಣಿಸಿದಂತಿದೆ. ಹೂವಯ್ಯ ಒಂದು ರೀತಿಯಲ್ಲಿ ಕುವೆಂಪು ಪ್ರತಿರೂಪವೇ! ಕಾದಂಬರಿಯ ಹೂವಯ್ಯನಿಗೂ ಕುವೆಂಪು ಅವರಿಗೂ ಅನೇಕ ಸಾಮ್ಯಗಳಿವೆ. ಆದರೆ ಬದುಕಿನ ಪ್ರಮುಖ ಘಟ್ಟದಲ್ಲಿ ಭಿನ್ನ ದಾರಿಗಳನ್ನು ಹಿಡಿಯುತ್ತಾರೆ. ಮೈಸೂರಿನಲ್ಲಿ ಓದುತ್ತಿದ್ದಾಗ ಇಬ್ಬರಿಗೂ ಹಣ, ಮನೆಯ ಒತ್ತಡ ಇತ್ಯಾದಿ ತೊಂದರೆಗಳು ಎದುರಾಗಿದ್ದವು. ಹೂವಯ್ಯನು ಬೇರೆ ದಾರಿ ಕಾಣದೆ ಊರಿಗೆ ಮರಳಿ ಬಂದು ನೆಲಸುತ್ತಾನೆ. ಆದರೆ, ಕುವೆಂಪು ಮಾತ್ರ ಹಠ ಹಿಡಿದು ಊರಿನ ಆಸಿಪಾಸ್ತಿ, ಸಂಬಂಧಗಳನ್ನು ಲೆಕ್ಕಿಸದೆ ಓದು ಮುಂದುವರಿಸುತ್ತಾರೆ. ನಂತರವೂ ನಗರದಲ್ಲೇ ನೆಲೆಸುತ್ತಾರೆ.

    ಇದನ್ನು ಗಮನಿಸಿದಾಗ ಸುಬ್ಬಣ್ಣ ಹೇಳುವಂತೆ -ಕುವೆಂಪು ತನ್ನೆದುರಿಗಿದ್ದ ಎರಡು ಮಾರ್ಗಗಳಲ್ಲಿ ಒಂದನ್ನು ತಾನು ಆರಿಸಿಕೊಂಡು ಇನ್ನೊಂದನ್ನು ಹೂವಯ್ಯ ನಿಗೆ ನೀಡಿದರು. ತಾನು ನಗರದಲ್ಲಿ ಉಳಿದು ಹೂವಯ್ಯನನ್ನು ಹಳ್ಳಿಗೆ ಕಳಿಸುವ ಮೂಲಕ ತಮ್ಮ ದ್ವಂದ್ವಕ್ಕೆ ಪರಿಹಾರ ಕಂಡುಕೊಂಡರು ಮತ್ತು ಈ ಎರಡೂ ಮಾರ್ಗಗಳು ಸಮಾನ ಮುಖ್ಯವೆಂದು ಪ್ರತಿಪಾದಿಸಿದರು.

    ಈಗ ನನಗೆ ಈ ಎರಡೂ ಮಾರ್ಗಗಳಿಗಿಂತ ಭಿನ್ನವಾದ ಮೂರನೆಯ ಮಾರ್ಗ ಮುಖ್ಯವೆನ್ನಿಸಿದೆ. ಕುವೆಂಪು ಅವರಂತೆಯೇ ಹಳ್ಳಿಗಳ ಅನೇಕ ತರುಣರು ಆಧುನಿಕ ಶಿಕ್ಷಣಕ್ಕೆಂದು ನಗರಕ್ಕೆ ಬಂದು ನಗರವಾಸಿಗಳೇ ಆಗಿದ್ದಾರೆ. ಆದರೆ ಅವರ ಭಾವಕೋಶದಲ್ಲಿ ಹಳ್ಳಿಗಳು ಇನ್ನೂ ಜೀವಂತವಾಗಿವೆ. ಹುಟ್ಟೂರಿನ ಬಗೆಗಿನ ಅಭಿಮಾನ ಎಲ್ಲ ಕಾಲದಲ್ಲಿಯೂ, ಎಲ್ಲರಲ್ಲಿಯೂ ಸಾಮಾನ್ಯವಾಗಿರುತ್ತದೆ. ‘ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂಬ ಪಂಪನ ಮಾತುಗಳು ಇಲ್ಲಿ ನೆನಪಾಗುತ್ತಿವೆ. ಆದರೆ, ನಾಗರಿಕ ಜಗತ್ತಿನ ಸವಲತ್ತುಗಳನ್ನು ಪಡೆದ ನಗರವಾಸಿಗಳು ಹೂವಯ್ಯನ ಹಾಗೆ ಹಳ್ಳಿಗೆ ಹೋಗಿ ನೆಲೆಸಲು ಬಯಸುವವರಲ್ಲ; ಆ ಅನಿವಾರ್ಯತೆಯೂ ಅವರಿಗಿಲ್ಲ. ನಗರದಲ್ಲಿಯೇ ಹುಟ್ಟಿ ಬೆಳೆದ ತೇಜಸ್ವಿಯಂಥವರು ಸಾಂಸ್ಕೃತಿಕ ನಗರಿ ಮೈಸೂರನ್ನು ಬಿಟ್ಟು ಮೂಡಿಗೆರೆಯಲ್ಲಿ ಕೃಷಿಕರಾಗಿ ನೆಲೆಸಿ, ನಾಗರಿಕ ಜಗತ್ತಿನ ಜೊತೆ ಸಂಪರ್ಕವಿರಿಸಿಕೊಂಡದ್ದು; ಆಧುನಿಕ ಶಿಕ್ಷಣ ಪಡೆದೂ ತಮ್ಮ ಹಳ್ಳಿ ಹೆಗ್ಗೋಡಿಗೆ ಹೋಗಿ ಸುಬ್ಬಣ್ಣ ಅದನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು, ನಿಂತ ನೆಲದಲ್ಲಿಯೇ ಜಗತ್ತನ್ನು ಕಂಡದ್ದು ನಮ್ಮ ಕಾಲದ ವಿಶಿಷ್ಟ ಘಟನೆಗಳು. ಆದರೆ , ನಮ್ಮ ತಲೆಮಾರಿನ ಬಹುತೇಕರಿಗೆ ಹಳ್ಳಿಯ ಬಗ್ಗೆ ಗಾಂಧಿಗಿದ್ದ ಪ್ರೀತಿಯೂ ಇಲ್ಲ; ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ಅಂಥವರಿಗಿದ್ದ ಆಕ್ರೋಶಭರಿತ ಕೋಪವೂ ಅಲ್ಲ; ಬದಲಾಗಿ ಸ್ಯಾಮ್ ಪಿತ್ರೊಡಾ ಅಂಥ ವರಿಗಿರುವ ಶೀತಲ ನಿರ್ಲಕ್ಷ್ಯ ಮಾತ್ರವಿದ್ದು ಹಳ್ಳಿಯೂ ಅವರಿಗೆ ಒಂದು ಸರಕು.

    ಗ್ರಾಮವೆಂಬುದು ಕೇವಲ ಜನವಸತಿಯ ಒಂದು ಪ್ರದೇಶವಲ್ಲ. ನಮ್ಮೊಳಗೇ ಇರುವ ಒಂದು ಪ್ರಜ್ಞೆ. ಈ ಪ್ರಜ್ಞೆಯೇ ನಾಶವಾಗಿದೆ. ಸ್ವಾರ್ಥಸಾಧಕ ರಾಜಕಾರಣಿಗಳಿಗೆ, ಬಂಡವಾಳಶಾಹಿಗಳಿಗೆ ಅದೂ ಮಾರಾಟದ ವಸ್ತುವಾಗಿದೆ. ಗ್ರಾಮತತ್ವವೆಂದರೆ ಅದಕ್ಕೆ ತನ್ನದೇ ಜ್ಞಾನದ ವಿಶಿಷ್ಟ ರೂಪಗಳಿವೆ; ಜೀವನ ದೃಷ್ಟಿಯಿದೆ; ಅದು ತನಗೇ ವಿಶಿಷ್ಟವಾದ ಅಭಿವ್ಯಕ್ತಿ ಮಾದರಿಯೊಂದನ್ನು ರೂಪಿಸಿಕೊಂಡಿರುತ್ತದೆ. ಇದನ್ನು ಅರ್ಥಮಾಡಿಕೊಂಡಾಗ ಭೋಗಲಾಲಸೆಯ ಆಧುನಿಕ ನಾಗರಿಕತೆ ಒಡ್ಡಿರುವ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

    ಮೂರನೆಯ ಮಾರ್ಗವೆಂದೆ: ಹಳ್ಳಿಗಳಿಂದ ನಗರಕ್ಕೆ ಬಂದು ಇಲ್ಲಿಯೇ ನೆಲೆ ನಿಂತಿರುವ ವಲಸಿಗ ನಗರವಾಸಿಗಳನ್ನು ಮತ್ತೆ ಹಳ್ಳಿಗಳಿಗೆ ಹಿಂದಿರುಗಿ ಎಂದು ಹೇಳುವುದು ಕಷ್ಟ. ಅದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಇದಕ್ಕೆ ಅಪವಾದಗಳು ಇರಬಹುದು. ಇತ್ತೀಚೆಗೆ ಹೊಸ ಮಾದರಿಯೊಂದು ಬಳಕೆಗೆ ಬರುತ್ತಿದೆ. ನಗರವಾಸಿಗಳು ಗ್ರಾಮೀಣ ಪರಿಸರದಲ್ಲಿ ಭೂಮಿಕೊಂಡು ಅದನ್ನು ವಾರಾಂತ್ಯದ ವಿಹಾರತಾಣವಾಗಿ ರೂಪಾಂತರಿಸಿಕೊಂಡು ನಗರದ ರೋಗವನ್ನು ಹಳ್ಳಿಗಳಿಗೂ ಹಬ್ಬಿಸುತ್ತಿರುವ ಬಗೆ. ಈ ರೀತಿಯಲ್ಲಿ ಹಳ್ಳಿಗಳತ್ತ ಹೊರಳುತ್ತಿರುವುದು ನಗರಕ್ಕೆ ವಲಸೆ ಬರುವುದಕ್ಕಿಂತ ಹೆಚ್ಚು ಅಪಾಯಕಾರಿ. ಬದಲಿಗೆ- ಹಳ್ಳಿಗಳಿಂದ ಬಂದು ನಗರದಲ್ಲಿ ಸುಸ್ಥಿತಿಯಲ್ಲಿರುವ ಅನೇಕರು, ನಗರಗಳಲ್ಲಿಯೇ ಇದ್ದು, ತಮ್ಮ ಹಳ್ಳಿಗಳ ಜೊತೆ ಸಂಪರ್ಕ ಸಾಧಿಸಿಕೊಂಡು, ಅದರ ಸಮಗ್ರ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸುವುದು ಸಮಂಜಸ ಮಾರ್ಗವೆನ್ನಿಸುತ್ತದೆ. ಹಳ್ಳಿಗಳಿಂದ ಬಂದ ಅನೇಕರು ಉನ್ನತ ಅಧಿಕಾರದಲ್ಲಿದ್ದಾರೆ; ಪ್ರಭಾವೀ ವ್ಯಕ್ತಿಗಳಾಗಿದ್ದಾರೆ; ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ಹೊಂದಿದ್ದಾರೆ; ಇಂಥವರು ತಮ್ಮ ಹುಟ್ಟೂರಿನ ಬಗ್ಗೆ ಕಿಂಚಿತ್ ಆಸಕ್ತಿ ವಹಿಸಿದರೂ ದೊಡ್ಡ ಮಟ್ಟದ ಬದಲಾವಣೆ ತರಲು ಸಾಧ್ಯ.

    ಇದನ್ನೂ ಓದಿ: ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

    ಹಳ್ಳಿಗಳ ಅಭಿವೃದ್ಧಿ ಹೇಗೆ? ಸಾಧ್ಯತೆಗಳನ್ನು ಗಮನಿಸೋಣ: ನಗರದಲ್ಲಿ ನೆಲೆಸಿರುವ ವಾಣಿಜ್ಯೋದ್ಯಮಿ ತನ್ನ ಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅದನ್ನು ಅಭಿವೃದ್ಧಿಪಡಿಸಿದರೆ ಹಳ್ಳಿಯ ಅನೇಕ ಬಡಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ದೊರಕಿ ಆ ಹಳ್ಳಿಯ ಚಿತ್ರಣವೇ ಬದಲಾಗಬಹುದು. ಸರ್ಕಾರದಲ್ಲಿ ಉನ್ನತ ಹಂತದಲ್ಲಿರುವ ಅಧಿಕಾರಿಯೊಬ್ಬ ಸರ್ಕಾರದ ಸವಲತ್ತುಗಳು ತನ್ನ ಹಳ್ಳಿಯ ಅರ್ಹರಿಗೆ ದೊರಕಲು ನೆರವಾದರೆ ಪರಿಸ್ಥಿತಿ ಸುಧಾರಿಸಬಹುದು; ನಗರದ ಶ್ರೀಮಂತನೊಬ್ಬ ತನ್ನ ಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಿಸಿ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವಾದರೆ ಅಲ್ಲಿಯ ಇಂದಿನ ಚಿತ್ರವೇ ಬದಲಾಗಿಬಿಡಬಹುದು. ನಮ್ಮ ಸಾರ್ವಜನಿಕ ಸಂಸ್ಥೆ, ಕಾರ್ಖಾನೆ, ಕಂಪನಿಗಳಲ್ಲಿ ಸಾಮಾಜಿಕ ಕಾಳಜಿಗೆಂದೇ ಹಣ ವಿನಿಯೋಗ ಮಾಡಬೇಕೆಂಬ ನಿಯಮವಿದೆ. ಇಂತಹ ಕಂಪನಿಗಳು ಇಡೀ ಹಳ್ಳಿಯನ್ನೇ ದತ್ತು ತೆಗೆದುಕೊಂಡು ಮೂಲಸೌಕರ್ಯಗಳನ್ನು ಒದಗಿಸಬಹುದು. ಇವು ಕೆಲವು ನಿದರ್ಶನಗಳಷ್ಟೆ! ದಾರಿ ನೂರಾರಿವೆ ನೆರವಿಗೆ…ಮನಸ್ಸು ಬೇಕಷ್ಟೆ! ಆದರೆ ಇಲ್ಲಿಯೂ ಒಂದು ಆತಂಕವಿದೆ. ಹೀಗೆ ನೆರವಾಗುವವರು ಮುಂದೆ ಇಡೀ ಹಳ್ಳಿಯನ್ನೇ ತಮ್ಮ ವಸಾಹತು ಮಾಡಿಕೊಳ್ಳುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.

    ಇದೆಲ್ಲಕ್ಕಿಂತ ಮುಖ್ಯವಾದುದು ಗ್ರಾಮೀಣ ಬದುಕಿನಲ್ಲಿ ಸಹಜವಾಗಿದ್ದ ಸಹಬಾಳ್ವೆ ಹಾಗೂ ಸ್ವಾಯತ್ತ ಬದುಕಿನ ಪರಿಕಲ್ಪನೆಯ ಅರಿವನ್ನು ಜಾಗೃತಿಗೊಳಿಸುವ ಅಭಿಯಾನ. ಈಗಲೂ ನನ್ನ ಹಳ್ಳಿಯಲ್ಲಿ ಯಾರದ್ದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಸಂಸ್ಕಾರವಾಗುವವರೆಗೆ ಯಾರ ಮನೆಯಲ್ಲೂ ಅಡುಗೆ ಮಾಡುವುದಿಲ್ಲ. ಇಡೀ ಊರು ಆ ಮನೆಯವರ ದುಃಖದಲ್ಲಿ ಪಾಲ್ಗೊ ಳ್ಳುತ್ತದೆ. ಕೆಲವರ್ಷಗಳವರೆಗೆ ಸುಗ್ಗಿಯ ಸಮಯದಲ್ಲಿ ಬೇರೆ ಬೇರೆ ಕಸುಬು ಮಾಡುವವರಿಗೆ- ಕುಂಬಾರ, ಅಗಸ, ಅಕ್ಕಸಾಲಿಗ, ಬಡಗಿ, ಪೂಜಾರಿ ಇತ್ಯಾದಿ- ರಾಗಿ ಅಥವಾ ಭತ್ತದ ಹೊರೆಯನ್ನು ಕೊಡುವ ರೂಢಿಯಿತ್ತು. ಒಬ್ಬ ಸಾಮಾನ್ಯ ರೈತ ಬೆಳೆಯುವಷ್ಟೇ ದವಸ ಧಾನ್ಯ ಆತನಿಗೆ ದೊರಕುತ್ತಿತ್ತು. ಆತ ಇಡೀ ಊರಿನ ಜನಕ್ಕೆ ಉಚಿತವಾಗಿ ತನ್ನ ಕುಶಲ ಕಸುಬಿನ ಅನುಕೂಲ ಒದಗಿಸುತ್ತಿದ್ದ. ಇದು ಗ್ರಾಮತತ್ವದ ಸಹಬಾಳ್ವೆ ಹಾಗೂ ಸ್ವಾಯತ್ತತೆಯ ಅತ್ಯುತ್ತಮ ಮಾದರಿ. ಈಗ ಅದೇ ರೀತಿ ಸಾಧ್ಯವಿಲ್ಲದಿದ್ದರೂ ಅದರ ಹಿಂದಿನ ಆಶಯಗಳನ್ನು ಅಳವಡಿಸಿಕೊಳ್ಳಬಹುದು.

    ಈಗಲೂ ಗ್ರಾಮ ಪಂಚಾಯಿತಿಯ ಅಧಿಕಾರದಲ್ಲಿ ರಾಜಕೀಯ ಪಕ್ಷಗಳಿಗೆ ಅಧಿಕೃತ ಪ್ರವೇಶವಿಲ್ಲ. ಆದರೆ ಅಲ್ಲಿಯೂ ಅಧಿಕಾರ ರಾಜಕಾರಣದ ಕಬಂಧಬಾಹು ಕೈ ಚಾಚಿ, ಸಹಬಾಳ್ವೆಯ ಪರಿಕಲ್ಪನೆಯನ್ನು ನಾಶ ಮಾಡಿ ಒಡೆದು ಆಳುವ ಸಂಚು ರೂಪುಗೊಳ್ಳುತ್ತಿದೆ. ಹಳ್ಳಿಯ ಸಂವೇದನಾಶೀಲ ಮನಸ್ಸುಗಳು ತಮ್ಮ ಹಳ್ಳಿಯ ಸಮಗ್ರ ಏಳಿಗೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಸಂಚುಗಳಿಗೆ ಬಲಿಯಾಗುವುದು ತಪ್ಪಬೇಕು. ಶುದ್ಧೀಕರಣ ಕ್ರಿಯೆ ಹಳ್ಳಿಗಳಿಂದಲೇ ಆರಂಭವಾಗಬೇಕು. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬುದು ನಮ್ಮ ಹಳ್ಳಿಗರೇ ಸೃಷ್ಟಿಸಿದ ಗಾದೆಮಾತು.

    (ಲೇಖಕರು ಖ್ಯಾತ ವಿಮರ್ಶಕರು)

    ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!

    ಯುವ ಧೂಮಪಾನಿಗಳಿಗಿದು ‘ಉಸಿರುಗಟ್ಟಿಸೋ’ ಸುದ್ದಿ; ಅವರನ್ನೇ ಗುರಿಯಾಗಿಸಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!

    ಪ್ರಿಯತಮನಿಗೆ ಜಾಮೀನು ಕೊಡಿಸಲು ಒಪ್ಪದ ಅಪ್ಪ; ಸಿಟ್ಟಿಗೆದ್ದ ಅಪ್ರಾಪ್ತೆ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts