ಬೆಂಗಳೂರು: ಭಾರಿ ವಿವಾದ ಸೃಷ್ಟಿಸಿರುವ ಹಿಜಾಬ್ ಗಲಾಟೆಗೆ ಬ್ರೇಕ್ ಹಾಕಲು ಪಿಯುಸಿ ಬೋರ್ಡ್ ನಿರ್ಧರಿಸಿದ್ದು, ಈ ಕುರಿತು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಅದೇನೆಂದರೆ, ಈ ವರ್ಷದಿಂದಲೇ ಜಾರಿಗೆ ಬರುವಂತೆ ಪಿಯು ವಿದ್ಯಾರ್ಥಿಗಳಿಗೆ ಇನ್ಮುಂದೆ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಪಿಯು ಕಾಲೇಜುಗಳಿಗೆ ಇದು ಅನ್ವಯ ಆಗಲಿದೆ. ಕೆಲವು ಕಾಲೇಜುಗಳಲ್ಲಿ ಇದಾಗಲೇ ಸಮವಸ್ತ್ರ ಕಡ್ಡಾಯವಾಗಿದೆ. ಆದರೆ ಇನ್ನು ಕೆಲವು ಕಾಲೇಜುಗಳಲ್ಲಿ ಸಮವಸ್ತ್ರ ಇಲ್ಲದ್ದರಿಂದ ವಿದ್ಯಾರ್ಥಿಗಳು ಕಲರ್ ಡ್ರೆಸ್ ಹಾಕಿಕೊಂಡು ಬರುತ್ತಿದ್ದರು. ಆದರೆ ಇನ್ಮುಂದೆ ಎಲ್ಲರಿಗೂ ಸಮವಸ್ತ್ರ ಕಡ್ಡಾಯವಾಗಿದೆ.
ಒಂದು ವೇಳೆ ಆಡಳಿತ ಮಂಡಳಿ/ಸಿಡಿಸಿ ಸಮವಸ್ತ್ರ ನಿಗದಿ ಪಡಿಸದೇ ಇದ್ದಲ್ಲಿ ಸಮಾನತೆ ಮತ್ತು ಏಕತೆ ಕಾಪಾಡಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದ ಉಡುಪು ಧರಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿಯು ಬೋರ್ಡ್ ಕಾಲೇಜು ಪ್ರವೇಶ ಸಂಬಂಧ 128 ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿಶೇಷವಾಗಿ ಸಮವಸ್ತ್ರದ ಬಗ್ಗೆ ಸೂಚನೆ ನೀಡಲಾಗಿದೆ.
ಮೇ 20ರಿಂದ ದಾಖಲಾತಿ
ಮೇ 20 ರಿಂದ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 1 ರಿಂದ ದ್ವಿತೀಯ ಪಿಯುಸಿ ಪ್ರಕ್ರಿಯೆ ಆರಂಭಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಯ ಮಕ್ಕಳಿಗೆ ಪಠ್ಯಕ್ರಮ ಬೋಧನಾ ಪ್ರಕ್ರಿಯೆ ಜೂನ್ 9 ರಿಂದ ಆರಂಭವಾಗಲಿದೆ.
2022-23ನೇ ಸಾಲಿನ ಶೈಕ್ಷಣಿಕ ಅವಧಿ ಜೂನ್ 9 ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಎರಡನೇ ಅವಧಿ ಅಕ್ಟೋಬರ್ 13 ರಿಂದ 2023ರ ಮಾರ್ಚ್ 31ರವರೆಗೆ ನಡೆಸಲು ನಿಗದಿಪಡಿಸಲಾಗಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಜೂನ್ 30 ರವರೆಗೆ ಮಕ್ಕಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಜೂನ್ 9 ರಿಂದ ಆರಂಭವಾಗಲಿದೆ.
ಜೂನ್ 15 ರವರೆಗೆ ಪ್ರಥಮ ಪಿಯುಗೆ ದಂಡ ಶುಲ್ಕವಿಲ್ಲದೆ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜೂನ್ 1 ರಿಂದ 15ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ದಂಡ ಶುಲ್ಕದೊಂದಿಗೆ ಜೂನ್ 30 ರವರೆಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 1 ರಿಂದ 12 ರವರೆಗೆ ಮಧ್ಯಂತರ ರಜೆ ಇರಲಿದೆ. ಏಪ್ರಿಲ್ 1 ರಿಂದ ಬೇಸಿಗೆ ರಜೆ ಆರಂಭವಾಗಲಿದೆ.
ಪ್ರವೇಶಾತಿಗೆ ಅರ್ಹ ಕಾಲೇಜುಗಳಲ್ಲಿ ಪ್ರತಿ ಸಂಯೋಜನೆಗೆ 75-80 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿಗದಿಪಡಿಸಲಾಗಿದೆ, ಇದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ, ದಾಖಲಾತಿಯನ್ನು ಅನುಮೋದಿಸುವುದಿಲ್ಲ. ಮತ್ತು ಕಳೆದ ಮೂರು ವರ್ಷಗಳಲ್ಲಿ ಶೂನ್ಯ ದಾಖಲಾತಿ ಹೊಂದಿರುವ ಕಾಲೇಜುಗಳು ಪ್ರವೇಶಾತಿ ಮಾಡಿಕೊಳ್ಳಬಾರದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.
10ನೇ ತರಗತಿ ಪಠ್ಯದಿಂದ ಭಗತ್ ಸಿಂಗ್ ಪಾಠ ಕೈಬಿಟ್ಟಿದ್ದು ನಿಜನಾ? ಸರ್ಕಾರ ಕೊಟ್ಟಿದೆ ಈ ಸ್ಪಷ್ಟನೆ…
ಬೆಂಗಳೂರಿನ ಬೈಕರ್ ರಾಜಸ್ಥಾನದಲ್ಲಿ ಸಾವು: ಕೇಸ್ ಕ್ಲೋಸ್ ಎನ್ನುವಷ್ಟರಲ್ಲೇ ಪತ್ನಿಯತ್ತ ಬೊಟ್ಟು ಮಾಡಿದ ಹೆಲ್ಮೆಟ್!