ಪ್ರಶ್ನೆ: ನನಗೆ 48 ವರ್ಷ. ಈಗ ಮೂರು ವರ್ಷಗಳ ಹಿಂದೆ ಕ್ಷಯರೋಗವಾಗಿತ್ತು. 9 ತಿಂಗಳು ಮಾತ್ರೆ ಸೇವನೆ ನಂತರ ಅದು ಗುಣವಾಯಿತು. ಆ ಸಮಯದಲ್ಲಿ ಒಂದು ದಿನಕ್ಕೆ 3 ಹೊತ್ತಿಗೂ ಸೇರಿ 11 ಮಾತ್ರೆಗಳನ್ನು ನುಂಗುತ್ತಿದ್ದುದರ ಪರಿಣಾಮ ಮಲಬದ್ಧತೆಯಾಯಿತು. ಸೋನಾದ ಚೂರ್ಣವನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದು, ಬಾಳೆಹಣ್ಣು ತಿನ್ನುವುದು ಇತ್ಯಾದಿಗಳಿಂದ ಸ್ವಲ್ಪ ಸರಿಯಾಯಿತು. ಆದರೆ ಇತ್ತೀಚೆಗೆ ಮೂಲವ್ಯಾಧಿ ಆಗಿ ಬಹಳ ಹಿಂಸೆಪಡುತ್ತಿದ್ದೇನೆ.

ಬೆಳಗಿನ ಹೊತ್ತು ಮಲವಿಸರ್ಜನೆ 2ರಿಂದ 3 ಗಂಟೆ ಕುಳಿತರೂ ಸಂಪೂರ್ಣವಾಗುತ್ತಿಲ್ಲ. ಹೊಟ್ಟೆಯಲ್ಲಿ ಉಡದ ರೀತಿ ಹಿಡಿದ ಹಾಗಾಗುತ್ತದೆ. ಒಂದೆರೆಡು ಕಡೆ ತೋರಿಸಿದ್ದೇನೆ. ಮಲದ್ವಾರ ಚಿಕ್ಕದಾಗಿದೆ, ಅದನ್ನು ಆಪರೇಷನ್ ಮಾಡಿ ದೊಡ್ಡದು ಮಾಡಬೇಕೆಂದು ಹೇಳಿದ್ದಾರೆ. ನನಗೆ ಆಪರೇಷನ್ ಅಂದ್ರೆ ಭಯ.
ಮಲವಿಸರ್ಜನೆ 10 ನಿಮಿಷಕ್ಕೊಮ್ಮೆ ಚೂರು ಚೂರು ಹೋಗುತ್ತದೆ. ಅಲ್ಲದೆ ಅಲ್ಲಿ ಚೆಂಡು ಹೊರಬರುತ್ತದೆ. ಇದರಿಂದ ದೈಹಿಕವಾಗಿ, ಮಾನಸಿಕವಾಗಿ ತುಂಬ ನೊಂದಿದ್ದೇನೆ. ಕೆಲಸಕ್ಕೂ ಸರಿಯಾಗಿ ಹೋಗದೆ ಅಲ್ಲಿ ನೋಟಿಸ್ ಕೂಡ ನನಗೆ ನೀಡಿದ್ದಾರೆ. ದಯಮಾಡಿ ನನ್ನ ಈ ಸಮಸ್ಯೆಗೆ ಆಯುರ್ವೇದ ಅಥವಾ ಮನೆಮದ್ದನ್ನು ಸೂಚಿಸಿ.
ಉತ್ತರ: ನೀವು ರಾತ್ರಿ ಊಟದ ನಂತರ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯಿರಿ. ರಾತ್ರಿ ಊಟವಾದ ತಕ್ಷಣ ಮಲಗುವುದು ಬೇಡ. ಊಟಕ್ಕೂ, ನಿದ್ದೆಗೂ ಎರಡು ಗಂಟೆಗಳ ಅಂತರವಿರಲಿ. ರಾತ್ರಿ ತ್ರಿಫಲಾ ಚೂರ್ಣವನ್ನು ಎರಡು ಚಮಚದಷ್ಟನ್ನು ಅರ್ಧಲೋಟ ನೀರಿಗೆ ಹಾಕಿ ಮುಚ್ಚಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ. ಹೆಚ್ಚು ಖಾರ, ಮಸಾಲೆ, ಕರಿದ ಪದಾರ್ಥ ಸೇವನೆ ಬೇಡ. ದಿನಕ್ಕೆ 3 ಲೀ. ನೀರು ಕುಡಿಯಿರಿ. ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಯಥೇಚ್ಛವಾಗಿರಲಿ.
ಪ್ರತಿ ತಿಂಡಿ, ಊಟದ ಜತೆಗೆ ಹಸಿತರಕಾರಿ ತಿನ್ನುವುದನ್ನು ರೂಢಿಸಿಕೊಳ್ಳಿ. ಅಭಯಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚದಷ್ಟನ್ನು ನೀರಿನೊಂದಿಗೆ ಬೆರೆಸಿ ಕುಡಿಯಿರಿ. ಈ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ದಿನಕ್ಕೆ ಅರ್ದಗಂಟೆ ವ್ಯಾಯಾಮ ಇಲ್ಲವೇ ಒಂದು ಗಂಟೆ ನಡಿಗೆ ರೂಢಿಸಿಕೊಳ್ಳಿ.
ತಾಯಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಸಿಗುತ್ತದೆಯೆ? ಕಾನೂನು ಏನು ಹೇಳುತ್ತದೆ?
ಹತ್ತಿರ ಬಂದರೂ ದೂರ ಸರೀತಿದ್ದ ಗಂಡ- ಮೊಬೈಲ್ ಫೋನ್ನಲ್ಲಿ ಇತ್ತು ಪತಿಯ ಭಾರಿ ರಹಸ್ಯ