ಚನ್ನರಾಯಪಟ್ಟಣ: ಪಟ್ಟಣದಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದಲ್ಲಿನ ಶಿವ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕೋಟೆ ಶ್ರೀ ಚಂದ್ರಮೌಳೀಶ್ವರ, ಗದ್ದೆ ರಾಮೇಶ್ವರ, ಕಾಡುಬಸವೇಶ್ವರ, ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಬೆಳಗ್ಗೆಯಿಂದಲೇ ಹೆಚ್ಚಿತ್ತು. ಮಧ್ಯಾಹ್ನದವರೆಗೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಪಟ್ಟಣದ ಕೋಟೆ ಸಂಕಷ್ಟಹರ ಗಣಪತಿ ದೇವಸ್ಥಾನ ಆವರಣದಲ್ಲಿರುವ ಶನೈಶ್ಚರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಹೋಮ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಕೋಟೆ ಶ್ರೀಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಅಹೋರಾತ್ರಿ ಜಾಗರಣೆ ಉತ್ಸವ ಆಯೋಜಿಸಲಾಗಿತ್ತು. ಚಂದ್ರಮೌಳೀಶ್ವರ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾ ನೈವೇದ್ಯ ಮತ್ತು ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇದಕ್ಕೂ ಮುನ್ನ ಗಿರಿಜಾ ಮಂಟಪದಲ್ಲಿ ಶ್ರೀ ಚಂದ್ರಮೌಳೀಶ್ವರ ಭಜನಾ ಮಂಡಳಿ, ಗುರುಭಜನ ಸಂಘ ಮತ್ತು ಸುಮಿತ್ರಮ್ಮ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ, ತುಮಕೂರಿನ ಶ್ರೀಮತಿ ಅನುಶ್ರೀ ಮತ್ತು ಡಿ.ವಿ.ವಿನಯ್ ತಂಡದವರಿಂದ ವಯಲಿನ್ ಮತ್ತು ಭರತನಾಟ್ಯ ಕಾರ್ಯಕ್ರಮ ಮತ್ತು ಅಂಚೆ ಇಲಾಖೆಯ ಪ್ರಮೋದ್ ಮತ್ತು ತಂಡದವರಿಂದ ಹಾಡುಗಾರಿಕೆ, ಭಕ್ತಿಗೀತೆ ಮತ್ತು ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗದ್ದೆ ರಾಮೇಶ್ವರ ದೇವಸ್ಥಾನ ಸಹಿತ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ವಿವಿಧ ದೇಗುಲಗಳಲ್ಲಿ ಭಕ್ತರಿಗೆ ವಿಶೇಷ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಹಲವು ದೇವಸ್ಥಾನಗಳಲ್ಲಿ ಭಜನೆ, ಶಿವಸ್ತ್ರೋತ್ರ ನಡೆಯಿತು. ಮನೆಯವರು ಸೇರಿ ಶಿವ ದೇವರ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.