ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಹು ನಿರೀತ ಭಾರತೀಯ ಸಿನಿಮಾಗಳಲ್ಲಿ “ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-&ಕಟ್ ಹೇಳುತ್ತಿರುವ ಯಶ್, ರಣಬೀರ್ ಕಪೂರ್, ಸಾಯಿಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ “ರಾಮಾಯಣ’ ಮೊದಲ ಸಾಲಿನಲ್ಲಿದೆ. ಇದುವರೆಗೆ ಚಿತ್ರದ ಬಗ್ಗೆ ಆಗೊಂದು, ಈಗೊಂದು ಸುದ್ದಿಗಳು ಹರಿದಾಡುತ್ತಿದ್ದರೂ, ಇದುವರೆಗೆ ಅಧಿಕೃತವಾಗಿ ಹೆಚ್ಚು ಮಾಹಿತಿ ಘೋಷಣೆಯಾಗಿರಲಿಲ್ಲ. ಇದೀಗ ಮೂರು ನಿಮಿಷಗಳ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಎಲ್ಲ ಅಂತೆ&ಕಂತೆಗಳಿಗೂ ಬ್ರೇಕ್ ಹಾಕಿದ್ದು, ಅದ್ಭುತ ತಾರಾಗಣ ಮತ್ತು ಅದ್ವೀತಿಯ ತಂತ್ರಜ್ಞರ ಮೂಲಕ ಮತ್ತಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರ ಮೂಲಕ ಆರಂಭವಾಗುವ ಟೀಸರ್ನ ಕೊನೆಯಲ್ಲಿ ರಾಮ ಮತ್ತು ರಾವಣರ ದರ್ಶನ ಮಾಡಿಸಿದ್ದು, ರಣಬೀರ್ ಕಪೂರ್ ಮತ್ತು ಯಶ್ ಲುಕ್ ಕುತೂಹಲ ಹೆಚ್ಚಿಸಿದೆ. ಹಾಗೇ “ರಾಮಾಯಣ’ ಟೈಟಲ್ಗೆ “ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಅಡಿಬರಹವಿದ್ದು, ನೈಜತೆಗೆ ಹತ್ತಿರವಾಗಿಯೇ ಘಟನೆಗಳನ್ನು ರೂಪಿಸುವ ನಿರೀಕ್ಷೆ ಇದೆ.
ಹಾನ್ಸ್ ಜಿಮ್ಮರ್ & ಎ.ಆರ್.ರೆಹ್ಮಾನ್ ಸಂಗೀತದ ಮೋಡಿ:
ಹಾಲಿವುಡ್ನ ಹೆಸರಾಂತ ಸಂಗೀತ ನಿರ್ದೇಶಕ ಹಾನ್ಸ್ ಜಿಮ್ಮರ್ ಮತ್ತು ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್.ರೆಹ್ಮಾನ್ “ರಾಮಾಯಣ’ ಚಿತ್ರದ ಸಂಗೀತಕ್ಕೆ ಕೈಜೋಡಿಸಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಹಾಡುಗಳಿಗೆ ರೆಹ್ಮಾನ್ ಸಂಗೀತ ನೀಡಲಿದ್ದು, ಬಿಜಿಎಂ ಜವಾಬ್ದಾರಿಯನ್ನು ಹಾನ್ಸ್ ಜಿಮ್ಮರ್ ಹೊತ್ತಿದ್ದಾರೆ ಎನ್ನಲಾಗಿದೆ. ವಿಶೇಷ ಅಂದರೆ ಹಾನ್ಸ್ ಈ ಹಿಂದೆ “ದ ಲಯನ್ ಕಿಂಗ್’ ಮತ್ತು “ಡ್ಯೂನ್’ ಚಿತ್ರಗಳಿಗೆ ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದ್ದರೆ, ರೆಹ್ಮಾನ್ ಕೂಡ “ಸ್ಲಂಡಾಗ್ ಮಿಲೇನಿಯರ್’ ಚಿತ್ರದ ಹಿನ್ನೆಲೆ ಸಂಗೀತ ಮತ್ತು “ಜೈ ಹೋ’ ಹಾಡಿಗೆ ಡಬಲ್ ಆಸ್ಕರ್ ಪಡೆದಿದ್ದರು. ಇದೀಗ ವಿಶ್ವವಿಖ್ಯಾತ ಇಬ್ಬರು ಸಂಗೀತಗಾರರು “ರಾಮಾಯಣ’ ಚಿತ್ರಕ್ಕಾಗಿ ಕೈಜೋಡಿಸಿರುವುದು ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.
ಪ್ಯಾನ್ ವರ್ಲ್ಡ್ ಸಿನಿಮಾ
“ರಾಮಾಯಣ’ ಪ್ಯಾನ್ ವರ್ಲ್ಡ್ ಚಿತ್ರವಾಗಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಭಾರತೀಯ ಭಾಷೆಗಳ ಜತೆಗೆ ಇಂಗ್ಲೀಷ್ ಹಾಗೂ ವಿವಿಧ ವಿದೇಶಿ ಭಾಷೆಗಳಲ್ಲೂ ಮೂಡಿಬರಲಿದೆ ಎನ್ನಲಾಗಿದೆ. ಹೀಗಾಗಿಯೇ ಭಾರತ, ಭಾರತೀಯರ ಕಣಕಣದಲ್ಲೂ ಸೇರಿರುವ ಈ ಪೌರಾಣಿಕ ಕಥೆಯನ್ನು ವಿಶ್ವಾದ್ಯಂತ ಜನರಿಗೆ ಮುಟ್ಟಿಸಲು ಯೂನಿವರ್ಸಲ್ ಆಗಿ ಕೆಲ ಬದಲಾವಣೆ ಮಾಡಿರುವ ಸಾಧ್ಯತೆ ಇದೆ. ಏಕೆಂದರೆ ಚಿತ್ರಕ್ಕೆ “ಖಾಕಿ’, “ವಾರ್’, “ಪಠಾಣ್’ ಸೇರಿ ಹಲವು ಹಿಟ್ ಚಿತ್ರಗಳಿಗೆ ಕಥೆ ಬರೆದಿರುವ “ಅಪಹರಣ್’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಕಥೆಗಾರ ಶ್ರೀಧರ್ ರಾವನ್ “ರಾಮಾಯಣ’ ಚಿತ್ರಕಥೆ ಬರೆದಿದ್ದಾರೆ.
ಎರಡು ಭಾಗ, 835 ಕೋಟಿ ಬಜೆಟ್!
“ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, 2026ರ ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ರಿಲೀಸ್ ಆಗಲಿವೆ. ಅಂದಹಾಗೆ ಈ ಪೌರಾಣಿಕ ಚಿತ್ರ, ಬಜೆಟ್ ವಿಷಯದಲ್ಲೂ ಇತಿಹಾಸ ನಿರ್ಮಿಸಿದೆ. ಬರೋಬ್ಬರಿ <835 ಕೋಟಿ ಬಜೆಟ್ನೊಂದಿಗೆ ಇದುವರೆಗಿನ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ ಎಂಬ ದಾಖಲೆ ಮಾಡಿರುವ “ರಾಮಾಯಣ’ ಚಿತ್ರವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ದಿಗ್ಗಜರ ಸಮ್ಮಿಲನ
“ರಾಮಾಯಣ’ದಲ್ಲಿ ಭಾರತದ ವಿವಿಧ ಚಿತ್ರರಂಗಗಳ ದಿಗ್ಗಜ ಕಲಾವಿದರು ನಟಿಸುತ್ತಿದ್ದಾರೆ. ಕನ್ನಡಿಗ ಯಶ್ ರಾವಣನಾಗಿದ್ದರೆ, ಬಾಲಿವುಡ್ ನಟರಾದ ರಣಬೀರ್ ರಾಮನಾಗಿ, ಸನ್ನಿ ಡಿಯೋಲ್ ಹನುಮಂತ ಮತ್ತು ರವಿ ದುಬೇ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಮಲಯಾಳಂ ನಟಿ ಸಾಯಿಪಲ್ಲವಿ ಸೀತೆಯಾಗಿದ್ದು, ಬಹುಭಾಷಾ ಕಲಾವಿದರಾದ ವಿವೇಕ್ ಓಬೆರಾಯ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜತೆಗೆ ಕುಣಾಲ್ ಕಪೂರ್, ಅರುಣ್ ಗೋವಿಲ್ ಸೇರಿ ಹಲವು ದಿಗ್ಗಜ ಕಲಾವಿದರು ತಾರಾಗಣದಲ್ಲಿದ್ದಾರೆ. ಹಾಗೇ ಹಾಲಿವುಡ್ನ ಹೆಸರಾಂತ ಸಂಗೀತ ನಿರ್ದೇಶಕ ಹಾನ್ಸ್ ಜಿಮ್ಮರ್ ಜತೆಗೆ ಟೆರ್ರಿ ನೋಟರಿ ಮತ್ತು ಗಯ್ ನೋರಿಸ್ ಸಾಹಸ ನಿರ್ದೇಶನವಿರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಒಡೆತನದ ಲಂಡನ್ ಮೂಲದ ವಿಎಫ್ಎಕ್ಸ್ ಸಂಸ್ಥೆ “ಟೆನೆಟ್’, “ಡ್ಯೂನ್’ ಸರಣಿ, “ಇಂಟರ್ಸ್ಟೆಲ್ಲಾರ್’ ಸೇರಿ ಎಂಟು ಚಿತ್ರಗಳಿಗೆ ಅತ್ಯುತ್ತಮ ವಿಎಫ್ಎಕ್ಸ್ ಆಸ್ಕರ್ ಪ್ರಶಸ್ತಿ ಪಡೆದಿರುವ ಡಿಎನ್ಇಜಿ “ರಾಮಾಯಣ’ದ ವಿಎ್ಎಕ್ಸ್ ಜವಾಬ್ದಾರಿ ನಿಭಾಯಿಸುತ್ತಿದೆ.