ಬೆಂಗಳೂರು: ಕೆ.ಜಿ.ಎಫ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದಲ್ಲದೆ, ನ್ಯಾಷನಲ್ ಸ್ಟಾರ್ ಆಗಿ ಹೊಮ್ಮಿದ ನಟ ರಾಕಿಂಗ್ ಸ್ಟಾರ್ ಯಶ್ ಜನವರಿ 8ರಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಯಶ್ ಬರ್ತ್ಡೇ ತುಂಬಾ ವಿಶೇಷವಾಗಿದ್ದಲ್ಲದೆ, ವಿಶ್ವದಾಖಲೆಯನ್ನು ಬರೆದಿದೆ. ಅದಕ್ಕೆ ಕಾರಣ ಯಶ್ ಅಭಿಮಾನಿಗಳು ಮಾಡಿಕೊಂಡಿದ್ದ ಬರ್ತ್ಡೆ ತಯಾರಿ.
ಬರೋಬ್ಬರಿ 5705 ಕೆ.ಜಿ. ತೂಕದ ಕೇಕ್, 200 ಅಡಿ ಉದ್ದದ ಕಟೌಟ್ ಮೂಲಕ ಯಶ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ವಿಶ್ವದಾಖಲೆ ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಯಶ್ ಸಿನಿ ಜರ್ನಿಯ ಒಂದು ಹಿನ್ನೋಟವನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.
ಯಶ್ ಅವರ ಸಿನಿ ಪಯಾಣ ಅಷ್ಟು ಸುಲಭವಾಗಿರಲಿಲ್ಲ. ಸಿನಿಮಾ ರಂಗದಲ್ಲಿ ಬ್ಯಾಕ್ಗ್ರೌಂಡ್ ಇರುವವರೇ ಯಶಸ್ಸು ಸಿಗದೇ ಒಂದೇ ಒಂದು ಯಶಸ್ಸಿಗಾಗಿ ಇನ್ನೂ ಪ್ರಯತ್ನ ಪಡುತ್ತಿದ್ದಾರೆ. ಅಂತಹದರಲ್ಲಿ ಕಡಿಮೆ ಅವಧಿಯಲ್ಲಿ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಲು ಅವರಲ್ಲಿರುವ ಪ್ರತಿಭೆಯೇ ಕಾರಣ ಎಂದು ಖಚಿತವಾಗಿ ಹೇಳಬಹುದಾಗಿದೆ.
ಬಾಲ್ಯದಿಂದಲೇ ನಟನೆ ಮೇಲೆ ಆಸಕ್ತಿ
ಹಾಸನ ನಗರ ಸಮೀಪವಿರುವ ಸಣ್ಣ ಭುವನಹಳ್ಳಿಯೊಂದರಲ್ಲಿ ನವೀನ್ ಕುಮಾರ್ ಗೌಡನಾಗಿ ಹುಟ್ಟಿದ ಯಶ್, ಬಾಲ್ಯದಿಂದಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಶಾಲಾ ದಿನಗಳಲ್ಲೇ ಅಭಿನಯಿಸುತ್ತಿದ್ದರು. ಯಶ್ ತಂದೆ ಬಿಎಂಟಿಸಿ ಚಾಲಕರಾಗಿದ್ದು, ತಾಯಿ ಪುಷ್ಪಾ ಮತ್ತು ಸಹೋದರಿ ನಂದಿನಿ ಕೂಡ ಯಶ್ ನಟನೆಗೆ ಸಾಥ್ ನೀಡುತ್ತಲೇ ಬಂದಿದ್ದಾರೆ. ಹೈಸ್ಕೂಲ್ ದಿನಗಳನ್ನು ಮೈಸೂರಿನಲ್ಲಿ ಕಳೆದ ಯಶ್ ಮಹಾಜನ ಶಾಲೆಯಲ್ಲಿ ಓದಿದರು. ಅಲ್ಲದೆ, ನಟನೆಯ ಮೇಲೆ ಪ್ರಾವಿಣ್ಯ ಸಾಧಿಸಲು ಬಿ.ವಿ.ಕಾರಂತ್ ಅವರ ಡ್ರಾಮಾ ಶಾಲೆಗೂ ಸೇರಿದರು.
ಮೊದಲು ಕಿರುತೆರೆ ಪ್ರವೇಶ
ನಂದ ಗೋಕುಲ ಧಾರವಾಹಿಯ ಮೂಲಕ ಯಶ್ ಕಿರುತೆರೆಗೆ ಕಾಲಿಟ್ಟರು. ವಿಶೇಷವೆಂದರೆ ಇದೇ ಧಾರವಾಹಿಯಲ್ಲಿ ರಾಧಿಕಾ ಪಂಡಿತ್ ಕೂಡ ನಟಿಸಿದ್ದಾರೆ. ಧಾರವಾಹಿಯಲ್ಲಿ ಯಶ್, ರಾಧಿಕಾ ಸಹೋದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೊಂದು ದಿನ ನಾವಿಬ್ಬರೂ ದಂಪತಿಗಳಾಗುತ್ತೇವೆ ಎಂದು ಬಹುಶಃ ಇಬ್ಬರಿಗೂ ಗೊತ್ತಿರಲಿಲ್ಲ ಅನಿಸುತ್ತದೆ. ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಯಶ್ 2007ರಲ್ಲಿ ಮೊದಲ ಬಾರಿಗೆ ನಿರ್ದೇಶಕಿ ಪ್ರಿಯಾ ಹಾಸನ್ ನಿರ್ದೇಶನದ “ಜಂಬದ ಹುಡುಗಿ” ಮೂಲಕ ಸಿನಿಜಗತ್ತಿಗೆ ಪ್ರವೇಶ ನೀಡಿದರು. ಈ ಸಿನಿಮಾದಲ್ಲಿ ಯಶ್ ಅವರದ್ದು ಸಣ್ಣ ಪಾತ್ರವಾಗಿತ್ತು. ಒಳ್ಳೆಯ ಅಭಿನಯ ನೀಡಿದ್ದರೂ ಗಮನ ಸೆಳೆದಿರಲಿಲ್ಲ. ಬಳಿಕ ನಿರ್ದೇಶಕ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಚಿತ್ರದಲ್ಲಿ ರಾಧಿಕ ಪಂಡಿತ್ಗೆ ನಾಯಕನಾಗಿ ನಟಿಸಿದರು. ಈ ಚಿತ್ರ ಉತ್ತಮ ಯಶಸ್ಸು ಗಳಿಸಿತ್ತು. ಜತೆಗೆ ಯಶ್ ಮತ್ತು ರಾಧಿಕಾ ಪಂಡಿತ್ಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಚಿತ್ರಕ್ಕಾಗಿ ಉತ್ತಮ ಸಹಕಲಾವಿದ ಪ್ರಶಸ್ತಿಗೂ ಭಾಜನರಾದರು. ನಂತರ ಬಂದ ರಾಕಿ, ಕಳ್ಳರ ಸಂತೆ ಹಾಗೂ ಗೋಕುಲ ಹೇಳಿಕೊಳ್ಳುವಷ್ಟು ಯಶಸ್ಸು ತರಲಿಲ್ಲ. ಬಳಿಕ ಬಂದ ಮೊದಲಾಸಲ ಚಿತ್ರವು ಕೂಡ ಸಿನಿರಸಿಕರ ಗಮನ ಸೆಳೆದಿತ್ತು. ಆನಂತರ ಬಂದ ರಾಜಧಾನಿ ವಿಮರ್ಶಕರ ಗಮನ ಸೆಳೆಯಿತು.
ಯಶ್ ಸಿನಿ ದಿಕ್ಕು ಬದಲಿಸಿದ ಅಣ್ತಮ್ಮ ಡೈಲಾಗ್
ಕಿರಾತಕ ಚಿತ್ರದ ಯಶ್ ಪಾಲಿಗೆ ಒದಗಿ ಬಂದ ಅದೃಷ್ಟವೆನ್ನಬಹುದು ಮಂಡ್ಯ ಸೊಗಡಿನಲ್ಲಿ ಮೂಡಿಬಂದ ಕಿರಾತಕ ತಮಿಳಿನ ರಿಮೇಕ್ ಆದರೂ ಸಖತ್ ಸದ್ದು ಮಾಡಿತು. ಅಲ್ಲಿಂದಲೇ ಯಶ್ ಅಣ್ತಮ್ಮ ಡೈಲಾಗ್ ಫೇಮಸ್ ಆಯಿತು. ಆನಂತರ ಬಂದ ಲಕ್ಕಿ ಮತ್ತು ಜಾನು ಚಿತ್ರ ಕೈಹಿಡಿಯಲಿಲ್ಲ. ಮತ್ತೆ ಯೋಗರಾಜ್ ಭಟ್ ನಿರ್ದೇಶನ ಡ್ರಾಮ್ ಚಿತ್ರ ನೂರು ದಿನ ಓಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದಲ್ಲದೆ, ಯಶ್ಗೆ ಯಶಸ್ಸು ತಂದುಕೊಟ್ಟಿತು.
ಗೂಗ್ಲಿ, ರಾಜಾಹುಲಿ ಮೂಲಕ ಯಶ್ ಮೋಡಿ
ಡ್ರಾಮ ನಂತರ ಬಂದ ಪವನ್ ಒಡೆಯರ್ ನಿರ್ದೇಶನದ ಗೂಗ್ಲಿ ಚಿತ್ರದ ಯುವ ಬಳಗವನ್ನು ಸೆಳೆಯಿತು. ಯಶ್ ಲುಕ್, ಡೈಲಾಗ್ ಮತ್ತು ಡ್ಯಾನ್ಸ್ಗೆ ಸಿನಿರಸಿಕರು ಫಿದಾ ಆದರು. ಈ ಚಿತ್ರದಿಂದ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಯಿತು. ನಂತರ ಬಂದ ರಾಜಾಹುಲಿ ಯಶ್ಗೆ ಮಾಸ್ ಹೀರೂ ಪಟ್ಟ ತಂದುಕೊಟ್ಟಿತು. ಇದು ಕೂಡ ತಮಿಳು ಚಿತ್ರದ ರಿಮೇಕ್ ಆದರೂ ಚಿತ್ರ ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಿತು. ನಂತರ ಬಂದ ಗಜಕೇಸರಿ ಅರ್ಧಶತಕ ಪೂರೈಸಿದರೂ ಯಶಸ್ಸು ತರಲಿಲ್ಲ.
ಸ್ಟಾರ್ ಪಟ್ಟ ತಂದುಕೊಟ್ಟ ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ
2014ರಲ್ಲಿ ಸಂತೋಷ್ ಆನಂದ್ ರಾಮ್ ಮೊದಲ ನಿರ್ದೇಶನದ ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಚಿತ್ರ ಯಶ್ ಜೀವನದಲ್ಲಿ ಮಹತ್ವದ ತಿರುವು ನೀಡಿದ ಚಿತ್ರವೆಂದರೆ ತಪ್ಪಾಗಲಾರದು. ರಗಡ್ ಪ್ರೇಮಕತೆ, ಯಶ್ ಅಭಿನಯ ಹಾಗೂ ವಿಭಿನ್ನ ಮ್ಯಾನರಿಸಂ ಸಿನಿರಸಿಕರನ್ನು ಹುಚ್ಚೆಬ್ಬಿಸಿತು. ಯಶ್ ಮತ್ತು ರಾಧಿಕ ಕೆಮೆಸ್ಟ್ರಿಗೆ ಶಿಳ್ಳೆ ಚಪ್ಪಾಳೆಗಳು ಬಿತ್ತು. ಇಲ್ಲಿಂದಲೇ ಯಶ್ ಮತ್ತು ರಾಧಿಕ ನಡುವಿನ ಪ್ರೇಮ ಪುರಾಣಕ್ಕೂ ಜೀವಬಂತು. ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ 50 ಕೋಟಿ. ರೂ ಬಾಚಿ ದಾಖಲೆ ಬರೆಯಿತು. ಇದರ ನಂತರ ಬಂದ ಮಾಸ್ಟರ್ ಪೀಸ್ ಹೇಳಿಕೊಳ್ಳುವಷ್ಟು ತರದಿದ್ದರೂ, ಸಂತು ಸ್ಟ್ರೈಟ್ ಫಾರ್ವರ್ಡ್ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತು.
ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟ ಕೆಜಿಎಫ್
ಡಿಸೆಂಬರ್ 2018ರಲ್ಲಿ ಬಿಡುಗಡೆಯಾದ ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗಿ ಎಲ್ಲೆಡೆ ಧೂಳೆಬ್ಬಿಸಿತ್ತು. ಬರೋಬ್ಬರಿ 250 ಕೋಟಿ ರೂ. ಸಂಗ್ರಹಿಸಿ ಕನ್ನಡ ಇಂಡಸ್ಟ್ರಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಅಲ್ಲದೆ, ಸ್ಯಾಂಡಲ್ವುಡ್ ಮಾರುಕಟ್ಟೆಯನ್ನು ವಿಸ್ತರಿಸಿದ ಕೀರ್ತಿ ಕೆ.ಜಿ.ಎಫ್ಗೆ ಸಲ್ಲುತ್ತದೆ.
ರಾಧಿಕ-ಯಶ್ ಕಲ್ಯಾಣ
ಪ್ರೀತಿಯ ಬಗ್ಗೆ ಸಾಕಷ್ಟು ಪುಕಾರು ಕೇಳಿಬರುತ್ತಲೆ ಇಬ್ಬರ ನಡುವೆ ಪ್ರೇಮಾಂಕುರವಾಗಿರುವುದನ್ನು ಬಹಿರಂಗಡಿಸಿದ ಸ್ಯಾಂಡಲ್ವುಡ್ ಸ್ಟಾರ್ ಜೋಡಿ, 2016 ಆಗಸ್ಟ್ 12ರಂದು ಗೋವಾದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡರು. ಅದೇ ವರ್ಷ ಡಿಸೆಂಬರ್ 9 ರಂದು ಯಶ್ ಮತ್ತು ರಾಧಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ದಾಂಪತ್ಯ ಜೀವನದ ಖುಷಿಯನ್ನು ಇಮ್ಮಡಿಗೊಳಿಸಲು 2018 ಡಿಸೆಂಬರ್ 2 ರಂದು ಐರಾ ಹೆಸರಿನ ಮುದ್ದಾದ ಹೆಣ್ಣು ಮಗು ಹಾಗೂ ಅಕ್ಟೋಬರ್ 30, 2019ರಂದು ಗಂಡು ಮಗು ಕುಟುಂಬದ ಜತೆಯಾಗಿದೆ.
ಯಶೋಮಾರ್ಗದ ಮೂಲಕ ಸಾಮಾಜಿಕ ಕಾರ್ಯ
ಯಶ್ ಅವರು ಯಶೋಮಾರ್ಗ ಹೆಸರಿನಲ್ಲಿ ಸಂಘಟನೆಯೊಂದನ್ನು ನಡೆಸುತ್ತಿದ್ದಾರೆ. ಈ ಮೂಲಕ ತಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚುತ್ತಿದ್ದಾರೆ. ಸಂಘಟನೆಯ ಮೊದಲನೇ ಹಂತವಾಗಿ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರ ಕೆರೆಗೆ ನೀರು ತುಂಬಿಸುವ ಮೂಲಕ ಯಶ್ ಮೆಚ್ಚುಗೆಗೆ ಪಾತ್ರವಾಗಿದ್ದರು.
ಕೆ.ಜಿ.ಎಫ್. ಚಾಪ್ಟರ್ 2ಗೆ ಬೆಟ್ಟದಷ್ಟು ನಿರೀಕ್ಷೆ
ಮುಂಬರುವ ಕೆ.ಜಿ.ಎಫ್. ಚಾಪ್ಟರ್ 2 ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರವು ದೇಶಾದ್ಯಂತ ಮತ್ತೊಂದು ಸುತ್ತಿನ ಅಲೆ ಸೃಷ್ಟಿಸುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಕೆ.ಜಿ.ಎಫ್. ಚಾಪ್ಟರ್ 2 ಬಿಟ್ಟರೆ ಮೈ ನೇಮ್ ಇಸ್ ಕಿರಾತಕ, ರಾಣಾ ಚಿತ್ರಗಳ ಬಗ್ಗೆ ಈಗಾಗಲೇ ಮಾತುಕತೆ ನೆಡೆದಿದ್ದು, ಮುಂದಿನ ಚಿತ್ರ ಯಾವುದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಉಳಿದಂತೆ ಹಲವು ಜಾಹಿರಾತುಗಳಲ್ಲಿಯು ಯಶ್ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಸಿನಿಮಾ ಸೇವೆಗಾಗಿ ಫಿಲ್ಮಫೇರ್ ಅವಾರ್ಡ್, ಸೈಮಾ, ಐಫಾ ಉತ್ಸವ ಹಾಗೂ ದಾದಾ ಸಾಹೇಬ್ ದಕ್ಷಿಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಯಶ್ ಭಾಜನರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ, ವಿವಾದವು ಯಶ್ ಅವರಿಗೆ ಹೊರಾತಾಗಿಲ್ಲ ಬಾಡಿಗೆ ಮನೆ ವಿವಾದ, ಐಟಿ ರೈಡ್ ಸೇರಿದಂತೆ ಕೆಲ ಕಹಿಘಟನೆಗಳನ್ನು ಯಶ್ ಅನುಭವಿಸಿದ್ದು, ಒಟ್ಟಾರೆ ಇಂದು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಯಶ್ ಬರ್ತ್ಡೇ ಸಂಭ್ರಮಕ್ಕಿಲ್ಲ ಬಂದ್ ಎಫೆಕ್ಟ್ಯಶ್ ಬರ್ತ್ಡೇ ಸಂಭ್ರಮಕ್ಕಿಲ್ಲ ಬಂದ್ ಎಫೆಕ್ಟ್
Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜನವರಿ 7, 2020
KGF 2Exclusive #KGFChapter2Dialogue. 🔥🔥ಏನಂದೆ ಒಂದ್ ಹೆಜ್ಜೆ ಇಟ್ಕೊಂಡ್ ಬಂದೋನು ಅಂತಾ ಹೇಳ್ದಾ ಕರೆಕ್ಟು ಗಡಿಯಾರಲ್ಲಿ ಒಂದ್ ಗಂಟೆ ಆಗ್ಬೇಕಾದ್ರೆ ದೊಡ್ಡ ಮುಳ್ಳು 60 ಹೆಜ್ಜೆ ಇಡ್ಬೇಕು ಚಿಕ್ಕ ಮುಳ್ಳು ಒಂದ್ ಹೆಜ್ಜೆ ಇಟ್ರೆ ಸಾಕು ನಾನ್ ಹೆಜ್ಜೆ ಇಟ್ಟಾಗಿದೆ ಆಟದ್ ರೇಂಜ್ ಚೇಂಜ್ ಆಗಿದೆ ಹಾವು ಏಣಿ ಆಟಕ್ಕೆ ಮುಂಗುಸಿ ಇಳ್ದಿದೆ ಇನ್ಮೇಲಿಂದಾ ಆ ಟೇರಿಟರಿ ನಂದು ಇ ಟೇರಿಟರಿ ನಿಂದು ಅನ್ನೋದೆಲ್ಲಾ ಬಿಟ್ಬಿಡಿ ವರ್ಲ್ಡ್ ಇಸ್ ಮಾಯ್ ಟೇರಿಟರಿ
Rocking Star Yash Fans Club ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜನವರಿ 7, 2020