ಬೆಳಗಾವಿ: ಕಳೆದ ವರ್ಷ 2019ನೇ ಸಾಲಿನಲ್ಲಿ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ನದಿಪಾತ್ರದ ಗ್ರಾಮಗಳು ಹಾಗೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಪ್ರವಾಹಕ್ಕೆ ಆಹುತಿಯಾಗಿದ್ದವು. ಆ ದುರ್ಘಟನೆಯಿಂದ ರೈತರು ಹಾಗೂ ಸಾಮಾನ್ಯ ಜನರು ಇನ್ನೂ ಚೇತರಿಸಿಕೊಂಡಿಲ್ಲ.
ಕಳೆದ ವರ್ಷದ ಪ್ರವಾಹದ ಕಹಿ ಮಾಸುವ ಮುನ್ನವೇ ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಲಿದೆ. ವರುಣನ ಆರ್ಭಟಕ್ಕೆ ಮತ್ತದೇ ನದಿಪಾತ್ರದ ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ. ತಮ್ಮ ಊರುಗಳ ಸುತ್ತ ಹಾಗೂ ಇತ್ತೀಚೆಗಷ್ಟೇ ನಾಟಿ ಮಾಡಿದ್ದ ಸಾವಿರಾರು ಹೆಕ್ಟೇರ್ ಜಮೀನುಗಳಲ್ಲಿ ಜಲ ಆವರಿಸಿಕೊಂಡಿದ್ದು, ಮಳೆ ಅಬ್ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ, ಮತ್ತೆ ಈ ಬಾರಿಯೂ ಪ್ರವಾಹ ಸಂಭವಿಸದಿರಲೆಂದು ರೈತರು ದೇವರ ಮೊರೆ ಹೋಗಿದ್ದಾರೆ.
ಮತ್ತೆ ಬೆಳೆ ನಾಶ: ಧಾರಾಕಾರ ಮಳೆಯಿಂದಾಗಿ ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿರುವ ಪರಿಣಾಮ ಬೆಳಗಾವಿ, ಖಾನಾಪುರ ತಾಲೂಕಿನ ನದಿ ಪಾತ್ರದ ಅಮದಾಜು 3.5 ಸಾವಿರ ಹೆಕ್ಟೇರ್ಗೂ ಅಧಿಕ ಪ್ರಮಾಣದ ಕೃಷಿಭೂಮಿಯಲ್ಲಿ ನಾಟಿ ಮಾಡಿದ್ದ ಬೆಳೆಗಳು ಜಲಾವೃತಗೊಂಡಿವೆ.
ಕಳೆದ ನಾಲ್ಕೈದು ತಿಂಗಳಿಂದ ಕರೊನಾ ಲಾಕ್ಡೌನ್ನಿಂದ ತತ್ತರಿಸಿ ಆರ್ಥಿಕ ನಷ್ಟ ಅನುಭವಿಸಿದ್ದ ರೈತರು, ನೋವಿನ ಮಧ್ಯೆಯೂ ಕೃಷಿ ಕಾರ್ಯ ಪೂರ್ಣಗೊಳಿಸಿದ್ದರು. ಆದರೀಗ ವರುಣನ ಅವಕೃಪೆಯಿಂದಾಗಿ ಮತ್ತೆ ಪ್ರವಾಹ ಸಂಭವಿಸುವ ಹಂತಕ್ಕೆ ಗ್ರಾಮಗಳ ಸುತ್ತ ಹಾಗೂ ಬೆಳೆಗಳಿರುವ ಜಮೀನುಗಳಲ್ಲಿ ನೀರು ಆವರಿಸಿಕೊಂಡಿದೆ.
45 ಗ್ರಾಮಗಳಲ್ಲಿ ಆಂತಕ: ಮಾರ್ಕೆಂಡೇಯ ನದಿ ಉಕ್ಕಿ ಹರಿಯುತ್ತಿರುವುದರಿಂದ ಖಾನಾಪುರ ಮತ್ತು ಬೆಳಗಾವಿ ತಾಲೂಕಿನ 45ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಮಾರ್ಕಂಡೇಯ ನದಿ ದಡದಲ್ಲಿರುವ ಉಚ್ಚಗಾವ, ಅಂಬೇವಾಡಿ, ಹಿಂಡಲಗಾ, ಕಂಗ್ರಾಳಿ ಕೆ.ಎಚ್., ಕಡೋಲಿ, ಸುಳಗಾ, ಜಾಫರ್ವಾಡಿ, ಕಾಕತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ 6 ರಿಂದ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಕಬ್ಬು, ಬಟಾಟೆ ಮತ್ತಿತರ ಬೆಳೆಗಳು
ನೀರಿನಲ್ಲಿ ಮುಳಗಿವೆ. ಪ್ರವಾಹ ಭೀತಿಯಿಂದ ನದಿತೀರ ನಿವಾಸಿಗರು ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗತೊಡಗಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆದರೂ ನದಿ ತೀರದ ನಿವಾಸಿಗರು ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ರೈತರಿಗೆ ಇನ್ನೂ ಸಿಕ್ಕಿಲ್ಲ ಹಿಂದಿನ ಪರಿಹಾರ: 2019-20ನೇ ಸಾಲಿನಲ್ಲಿ ಸಂಭವಿಸಿದ್ದ ಪ್ರವಾಹದಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಅನುಭವಿಸಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇಲ್ಲಿಯವರೆಗೂ ಸರ್ಕಾರದಿಂದ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ.
ಈ ವರ್ಷ ಕರೊನಾ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಮತ್ತೆ ರೈತರು ಸಾಲ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಅನೇಕ ಬೆಳೆಗಳ ಬೀಜ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಉತ್ತಮವಾಗಿ ಸಹಕರಿಸಿದ್ದ ಮಳೆಯಿಂದಾಗಿ ಬೆಳೆಯೂ ಚೆನ್ನಾಗಿ ಬೆಳೆದಿತ್ತು. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ಸಂತೋಷಕ್ಕೆ ವರುಣ ಮತ್ತೆ ಬರೆಯಿಟ್ಟಿದ್ದಾನೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಲಿವೆ. ಇದರಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿವೆ. ಬೆಳೆಹಾನಿ ಪರಿಶೀಲಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ.
| ಶಿವನಗೌಡ ಎಸ್. ಪಾಟೀಲ ಜಿಲ್ಲಾ ಜಂಟಿ ನಿರ್ದೇಶಕರು, ಕೃಷಿ ಇಲಾಖೆ
| ಮಂಜುನಾಥ ಕೋಳಿಗುಡ್ಡ