ನವದೆಹಲಿ: ಅರೆಸೇನಾ ಪಡೆಗಳಲ್ಲಿ ಗಸ್ತು, ಕಣ್ಗಾವಲು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಪ್ರಾಣಿಗಳಿಗೂ ಇನ್ಮುಂದೆ ನಿವೃತ್ತಿ ಸೌಲಭ್ಯ ದೊರೆಯಲಿದೆ. ಭದ್ರತಾ ಪಡೆಗಳ ಕುರಿತ 6 ಸದಸ್ಯರ ಕೇಂದ್ರೀಯ ಸಮಿತಿ ಈ ಹೊಸ ನಿಯಮವನ್ನು ಪ್ರಸ್ತಾಪಿಸಿದೆ.
ಅರೆಸೇನಾಪಡೆಯಲ್ಲಿ ಗಡಿ ಮತ್ತು ದೇಶದ ಒಳಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಪ್ರಾಣಿಗಳಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸುವುದರ ಜತೆಗೆ ನಿವೃತ್ತಿ ನಂತರವೂ ಅವುಗಳಿಗೆ ಶೇ. 70ರಷ್ಟು ನಿರ್ವಹಣಾ ವೆಚ್ಚ ನೀಡಲಾಗುತ್ತದೆ.
ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ತಲಾ ಒಬ್ಬಬ್ಬರು ಸದಸ್ಯರಿರುವ ಕೇಂದ್ರೀಯ ಸಮಿತಿಯು ಅರೆಸೇನಾ ಪಡೆಗಳ ಪ್ರಾಣಿಗಳ ನಿವೃತ್ತಿ ಸೌಲಭ್ಯಗಳಿಗಾಗಿ ಏಕಮಾದರಿಯ ಕಾರ್ಯನೀತಿಯನ್ನು
(ಎಸ್ಒಪಿ) ರಚಿಸಿದೆ. ಅನುಮೋದನೆಗಾಗಿ ಇದನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಶ್ವಾನಗಳು ಕಣ್ಗಾವಲು, ಸ್ಪೋಟಕಗಳ ಶೋಧನೆಯಲ್ಲಿ ಕೆಲಸ ನಿರ್ವಹಿಸಿದರೆ, ಕುದುರೆ, ಕತ್ತೆ, ಯಾಕ್ ಹಾಗೂ ಒಂಟೆಗಳನ್ನು ಗಸ್ತು ತಿರುಗಲು ಮತ್ತು ಸರಕು ಸಾಗಣೆಗೆ ಬಳಸಲಾಗುತ್ತದೆ. 8ರಿಂದ 16 ಸೇವೆ ಬಳಿಕ ನಿವೃತಿಯಾಗುತ್ತವೆ. ಇವುಗಳನ್ನು ಹರಾಜು ಹಾಕಲಾಗುತ್ತದೆ. ಸೇವೆ ಸಲ್ಲಿಸಿದ ಪ್ರಾಣಿಗಳಿಗೆ ದಯಾಮರಣ ನೀಡುವುದನ್ನು ಈ ಹಿಂದೆಯೇ ನಿಲ್ಲಿಸಲಾಗಿದ್ದು, ಯಾವುದಾದರು ಪ್ರಾಣಿ ಗುಣಮುಖವಾಗದಷ್ಟು ಗಂಭೀರವಾಗಿ ಗಾಯಗೊಂಡಿದ್ದರೆ ಮಾತ್ರ ಅಂತಹ ಸಂದರ್ಭಗಳಲ್ಲಿ ದಯಾಮರಣ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ಮುಂದೆ ನಿವೃತ್ತಿ ಪಡೆದ ಪ್ರಾಣಿಗಳನ್ನು ಹರಾಜು ಹಾಕುವುದಿಲ್ಲ. ಬದಲಿಗೆ ಅವುಗಳನ್ನು ಮೂಲ ಶಿಬಿರ/ಸೆಕ್ಟರ್ ಹಾಗೂ ಹೆಡ್ಕ್ವಾಟರ್ಗಳ ಪುನರ್ವಸತಿ ಕೇಂದ್ರಗಳಲ್ಲಿ ಇಟ್ಟು ನೋಡಿಕೊಳ್ಳಲಾಗುತ್ತದೆ. ಶ್ವಾನಗಳನ್ನು ಬ್ರಿಡಿಂಗ್ ಹಾಗೂ ಟ್ರೇನಿಂಗ್ ಸೆಂಟರ್ಗಳಿಗೆ ರವಾನಿಸಲಾಗುತ್ತದೆ. ಇದರ ಜತೆಗೆ ಶ್ವಾನಗಳ ಸಾರಿಗೆ ನಿಯಮದಲ್ಲೂ ಬದಲಾವಣೆ ತರಲಾಗಿದ್ದು, ಶ್ವಾನಗಳು ಹಾಗೂ ಅವುಗಳ ನಿಯಂತ್ರಕರು ಇನ್ಮುಂದೆ ರೈಲಿನ ಫಸ್ಟ್ಕ್ಲಾಸ್ ಬೋಗಿಯಲ್ಲಿ ಪ್ರಯಾಣಿಸಬಹುದಾಗಿದೆ.