ಮದ್ದೂರು: ದೇಶಕ್ಕೆ ಮತ್ತು ವಿಶ್ವಕ್ಕೆ ಅನನ್ಯವಾದ ಕೊಡುಗೆ ನೀಡಿರುವ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಗಳನ್ನು ಪ್ರತಿದಿನ ನೆನೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೋರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ 134 ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವರ ಜನ್ಮ ದಿನದಂದು ಮಾತ್ರ ನೆನೆಯದೆ ಅವರ ವಿಚಾರ ಧಾರೆಗಳನ್ನು ಪ್ರತಿನಿತ್ಯ ಮೆಲಕು ಹಾಕುವ ಮೂಲಕ ಅವರನ್ನು ಪ್ರತಿಕ್ಷಣ ನೆನೆಯುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಾಲು ಸಾಲು ಸಮಸ್ಯೆಗಳನ್ನು ಎದುರಿಸಿ ದಮನಿತರ ಪರವಾಗಿ ಹೋರಾಡಿ ಪ್ರತಿಯೊಬ್ಬರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿಯಲ್ಲಿ ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸಿರುವುದು ಮೆಚ್ಚುಗೆಯ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ ಮಾತನಾಡಿ, ಶಿಕ್ಷಣದ ಮೂಲಕ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ತಮ್ಮ ಅಪಾರವಾದ ಜ್ಞಾನದ ಮೂಲಕ ಹೋರಾಟ ಮಾಡಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ಮೇರು ಶಿಖರ ಬಿ.ಆರ್.ಅಂಬೇಡ್ಕರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೇಷ್ಠ ಸಂವಿಧಾನ ನೀಡಿದ ಬಿ.ಆರ್.ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್ಗೌಡ, ಹಲಗೂರು ವೃತ್ತ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ರೈತ ಹೋರಾಟಗಾರ ಕೀಳಘಟ್ಟ ನಂಜುಂಡಯ್ಯ, ನಿವೃತ್ತ ತಹಸೀಲ್ದಾರ್ ಜಿ.ಕಾಳಯ್ಯ, ಜನಪದ ಕಲಾವಿದ ರಾಮಯ್ಯ, ಎಚ್.ಆರ್.ಸುಶೀಲ್ ಕುಮಾರ್ ಹಾಗೂ ಮುತ್ತಯ್ಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ದಲಿತ ಸಂಘರ್ಷ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ಶಂಕರ್, ಪ್ರಗತಿಪರ ಚಿಂತಕರಾದ ಡಿ.ಹೊಸಹಳ್ಳಿ ಶಿವು, ಸಮಿತಿಯ ಪ್ರಧಾನ ಕಾರ್ಯದರ್ಶಿ ತಗ್ಗಹಳ್ಳಿ ಸುಂದರೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ತಾಲೂಕು ಗೌರವ ಅಧ್ಯಕ್ಷ ಕಬ್ಬಾಳಯ್ಯ, ಹಿರಿಯ ಉಪಾಧ್ಯಕ್ಷರಾದ ಬಿ.ಎಂ.ಸತ್ಯ, ಚಿಕ್ಕರಸಿನಕರೆ ಮೂರ್ತಿ, ದೊರೆಸ್ವಾಮಿ, ಡಿ.ಕೆ.ಕೃಷ್ಣ, ವಕೀಲ ಬೋರಯ್ಯ, ಮುಖಂಡರಾದ ಪುಟ್ಟಣ್ಣ, ನಾಗಭೂಷಣ್, ಜಯಂತಿ ಲಾಲ್ ಪಟೇಲ್, ಅಣ್ಣೂರು ರಾಜಣ್ಣ, ಎಂ.ಶಿವು, ಅಂಬರೀಷ್, ಕರಡಕೆರೆ ಯೋಗೇಶ್ ಇದ್ದರು.
