ನರಗುಂದ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ಸುದೀರ್ಘ 12 ವರ್ಷಗಳು ಗತಿಸಿವೆ. ಮೈಸೂರಿನಲ್ಲಿರುವ ಭಾಷಾ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ರಾಜ್ಯದ ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ವರ್ತಲದಲ್ಲಿ ತಾಲೂಕಾಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಿತ್ಯೋತ್ಸವವನ್ನಾಗಿ ಆಚರಣೆ ಮಾಡಬೇಕು. ಏಕೀಕರಣಕ್ಕೆ ಶ್ರಮಿಸಿರುವ ಎಲ್ಲ ಮಹನೀಯರನ್ನು ಸ್ಮರಿಸುವಂತಾಗಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆಯಾಗಬೇಕು ಎಂದರು.
ಉಪನ್ಯಾಸಕ ಎಸ್.ಜಿ. ಮಣ್ಣೂರಮಠ ಮಾತನಾಡಿ, ಕನ್ನಡಕ್ಕಾಗಿ ನಾಡಿನ ಅನೇಕ ಶರಣರು, ಸಂತರು, ಸಾಹಿತಿಗಳು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ವೈವಿಧ್ಯಮಯ ಸಾಹಿತ್ಯವನ್ನು ಕನ್ನಡ ಭಾಷೆ ಹೊಂದಿರುವುದರಿಂದ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ರಾಜಾರಾಂ ಹಾಗೂ ಸರೋಜಿನಿ ಮಹಿಷಿಯವರ ವರದಿಯಂತೆ ಸರ್ಕಾರವು ಕನ್ನಡ ಭಾಷಾ ಕಲಿಕೆಯನ್ನು 1 ರಿಂದ 7ನೇ ತರಗತಿವರೆಗೆ ಕಡ್ಡಾಯಗೊಳಿಸಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ. 25ರಷ್ಟು ಮೀಸಲಾತಿ ನೀಡಬೇಕು. ಕನ್ನಡ ಭಾಷೆಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿರುವ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಹುಯಿಲಗೋಳ ನಾರಾಯಣರಾವ್ ಅವರನ್ನು ಸರ್ಕಾರ ಸ್ಮರಿಸುವಂತಾಗಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಎ.ಎಚ್.ಮಹೇಂದ್ರ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ಎಎಸ್ಐ ವಿ.ಜಿ. ಪವಾರ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ನಭೀಸಾಬ ಕಿಲ್ಲೇದಾರ, ರವಿ ಚಿಂತಾಲ, ಚನ್ನಬಸಪ್ಪ ಕಂಠಿ, ಮಂಗಳ ಪಾಟೀಲ, ಶಿಕ್ಷಕ ಅರವಿಂದ ಮೇಗೂರ, ಮುತ್ತು ರಾಯರಡ್ಡಿ, ಕನ್ನಡ ರಕ್ಷಣಾ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ಎಸ್.ಎಂ. ಮರಿಗೌಡ್ರ, ಆನಂದ ಬನಪ್ಪನವರ, ವೈ.ಪಿ. ಕೊಣ್ಣೂರ, ಎಂ.ಎಚ್. ಚೂರಿ, ಎಚ್.ಎಸ್. ದಾಸರ, ಲಕ್ಷ್ಮೀಬಾಯಿ ಗಾಯಕವಾಡ, ಚನ್ನು ನಂದಿ, ಹನುಮಂತ ಮಜ್ಜಿಗುಡ್ಡ, ಮಾಲಾ ಪಾಟೀಲ, ವೀರೇಶ ರೋಣದ, ಉಪಸ್ಥಿತರಿದ್ದರು.