ಚಿಕ್ಕಮಗಳೂರು: ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಸಂತ್ರಸ್ತರಾದವರಿಗೆ ಅವಶ್ಯಕ ವಸ್ತುಗಳನ್ನು ವಿತರಿಸುತ್ತಿದೆ ಎಂದು ಸಂಸ್ಥೆ ಜಿಲ್ಲಾ ಚೇರ್ಮನ್ ಪ್ರದೀಪ್ ಗೌಡ ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆಯಲ್ಲಿ ಬುಧವಾರ ಸಂತ್ರಸ್ತರಿಗೆ ತಲುಪಿಸಲು ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ರಾಜ್ಯ ಘಟಕದಿಂದ ಉತ್ತಮ ಗುಣಮಟ್ಟದ ಟಾರ್ಪಲ್ಗಳು, ಸ್ಯಾನಿಟರಿ ಪ್ಯಾಡ್ಗಳು, ಕೊಬ್ಬರಿ ಎಣ್ಣೆ, ಸೋಪು ಇನ್ನಿತರೆ ವಸ್ತುಗಳನ್ನು ಪೂರೈಸಿದೆ. ಅವುಗಳನ್ನು ಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ಥರಾದವರಿಗೆ ಕಳಿಸಿಕೊಡಲಾಗುತ್ತಿದೆ ಎಂದರು.
ಡೆಂೆ ಜ್ವರ ಸಹ ಹೆಚ್ಚಿರುವುದರಿಂದ ಸೊಳ್ಳೆ ಬತ್ತಿಗಳು, ಸೊಳ್ಳೆ ಪರದೆಗಳು, ದಿನ ಬಳಕೆ ವಸ್ತುಗಳನ್ನು ಕಳೆದುಕೊಂಡಿರುವವರಿಗೆ ಅತ್ಯವಶ್ಯಕವಾಗಿ ಬೇಕಿರುವ ಪಾತ್ರೆಗಳ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಆಯಾ ತಾಲೂಕುಗಳಲ್ಲಿ ಸಂಸ್ಥೆಯ ಸ್ಥಳೀಯ ನಿರ್ದೇಶಕರುಗಳು ಸಂತ್ರಸ್ತರನ್ನು ಗುರುತಿಸಿ ಈ ಪರಿಕರಗಳನ್ನು ತಲುಪಿಸಲಿದ್ದಾರೆ. ಸದ್ಯಕ್ಕೆ 25 ಕಿಚನ್ ಸೆಟ್ಗಳು, ತಲಾ 100 ಸೊಳ್ಳೆ ಪರದೆಗಳು, ಸೊಳ್ಳೆ ಬತ್ತಿಗಳು, ಹೈಜಿನ್ ಕಿಟ್ಗಳು ಬಂದಿವೆ. ಇಷ್ಟನ್ನೂ ಸಂತ್ರಸ್ತರ ಅಗತ್ಯಕ್ಕೆ ತಕ್ಕಂತೆ ಕಳಿಸಿಕೊಲಾಗುತ್ತಿದೆ. ಸಂತ್ರಸ್ತರಿಗೆ ತಲುಪಿಸಿದ ಬಗ್ಗೆ ಸೂಕ್ತ ದಾಖಲೆಗಳನ್ನು ರಾಜ್ಯ ಘಟಕಕ್ಕೆ ಕಳಿಸಿಕೊಡಲಾಗುವುದು. ನಂತರ ಇನ್ನಷ್ಟು ನೆರವು ಲಭ್ಯವಾಗಲಿದೆ. ಈಗಾಗಲೇ ಮೂಡಿಗೆರೆ ಭಾಗಕ್ಕೆ ಕಳಿಸಲಾಗಿದೆ. ಮಾಕೋಡು, ಬ್ಯಾರವಳ್ಳಿಗೆ ಇಂದು ಕಳಿಸಲಾಗುತ್ತಿದೆ. ತರೀಕೆರೆ ಭಾಗಕ್ಕೆ ನಾಳೆ ಕಳಿಸಲಾಗುವುದು ಎಂದರು.
ರೆಡ್ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ರಸೂಲ್ ಖಾನ್, ಉಪ ಚೇರ್ಮನ್, ಪವನ್ ಡಿ.ಶೆಟ್ಟಿ, ನಿರ್ದೇಶಕರಾದ ವಿಲಿಯಂ ಪೆರೆರಾ, ಡಾ. ಸುಂದರಗೌಡ, ಜೆ.ವಿನಾಯಕ್, ಚಂದನ್ ಕುಮಾರ್ ಇತರರಿದ್ದರು.
