ನರೇಗಲ್ಲ: ಹನುಮಾನ್ ಚಾಲೀಸಾ ಪಠಣದಿಂದ ಭಯ, ಆತಂಕ, ಅನುಮಾನ ದೂರವಾಗಿ ಆಂತರಿಕ ಶಾಂತಿ ಹೆಚ್ಚಿಸಿ ಮನಸಿಗೆ ದೊಡ್ಡ ಸಮಾಧಾನ ನೀಡುತ್ತದೆ ಎಂದು ಹೆಬ್ಬಳ್ಳಿಯ ಚೈತನ್ಯಾಶ್ರಮದ ಪ.ಪೂ ದತ್ತಾವಧೂತ ಮಹಾರಾಜರು ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದ ಸಂತೆ ಬಜಾರಿನ ಮಾರುತಿ ದೇವಸ್ಥಾನದಲ್ಲಿ ಭಾನುವಾರ ಅಖಂಡ 11 ಗಂಟೆ ಸಾಮೂಹಿಕ ಹನುಮಾನ್ ಚಾಲೀಸ್ಾ ಪಠಣದ ನಂತರ ಅವರು ಆಶೀರ್ವಚನ ನೀಡಿ, ಆಧ್ಯಾತ್ಮಿಕ ಪರಂಪರೆ ಭಾರತದ ಜೀವಾಳವಾಗಿದೆ. ಅದಕ್ಕಾಗಿಯೇ ಇಲ್ಲಿ ಜನಿಸಿದಷ್ಟು ಸಾಧು, ಸಂತರು, ಸತ್ಪುರುಷರು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಜನಿಸಿಲ್ಲ. ಹನುಮಾನ್ ಚಾಲೀಸಾ ಪ್ರತಿದಿನ ಪಠಣ ಮಾಡಿದರೆ ನಿಮ್ಮೊಳಗಿನ ಆಧ್ಯಾತ್ಮಿಕತೆಗೆ ಉತ್ತೇಜನ ಸಿಗುತ್ತದೆ. ಅಂತಃಶಕ್ತಿ ಹೆಚ್ಚುತ್ತದೆ. ಜೀವನದಲ್ಲಿ ಏನೇ ಕಷ್ಟ ಬಂದರೂ ಧೈರ್ಯ-ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ನಿಮಗೆ ಒದಗಿ ಬರುತ್ತದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಹನುಮಾನ್ ಚಾಲೀಸಾ ಪಠಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ತೊಲಗಿ. ಮನೆಯು ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತದೆ. ದುಷ್ಟ ಶಕ್ತಿಗಳಿಂದ ಕುಟುಂಬದವರನ್ನು ಕಾಪಾಡುತ್ತದೆ. ಪ್ರಪಂಚದ ಸಂರಕ್ಷಕ ಮಾರುತಿಯಾಗಿದ್ದಾನೆ ಎಂದರು. 11 ಗಂಟೆಗಳ ಹನುಮಾನ್ ಚಾಲೀಸ್ ನಂತರ 1 ಗಂಟೆ ವೈಖರಿ ಜಪ ಜರುಗಿತು. ಆರ್.ಬಿ. ಕುಲಕರ್ಣಿ ದಂಪತಿ ಹನುಮಾನ ಚಾಲೀಸಾದ ಸಂಕಲ್ಪ ನೆರವೇರಿಸಿದರು. ದತ್ತಾತ್ರೇಯ ಕುಲಕರ್ಣಿ, ರಘುನಾಥ ಕುಲಕರ್ಣಿ, ಎ.ಜಿ. ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಭರತ ಕುಲಕರ್ಣಿ, ಭಗತ್ ಕುಲಕರ್ಣಿ, ಸಂತೋಷ ರಾಮದಾಸಿ, ಗಿರೀಶ ಕುಲಕರ್ಣಿ, ವಿನಾಯಕ ಜೋಶಿ, ರವಿ ಇಚಲಕರಂಜಿ, ಅಜೀತ ಕುಲಕರ್ಣಿ, ಜಗದೀಶ ಕರಡಿ, ಎ.ಎ. ಕುಲಕರ್ಣಿ, ಶ್ರೀಧರ ಕಟಗೇರಿ, ಕೃಷ್ಣಾ ಕೊಪ್ಪಳ, ದಿಲೀಪ ಆರ್., ಅಭಯ ಕುಲಕರ್ಣಿ, ಚೈತನ್ಯ ಅಲಬೂರ ಇತರರಿದ್ದರು.
