RCB: ಐಪಿಎಲ್ 18ನೇ ಆವೃತ್ತಿಯಲ್ಲಿ ಮೊದಲನೇ ಪಂದ್ಯದಿಂದಲೂ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುತ್ತ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಫಿಲ್ ಸಾಲ್ಟ್, ಜೋಸ್ ಹೆಜಲ್ವುಡ್ ಸೇರಿದಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರೊಟ್ಟಿಗೆ ಲೀಗ್ನಲ್ಲಿ ಮಿಂಚುತ್ತಿರುವ ಆರ್ಸಿಬಿ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಇದು ಫ್ರಾಂಚೈಸಿಯ ಅಭಿಮಾನಿಗಳಲ್ಲಿ ‘ಈ ಸಲ ಕಪ್ ನಮ್ದೇ’ ಎಂಬ ವಿಶ್ವಾಸ, ನಂಬಿಕೆಯನ್ನು ಆಳವಾಗಿಸಿದೆ.
ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ 5 ಗೆದ್ದು ಮೂರು ಸೋತಿರುವ ಆರ್ಸಿಬಿ ತವರಿನಲ್ಲಿ ಮುಗ್ಗರಿಸಿ, ಇತರೆ ಮೈದಾನಗಳಲ್ಲಿ ಅಬ್ಬರಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ಗೊಂದಲ, ಬೇಸರ ಮೂಡಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ಆಡಿರುವ ಮೂರು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಚಾಲೆಂಜರ್ಸ್, ಕ್ಯಾಚ್ ಕೈಚೆಲ್ಲುವುದು, ಫೀಲ್ಡಿಂಗ್ನಲ್ಲಿ ಎಡವಟ್ಟು ಮಾಡಿಕೊಳ್ಳುವುದು ಸತತ ಸೋಲಿಗೆ ಕಾರಣವಾಗಿದೆ. ಇತರೆ ಫ್ರಾಂಚೈಸಿಗಳ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ನಮ್ಮ ತವರಿನಲ್ಲಿ ಏಕೆ ಒಳ್ಳೆಯ ಪ್ರದರ್ಶನ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿದೆ. ಸದ್ಯ ಇದೇ ಈಗ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಸಲಹೆಗೆ ಕಾರಣವಾಗಿದೆ.
ತವರಿನಲ್ಲಿ ಗೆಲುವಿನ ಖಾತೆ ತೆರೆಯದ ಆರ್ಸಿಬಿಗೆ ಕಿವಿಮಾತು ನೀಡಿರುವ ಅಂಬಟಿ ರಾಯುಡು, “ಆರ್ಸಿಬಿಗೆ ವಿರಾಟ್ ಕೊಹ್ಲಿ ಅತ್ಯುತ್ತಮ ಹಾಗೂ ಸ್ಫೋಟಕ ಬ್ಯಾಟರ್. ಕ್ರೀಸ್ನಲ್ಲಿ ಕೊಹ್ಲಿ ಕೊನೆಯವರೆಗೂ ಉಳಿಯಬೇಕು. ಅವರೇ ತಂಡಕ್ಕೆ ಬಲ. ಫಿಲ್ ಸಾಲ್ಟ್, ರಜತ್ ಪಟಿದಾರ್ ಮತ್ತು ಜಿತೇಶ್ ಶರ್ಮ ಕೂಡ ವಿರಾಟ್ಗೆ ಸಾಥ್ ನೀಡವ ಬ್ಯಾಟರ್ಗಳು. ಇಲ್ಲಿ ಬ್ಯಾಟಿಂಗ್ ಅಷ್ಟು ಸುಲಭವಿಲ್ಲ. ಹೀಗಾಗಿ ಒಬ್ಬ ವಿರಾಟ್ ಕೊನೆಯವರೆಗೂ ನಿಂತು ಆಡಬೇಕು” ಎಂದಿದ್ದಾರೆ. ಅಸಲಿಗೆ ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಲಿದೆಯಾ? ಅಥವಾ ಮತ್ತೊಂದು ಸೋಲಿಗೆ ಗುರಿಯಾಗಲಿದೆಯಾ? ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).