ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭೇಟಿಗೆ ಬಂದ ವೀರ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ಗೆ ನಿರಾಶೆಯಾಗಿದೆ.
ಮುಖ್ಯಮಂತ್ರಿ ಅವರ ಭೇಟಿಗೆ ಮನವಿ ಮಾಡಿದ್ದರೂ ಉತ್ತರ ಬಂದಿರಲಿಲ್ಲ. ಆದರೆ ಈ ದಿನ ಖುದ್ದಾಗಿ ಬಂದರೂ ಅವರ ದರ್ಶನವಾಗಲಿಲ್ಲ ಎಂದು ರಂಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಅವರಿಗೆ ನನ್ನ ಜತೆ ಮಾತನಾಡಲು ಒಂದು ನಿಮಿಷದ ಬಿಡುವು ಇರಲಿಲ್ಲವೇ ಎಂದು ಪ್ರಶ್ನಿಸಿದ ರಂಜಿತ್, ಸಾವರ್ಕರ್ ಹೆಸರಿಗಾದರೂ ಅವರು ಬೆಲೆ ಕೊಟ್ಟು ಮಾತನಾಡಬಹುದಿತ್ತು. ಇದರಿಂದ ನನಗೆ ನಿರಾಶೆಯಾಗಿದೆ ಎಂದಿದ್ದಾರೆ. ಅಲ್ಲದೆ ಇದು ಸಾವರ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ರಂಜಿತ್, ಸಾವರ್ಕರ್ ಅವರ ಬಗ್ಗೆ ಇಲ್ಲದ ಆರೋಪಗಳನ್ನು ಮಾಡಿದ ಹಲವರ ಮೇಲೆ ದೂರು ದಾಖಲಿಸಲಾಗುವುದು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸೇವಾ ದಳದ ವಿರುದ್ಧವೂ ದೂರು ದಾಖಲಿಸುವುದಾಗಿ ತಿಳಿಸಿದರು. (ಏಜೆನ್ಸೀಸ್)