ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗಿದ್ದಾಗ ದೇಶೀಯ ಕ್ರಿಕೆಟ್ನಲ್ಲಿ ಕಡ್ಡಾಯವಾಗಿ ಆಡಬೇಕೆಂಬ ಬಿಸಿಸಿಐ ಮಾರ್ಗಸೂಚಿಯ ನಡುವೆಯೂ, ಭಾರತ ತಂಡದ ಬ್ಯಾಟರ್ ಕೆಎಲ್ ರಾಹುಲ್ ಜನವರಿ 23ರಂದು ಆರಂಭವಾಗಲಿರುವ ರಣಜಿ ಟ್ರೋಫಿಯ 2ನೇ ಚರಣ ಮತ್ತು 6ನೇ ಸುತ್ತಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಸೋಮವಾರ 16 ಆಟಗಾರರನ್ನು ಹೆಸರಿಸಿದೆ. ಏಕದಿನ ಟೂರ್ನಿ ಬಳಿಕ ರಣಜಿ ತಂಡದಿಂದಲೂ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಅವರನ್ನು ಕೈಬಿಡಲಾಗಿದ್ದು, ರಾಜ್ಯ ತಂಡದ ಬಾಗಿಲನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂಬ ಸಂದೇಶವನ್ನು ಮತ್ತೊಮ್ಮೆರವಾನಿಸಿದೆ.

ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಬಳಿಕ ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ರಾಹುಲ್, ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಲಿದ್ದಾರೆ ಎನ್ನಲಾಗಿತ್ತು. ಆದರೆ ರಾಹುಲ್ ಸದ್ಯ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬಿಸಿಸಿಐನ ಅನುಮತಿ ಜತೆಗೆ ವೈದ್ಯಕೀಯ ತಂಡದ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ. ಜನವರಿ 30ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಅಂತಿಮ ಸುತ್ತಿನ ಲೀಗ್ ಪಂದ್ಯದಲ್ಲಿ ಆಡಲು ರಾಹುಲ್ಗೆ ಅವಕಾಶವಿದೆ. ಬಳಿಕ ಫೆಬ್ರವರಿ 6ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.
ಆಸೀಸ್ ಪ್ರವಾಸದ ಬಳಿಕ ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ತಂಡ ಸೇರಿಕೊಂಡಿದ್ದ ದೇವದತ್ ಪಡಿಕ್ಕಲ್, ವೇಗಿ ಪ್ರಸಿದ್ಧ ಕೃಷ್ಣ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಬಲ ತುಂಬಲಿದ್ದು, 5 ವರ್ಷಗಳ ಬಳಿಕ ಟ್ರೋಫಿ ಜಯಿಸಿದ್ದ ತಂಡದ ಬಹುತೇಕ ಆಟಗಾರರು ಸ್ಥಾನ ಪಡೆದಿದ್ದಾರೆ. ಮನೀಷ್ ಪಾಂಡೆ ಬದಲಿಗೆ ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ರಣಜಿಗೂ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಮೊದಲ ಚರಣದಲ್ಲಿ ಮನೀಷ್ ಪಾಂಡೆ ರಾಜ್ಯ ರಣಜಿ ತಂಡದ ಉಪನಾಯಕನಾಗಿದ್ದರು. ಕಿಶನ್ ಎಸ್ ಬಿದರೆ, ಲವನೀತ್ ಸಿಸೋಡಿಯಾ ಸ್ಥಾನ ಕಳೆದುಕೊಂಡಿರುವ ಮತ್ತಿಬ್ಬರು.
ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ ಪಡಿಕ್ಕಲ್, ಅನೀಶ್ ಕೆವಿ, ಸ್ಮರಣ್ ಆರ್., ಶ್ರೀಜಿತ್ ಕೆಎಲ್ (ವಿ.ಕೀ), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಸುಜಯ್ ಸಾತೇರಿ (ವಿ.ಕೀ), ನಿಕಿನ್ ಜೋಸ್, ಪ್ರಸಿದ್ಧ ಕೃಷ್ಣ, ಕೌಶಿಕ್ ವಿ., ಅಭಿಲಾಷ್ ಶೆಟ್ಟಿ, ವಿದ್ಯಾಧರ್ ಪಾಟೀಲ್, ಮೊಹ್ಸಿನ್ ಖಾನ್, ಯಶೋವರ್ಧನ್ ಪರಾಂತಪ್.
ರಣಜಿ ಕೊನೇ ಲೀಗ್ನಲ್ಲಿ
ವಿರಾಟ್ ಕೊಹ್ಲಿ ಕಣಕ್ಕೆ?
ಕುತ್ತಿಗೆ ನೋವಿನ ಕಾರಣ ನೀಡಿ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ ಜ.23ರಿಂದ ನಡೆಯಲಿರುವ ಪಂದ್ಯಕ್ಕೆ ದೆಹಲಿ ತಂಡದಿಂದ ಹೊರಗುಳಿದಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಜ.30ರಿಂದ ನಡೆಯಲಿರುವ ಕೊನೇ ಲೀಗ್ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಆಡಲಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿ ಕಣಕ್ಕಿಳಿದರೆ, 13 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಿದಂತಾಗುತ್ತದೆ. 2012ರಲ್ಲಿ ಕೊನೆಯದಾಗಿ ಕೊಹ್ಲಿ ರಣಜಿ ಆಡಿದ್ದರು. ಕೊನೇ ಲೀಗ್ ಪಂದ್ಯದಲ್ಲಿ ಆಡಲು ತಾನು ಲಭ್ಯನಿದ್ದೇನೆ ಎಂದು ಕೊಹ್ಲಿ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಈಗಾಗಲೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಲಯಕ್ಕೆ ಮರಳಲು ಕೂಡ ಕೊಹ್ಲಿಗೆ ಇದು ಉತ್ತಮ ವೇದಿಕೆಯಾಗಲಿದೆ.
ಸಿರಾಜ್ ಕೂಡ ಆಡಲು ರೆಡಿ
ದೇಶೀಯ ಕ್ರಿಕೆಟ್ ಕಡೆ ಮುಖಮಾಡಿರುವ ಭಾರತದ ಸ್ಟಾರ್ ಕ್ರಿಕೆಟಿಗರ ಪಟ್ಟಿಗೆ ವೇಗಿ ಮೊಹಮದ್ ಸಿರಾಜ್ ಹೊಸ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕಡೆಗಣಿಸಲ್ಪಟ್ಟಿರುವ ಸಿರಾಜ್, ಜ.30ರಿಂದ ವಿದರ್ಭ ವಿರುದ್ಧ ನಡೆಯಲಿರುವ ರಣಜಿಯ ಕೊನೇ ಲೀಗ್ ಪಂದ್ಯದಲ್ಲಿ ಹೈದರಾಬಾದ್ ಪರ ಆಡಲಿದ್ದಾರೆ ಎನ್ನಲಾಗಿದೆ. ಕಳೆದ ಆಸೀಸ್ ಪ್ರವಾಸದ ಎಲ್ಲ 5 ಟೆಸ್ಟ್ಗಳಲ್ಲಿ ಆಡಿದ್ದ ಸಿರಾಜ್, 20 ವಿಕೆಟ್ ಕಬಳಿಸಿದ್ದರು. 2022ರಿಂದ ಏಕದಿನ ಕ್ರಿಕೆಟ್ನಲ್ಲಿ ಸರ್ವಾಧಿಕ 72 ವಿಕೆಟ್ ಕಬಳಿಸಿರುವ ನಡುವೆಯೂ ಸಿರಾಜ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿಲ್ಲ.