ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಯಾವುದೆ ಚತುಷ್ಪದ ನಿರ್ಮಾಣ ಮಾಡಬೇಕಾದರೆ ರಸ್ತೆಯ ಅಕ್ಕಪಕ್ಕ ಅತಿಕ್ರಮಣ ತೆರವುಗೊಳಿಸಿ, ಗಟಾರು, ಪುಟ್ಪಾತ್ಗೆ ಜಾಗ ಬಿಟ್ಟು ವೈಜ್ಞಾನಿಕವಾಗಿ ನಿರ್ಮಿಸಬೇಕು. ಆದರೆ, ನಗರದಲ್ಲಿ ನಿರ್ಮಿಸುತ್ತಿರುವ ಹಲಗೇರಿ ಚತುಷ್ಪದ ರಸ್ತೆಯ ಕಾಮಗಾರಿಯನ್ನು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಮಾಡಲಾಗಿದೆ.
ಅಲ್ಲದೆ ಕಾಮಗಾರಿಯ ಅವಧಿ ಮುಗಿದು 9 ತಿಂಗಳು ಕಳೆಯುತ್ತ ಬಂದರೂ ರಸ್ತೆ ಮಧ್ಯೆದಲ್ಲಿರುವ ಮ್ಯಾನ್ಹೋಲ್ ಮುಚ್ಚುವ, ಅಕ್ಕಪಕ್ಕ ಪೇವರ್ಸ್ ಅಳವಡಿಕೆ, ರಸ್ತೆ ವಿಭಜಕ ನಿರ್ಮಾಣ, ವಿದ್ಯುತ್ ಕಂಬ ಅಳವಡಿಕೆ ಸೇರಿ ಇತರ ಕಾಮಗಾರಿಗಳು ಬಾಕಿ ಉಳಿದುಕೊಂಡಿದೆ. ಹೀಗಾಗಿ ಸರ್ಕಾರ ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರೂ. ಖುರ್ಚು ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ.
ಲೋಕೋಪಯೋಗಿ ಇಲಾಖೆ ವತಿಯಿಂದ ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಹಲಗೇರಿ ರಸ್ತೆ (ಸಮ್ಮಸಗಿ-ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ದಾರಿ)ಯನ್ನು ಚತುಷ್ಪದ ರಸ್ತೆಯನ್ನಾಗಿ ಮಾಡಲು ಮಂಜೂರಾತಿ ನೀಡಲಾಗಿತ್ತು. ಈ ರಸ್ತೆಯೂ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿಯ ಹಲಗೇರಿ ಕ್ರಾಸ್ನಿಂದ ಹೊರವಲಯದ ಎನ್ಎಚ್-48 ರಸ್ತೆಯ ಸೇತುವೆವರೆಗೆ ಒಟ್ಟು 1.83 ಕಿ.ಮೀ. ಉದ್ದವಿದೆ.
ನಗರದ ಮಧ್ಯೆ ಭಾಗದಿಂದ ಹಾಯ್ದು ಹೋಗಿರುವ ಈ ರಸ್ತೆ ನಗರ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾೃನ್ ಪ್ರಕಾರ ಒಟ್ಟು 24 ಮೀಟರ್ ಅಗಲವಿದೆ. ಬಹುತೇಕ ಕಡೆಗಳಲ್ಲಿ ರಸ್ತೆಯು ಅತಿಕ್ರಮಣವಾಗಿದೆ. ಆದರೆ, ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ಮಾಣಕ್ಕೂ ಮುನ್ನ ಅತಿಕ್ರಮಣ ತೆರವುಗೊಳಿಸಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಅಲ್ಲದೆ ಈಗಾಗಲೇ 1.3 ಕಿ.ಮೀ.ನಷ್ಟು ರಸ್ತೆ ಸಹ ನಿರ್ಮಿಸಲಾಗಿದೆ. ಅದರಲ್ಲಿ ಕೆಲವೆಡೆ 18 ಮೀಟರ್, ಇನ್ನೂ ಕೆಲವೆಡೆ 19 ಮೀಟರ್ನಷ್ಟು ರಸ್ತೆ ಅಗಲವಿದೆ ಹೊರತು 24 ಮೀಟರ್ ಅಗಲೀಕರಣ ರಸ್ತೆ ಕಾಣಿಸುತ್ತಿಲ್ಲ. ಅಲ್ಲದೆ ರಸ್ತೆಯುದ್ದಕ್ಕೂ ಗಟಾರು, ಪುಟ್ಪಾತ್ ನಿರ್ಮಾಣಕ್ಕೂ ಸಹ ಜಾಗ ಬಿಟ್ಟಿಲ್ಲ. ಕೆಇಬಿ ಗ್ರೀಡ್ ಕಾಂಪೌಂಡ್ಗೆ ಹೊಂದಿಕೊಂಡು ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ.
ಈ ರೀತಿ ರಸ್ತೆ ನಿರ್ಮಾಣದಿಂದ ಅಕ್ಕಪಕ್ಕದ ನಿವಾಸಿಗಳು, ಪಾದಚಾರಿಗಳು ಹೇಗೆ ಓಡಾಡಬೇಕು. ಹಲಗೇರಿ ರಸ್ತೆಯಲ್ಲಿ ನಿತ್ಯವೂ ಎಪಿಎಂಸಿಗೆ ಬರುವ ಲಾರಿ, ಗೂಡ್ಸ್ ವಾಹನಗಳು ಹಾಗೂ ಬಸ್ಗಳ ಸಂಚಾರ ಅಧಿಕವಾಗಿರುತ್ತದೆ. ಇಂತಹ ಸಮಯದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ರಸ್ತೆ ನಿರ್ಮಿಸಬೇಕಾದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿಸಿದರೆ, ಜನರ ಗತಿ ಏನು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಅರ್ಧಕ್ಕೆ ನಿಂತ ಕಾಮಗಾರಿ…
ರಸ್ತೆ ಕಾಮಗಾರಿ ಆರಂಭಿಸಿ ವರ್ಷಗಳೆ ಕಳೆದಿವೆ. ಅಲ್ಲದೆ ಕಾಮಗಾರಿಯ ಅವಧಿ ಮುಗಿದು 9 ತಿಂಗಳು ಕಳೆಯುತ್ತ ಬಂದಿದ್ದು, ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕಳೆದ ನಾಲ್ಕೈದು ತಿಂಗಳಿಂದ ಸಂಪೂರ್ಣ ಕಾಮಗಾರಿಯನ್ನು ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಹಳೆ ರಸ್ತೆಯುದ್ದಕ್ಕೂ ಮೊಣಕಾಲವರೆಗೂ ತಗ್ಗು-ಗುಂಡಿಗಳು ಬಿದ್ದಿವೆ. ಈಗಾಗಲೆ ನಿರ್ಮಿಸಿದ ರಸ್ತೆಯ ಮಧ್ಯೆಯಿರುವ ಚರಂಡಿ ಮ್ಯಾನಹೋಲ್ಗಳು ಸಹ ರಸ್ತೆಯಿಂದ ಕೆಳಗೆ ಇಳಿದಿದ್ದು, ಬೈಕ್ ಸವಾರರು ರಾತ್ರಿ ಸಮಯದಲ್ಲಿ ಕೊಂಚ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.