ರಾಣೆಬೆನ್ನೂರ: ಸಾಂಪ್ರದಾಯಿಕ ವೀರಶೈವ ಆಚಾರ, ವಿಚಾರಗಳನ್ನು ಅರ್ಥೈಯಿಸಿಕೊಳ್ಳುವ ಮೂಲಕ ಪಾಲಕರು ಮಕ್ಕಳಿಗೆ ಸಂಸ್ಕಾರ ಬಳಸುವ ಪ್ರಯತ್ನಗಳನ್ನು ಮಾಡಬೇಕು. ಇಲ್ಲವಾದರೆ ಸಂಸ್ಕಾರ ಕಲಿಸದ ಪಾಲಕರೇ ಮಕ್ಕಳಿಗೆ ಶತ್ರುಗಳಾಗುವರು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ಇಲ್ಲಿಯ ಚೆನ್ನೇಶ್ವರ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಜ್ಞಾನವಾಹಿನಿ 292ನೇ ಮಾಸಿಕ ಧರ್ಮ ಸಭೆ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಇಂದಿನ ದಿನಮಾನದಲ್ಲಿ ಹೆಣ್ಣು ಮಕ್ಕಳಿಗೆ ಸಿಗುವಷ್ಟು ಸಂಸ್ಕಾರ ಗಂಡು ಮಕ್ಕಳಿಗೆ ಸಿಗದೆ ಇರುವುದು ಸಮಾಜದ ಉತ್ತಮ ಬೆಳವಣಿಗೆ ಅಲ್ಲ. ಮಕ್ಕಳ ಮೇಲೆ ಗಮನವಿಟ್ಟು ಅವರನ್ನು ದುಷ್ಟ ಶಕ್ತಿಗಳಿಂದ ದುಷ್ಟ ವಿಚಾರಗಳಿಂದ ದೂರವಿರಿಸಬೇಕು. ಉತ್ತಮ ಬೆಳೆ ಬೆಳೆಯಲು ಉತ್ತಮ ಬೀಜಗಳನ್ನೇ ಬಿತ್ತಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ರಾಜಣ್ಣ ಮೋಟಗಿ ಅವರಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು. ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ದಾನೇಶ್ವರಿ ಅಕ್ಕನ ಬಳಗದಿಂದ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಮಠದ ಉಪಾಧ್ಯಕ್ಷ ಬಸವರಾಜಣ್ಣ ಪಟ್ಟಣಶೆಟ್ಟಿ, ಲಿಂಗವಂತ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎನ್. ಜಂಗಳೇರ, ಎಸ್.ಎಂ. ಸಂಕಮ್ಮನವರ, ಮಠದ ಕಾರ್ಯದರ್ಶಿ ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಬಿದ್ದಾಡೆಪ್ಪ ಚಕ್ರಸಾಲಿ, ನಿಜಗುಣಯ್ಯ ಹಿರೇಮಠ, ನಿವೃತ್ತ ಶಿಕ್ಷಕ ವಿ.ವಿ. ಹರಪನಹಳ್ಳಿ, ಕಸ್ತೂರಮ್ಮ ಪಾಟೀಲ, ಸುನಂದಮ್ಮ ತಿಳವಳ್ಳಿ, ವೀರಣ್ಣ ತೊಗರ್ಸಿ, ಉಮೇಶಣ್ಣ ಗುಂಡಗಟ್ಟಿ, ಸೋಮನಾಥ ಹಿರೇಮಠ, ಇತರರು ಉಪಸ್ಥಿತರಿದ್ದರು.
