ಮಂಗಳೂರು: ಯುವಜನರನ್ನು ಹೊರಗುತ್ತಿಗೆಯಲ್ಲಿ ನಾಲ್ಕು ವರ್ಷ ಅವಧಿಗೆ ಸೈನಿಕರಾಗಿ ನೇಮಿಸಿಕೊಳ್ಳುವ ಅಗ್ನಿಪಥ್ ಯೋಜನೆಯಿಂದ ನಿರುದ್ಯೋಗ ನಿವಾರಣೆಗೆ ಅವಕಾಶವಿಲ್ಲ. ಸೈನ್ಯದ ಸಾಮರ್ಥ್ಯವೂ ವೃದ್ಧಿಯಾಗುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದ್ದರಿಂದ ಈ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ. ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನಿಯಮ ಪ್ರಕಾರ 5 ವರ್ಷ ಸರ್ಕಾರಿ ಉದ್ಯೋಗ ಮಾಡಿದರೆ ಅವರಿಗೆ ನಿವೃತ್ತಿ ಪಿಂಚಣಿ, ಇತರ ಸೌಲಭ್ಯಗಳನ್ನು ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಅಗ್ನಿಪಥ್ ಅವಧಿಯನ್ನು 4 ವರ್ಷಕ್ಕೆ ಸೀಮಿತಗೊಳಿಸಿದ್ದಾರೆ. ನಾಲ್ಕು ವರ್ಷ ಸೇವೆಯ ಬಳಿಕ ಸೆಕ್ಯೂರಿಟಿ ಗಾರ್ಡ್ ಇತ್ಯಾದಿ ಕೆಲಸ ಸಿಗುತ್ತದೆ ಎಂದು ಕೆಲವರು ಹೇಳುವ ಮೂಲಕ ಸೈನ್ಯಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಳಿನ್ ಹಾಸ್ಯಗಾರನ ಪಾತ್ರ: ಅಗ್ನಿಪಥ್ ಯೋಜನೆಗೆ ನಾವು ಕಾಂಗ್ರೆಸ್ ನಾಯಕರ ಮಕ್ಕಳನ್ನು ಆಹ್ವಾನಿಸಿಲ್ಲ ಎನ್ನುವ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಅವರ ಮಾತಿಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಹಾಸ್ಯಗಾರನ ಪಾತ್ರ ನಿರ್ವಹಿಸುತ್ತಿರುವ ಅವರ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಾಲೆಟ್ ಪಿಂಟೋ, ಹರಿನಾಥ್, ನವೀನ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.