More

    ದ್ವೇಷ ರಾಜಕಾರಣದಿಂದ ನಾವು ಗೆಲ್ಲುವುದಿಲ್ಲ, ನಮ್ಮ ಸಮಗ್ರತೆಯನ್ನು ಅನುಮಾನಿಸಬೇಡಿ: ರಾಜನಾಥ್​ ಸಿಂಗ್​

    ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಎಲ್ಲ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಪ್ರಚಾರದಲ್ಲಿ ಭಾಗಿಯಾಗಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಾವು ದ್ವೇಷ ರಾಜಕಾರಣ ಮೂಲಕ ಚುನಾವಣೆ ಗೆಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.

    ನಿನ್ನೆ (ಜ. 29) ಆದರ್ಶ ನಗರದಲ್ಲಿ ಪ್ರಚಾರ ಸಮಾವೇಶ ನಡೆದಿದ್ದು, ಅದರಲ್ಲಿ ಮುಖ್ಯ ಪ್ರಚಾರಕರಾಗಿ ರಾಜನಾಥ್​ ಸಿಂಗ್​ ಆಗಮಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ಅವರು, “ನಮ್ಮ ಪಕ್ಷ ದ್ವೇಷ ರಾಜಕಾರಣವನ್ನು ಮಾಡುವುದಿಲ್ಲ. ಹಾಗೆ ಮಾಡಿ ಗೆಲ್ಲುವ ಗೆಲುವು ನಮಗೆ ಬೇಡ.” ಎಂದು ಹೇಳಿದರು.

    ಸಿಎಎ ಕುರಿತಾಗಿ ಮಾತನಾಡಿದ ಸಿಂಗ್​, “ದೆಹಲಿಯ ಕೆಲ ಪ್ರದೇಶಗಳಲ್ಲಿ ಸಿಎಎ ವಿರೋಧದ ಪ್ರತಿಭಟನೆ ಜೋರಾಗಿದೆ. ಆದರೆ ಸಿಎಎ ಕುರಿತಾಗಿ ಮುಸ್ಲಿಂ ಬಾಂಧವರು ಹೆದರುವುದು ಬೇಡ. ಮುಸ್ಲಿಂ ಧರ್ಮದವರ ಪೌರತ್ವ ತೆಗದುಹಾಕಿ ಅವರನ್ನು ದೇಶದಿಂದ ಹೊರಗಟ್ಟಲಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಆ ರೀತಿಯಲ್ಲಿ ಆಗುವುದಿಲ್ಲ. ನೀವು ನಮಗೆ ಮತ ನೀಡದಿದ್ದರೂ ತೊಂದರೆ ಇಲ್ಲ, ಆದರೆ ನಮ್ಮ ಸಮಗ್ರತೆ ಬಗ್ಗೆ ಅನುಮಾನಿಸಬೇಡಿ. ದೇಶದ ರಕ್ಷಣಾ ಸಚಿವನಾಗಿ ದೇಶದ ಪ್ರತಿಯೊಬ್ಬ ಮುಸ್ಲಿಂ ಬಾಂಧವನೂ ಸಹ ದೇಶದ ಪ್ರಜೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಸರ್ಕಾರಕ್ಕೆ ಆ ರೀತಿಯ ದುರುದ್ದೇಶ ಇದ್ದಿದ್ದರೆ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಎನ್ನುವ ಘೋಷಣೆಯನ್ನು ಕೂಗುತ್ತಿರಲಿಲ್ಲ” ಎಂದು ಹೇಳಿದರು.

    70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts