ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಎಲ್ಲ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಪ್ರಚಾರದಲ್ಲಿ ಭಾಗಿಯಾಗಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಾವು ದ್ವೇಷ ರಾಜಕಾರಣ ಮೂಲಕ ಚುನಾವಣೆ ಗೆಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ (ಜ. 29) ಆದರ್ಶ ನಗರದಲ್ಲಿ ಪ್ರಚಾರ ಸಮಾವೇಶ ನಡೆದಿದ್ದು, ಅದರಲ್ಲಿ ಮುಖ್ಯ ಪ್ರಚಾರಕರಾಗಿ ರಾಜನಾಥ್ ಸಿಂಗ್ ಆಗಮಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ಅವರು, “ನಮ್ಮ ಪಕ್ಷ ದ್ವೇಷ ರಾಜಕಾರಣವನ್ನು ಮಾಡುವುದಿಲ್ಲ. ಹಾಗೆ ಮಾಡಿ ಗೆಲ್ಲುವ ಗೆಲುವು ನಮಗೆ ಬೇಡ.” ಎಂದು ಹೇಳಿದರು.
ಸಿಎಎ ಕುರಿತಾಗಿ ಮಾತನಾಡಿದ ಸಿಂಗ್, “ದೆಹಲಿಯ ಕೆಲ ಪ್ರದೇಶಗಳಲ್ಲಿ ಸಿಎಎ ವಿರೋಧದ ಪ್ರತಿಭಟನೆ ಜೋರಾಗಿದೆ. ಆದರೆ ಸಿಎಎ ಕುರಿತಾಗಿ ಮುಸ್ಲಿಂ ಬಾಂಧವರು ಹೆದರುವುದು ಬೇಡ. ಮುಸ್ಲಿಂ ಧರ್ಮದವರ ಪೌರತ್ವ ತೆಗದುಹಾಕಿ ಅವರನ್ನು ದೇಶದಿಂದ ಹೊರಗಟ್ಟಲಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಆ ರೀತಿಯಲ್ಲಿ ಆಗುವುದಿಲ್ಲ. ನೀವು ನಮಗೆ ಮತ ನೀಡದಿದ್ದರೂ ತೊಂದರೆ ಇಲ್ಲ, ಆದರೆ ನಮ್ಮ ಸಮಗ್ರತೆ ಬಗ್ಗೆ ಅನುಮಾನಿಸಬೇಡಿ. ದೇಶದ ರಕ್ಷಣಾ ಸಚಿವನಾಗಿ ದೇಶದ ಪ್ರತಿಯೊಬ್ಬ ಮುಸ್ಲಿಂ ಬಾಂಧವನೂ ಸಹ ದೇಶದ ಪ್ರಜೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಸರ್ಕಾರಕ್ಕೆ ಆ ರೀತಿಯ ದುರುದ್ದೇಶ ಇದ್ದಿದ್ದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಘೋಷಣೆಯನ್ನು ಕೂಗುತ್ತಿರಲಿಲ್ಲ” ಎಂದು ಹೇಳಿದರು.
70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)