ಬೆಂಗಳೂರು: ಡಾ.ರಾಜಕುಮಾರ್ ನಟಿಸಿರುವ ಬಹುತೇಕ ಸಿನಿಮಾಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಅವರು ವಿಭಿನ್ನ, ವಿಶೇಷ ಪಾತ್ರಗಳಲ್ಲಿ, ಸಾಮಾಜಿಕ ವಿಷಯಾಧಾರಿತ ಚಿತ್ರಗಳಲ್ಲಿ ನಟಿಸಿರುವ ಕಾರಣ ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾಗಳೇ ಆಗಿವೆ. ಇಂತಹ ನಟ ಸಾರ್ವಭೌಮನ ಹಲವಾರು ಸಿನಿಮಾಗಳು ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರಿವೆ. ಕೇವಲ ಮನರಂಜನೆಗೆ ಸೀಮಿತವಾಗದೆ, ಮನೋವಿಕಾಸಕ್ಕೆ ಕೂಡ ಕಾರಣವಾಗಿವೆ. ಸಿನಿಮಾ ವೀಕ್ಷಿಸಿ, ಸ್ಫೂರ್ತಿಗೊಂಡ ಅಭಿಮಾನಿಗಳು ಬದುಕಿನಲ್ಲಿ ಬದಲಾವಣೆ ಕಂಡ ಹಲವು ಉದಾಹರಣೆಗಳೂ ಇವೆ. ಇಂತಹ ಬದಲಾವಣೆಗೆ ಮುನ್ನುಡಿ ಬರೆದಂತಹ ಅಣ್ಣಾವ್ರ ಸಿನಿಮಾಗಳ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವುದು ‘ಬಂಗಾರದ ಮನುಷ್ಯ’. ರಾಜೀವ್ ಪಾತ್ರದಲ್ಲಿರುವ ರಾಜಕುಮಾರ್, ನಗರದಿಂದ ಹಳ್ಳಿಗೆ ಬಂದು ವ್ಯವಸಾಯ ಆರಂಭಿಸುತ್ತಾರೆ. ಬಂಜರು ಭೂಮಿ ಭೂಮಿಯಲ್ಲಿಯೇ ಬಂಗಾರದ ಬೆಳೆ ಬೆಳೆಯುತ್ತಾರೆ. ಎಲ್ಲ ಸಂಕಷ್ಟಗಳನ್ನು ದಾಟಿ, ನೆಮ್ಮದಿ ಜೀವನ ಕಾಣುತ್ತಾರೆ. ಇಡೀ ಊರೇ ಮೆಚ್ಚುವ ಆದರ್ಶ ರೈತನಾಗುತ್ತಾರೆ. ಹೀಗೆ ಕೃಷಿ ಸಂಸ್ಕೃತಿಯನ್ನು ಎತ್ತಿಹಿಡಿಯುವ ಚಿತ್ರವಿದು. ಪ್ರಸ್ತುತ ದಿನಗಳಲ್ಲಿ ರೈತನೆಂದರೆ ಮೂಗು ಮುರಿಯುವ, ಹೆಣ್ಣೇ ಕೊಡದ ಕಾಲ ಇರುವಾಗ 1970ರ ದಶಕದಲ್ಲಿ ರೈತ ಎಂದರೆ ಬರೀ ಉತ್ತಿ-ಬಿತ್ತಿ ಬೆಳೆಯುವ ಬೆಳೆಗಾರನಷ್ಟೇ ಅಲ್ಲ, ಆತ ‘ಬಂಗಾರದ ಮನುಷ್ಯ’ ಎಂದೂ ಸಾರಿತ್ತು. ಇಲ್ಲಿ ಸರಳ ವಿವಾಹಕ್ಕೆ ರಾಜಕುಮಾರ್ ಕರೆ ನೀಡಿದ್ದಾರೆ. ಸಾಹಿತಿ ಟಿ.ಕೆ.ರಾಮರಾವ್ ಅವರ ಇದೇ ಹೆಸರಿನ ಕಾದಂಬರಿಯನ್ನು ಸಿದ್ದಲಿಂಗಯ್ಯ ದೃಶ್ಯಕ್ಕೆ ರೂಪ ನೀಡಿದ್ದರು.

ದಕ್ಷಿಣ ಭಾರತದ ಎರಡನೇ ಸಿನಿಮಾ: 1972ರಲ್ಲಿ ರಿಲೀಸ್ ಆಗಿದ್ದ ‘ಬಂಗಾರದ ಮನುಷ್ಯ’ ಗಳಿಕೆಯಲ್ಲೂ ದಾಖಲೆ ಬರೆದಿತ್ತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ 104 ವಾರಗಳ ಕಾಲ ಪ್ರದರ್ಶನಗೊಂಡು ಇತಿಹಾಸ ಸೃಷ್ಟಿಸಿತ್ತು. ಇಷ್ಟು ದೀರ್ಘಾವಧಿಯವರೆಗೆ ಪ್ರದರ್ಶನಗೊಂಡ ದಕ್ಷಿಣ ಭಾರತದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ತಮಿಳಿನ ‘ಹರಿದಾಸ’ ಚಿತ್ರ 140 ವಾರ ಕಾಲ ಒಂದೇ ಥಿಯೇಟರ್ನಲ್ಲಿ ಪ್ರದರ್ಶನಗೊಂಡು ಮೊದಲನೇ ಸ್ಥಾನದಲ್ಲಿದೆ.
ವಿಧಾನಸಭೆಯಲ್ಲೂ ಸದ್ದು: ಸ್ಟೇಟ್ಸ್ ಥಿಯೇಟರ್ನಲ್ಲಿ ‘ಬಂಗಾರದ ಮನುಷ್ಯ’ ಮೊದಲ ವಾರ್ಷಿಕೋತ್ಸವದ ಸಮಯದಲ್ಲಿ ಥಿಯೇಟರ್ ಮಾಲೀಕರು ಆ ಚಿತ್ರವನ್ನು ತೆಗೆದು ಅಣ್ಣಾವ್ರ ಇನ್ನೊಂದು ಸಿನಿಮಾ ‘ಪಾರ್ವತಿ ಕಲ್ಯಾಣ’ ಪ್ರದರ್ಶನಕ್ಕೆ ಮುಂದಾದರು. ಇದರ ವಿರುದ್ಧ ಅಭಿಮಾನಿಗಳು ಸಿಡಿದೆದ್ದು, ಧಿಯೇಟರ್ ಮುಂದೆ ಪ್ರತಿಭಟನೆಗೆ ಮುಂದಾದರು. ಲಾಠಿಚಾರ್ಜ್ ಕೂಡ ನಡೆಯಿತು. ಈ ವಿಷಯ ಮರುದಿನ ವಿಧಾನಸಭೆಯಲ್ಲಿ ಚರ್ಚೆಯಾಯಿತು. ಎಷ್ಟು ದಿನಗಳ ಕಾಲ ಅದೇ ಥಿಯೇಟರ್ನಲ್ಲಿ ‘ಬಂಗಾರದ ಮನುಷ್ಯ’ ಸಿನಿಮಾ ನೋಡುತ್ತಾರೋ ಅಲ್ಲಿಯವರೆಗೆ ಪ್ರದರ್ಶನಗೊಳ್ಳಲಿ ಎಂದು ಅಂದಿನ ಡಿ.ದೇವರಾಜ್ ಅರಸು ಸರ್ಕಾರವು ತೀರ್ಮಾನಿಸಿತ್ತು. ಒಂದು ಸಿನಿಮಾ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆಯಾಗಿರುವುದು ಇದೇ ಮೊದಲು ಎನ್ನುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
‘ಬಂಗಾರದ ಮನುಷ್ಯ’ ಎಸ್ಟೇಟ್: ‘ಬಂಗಾರದ ಮನುಷ್ಯ’ ನೋಡಿ ಹಲವಾರು ವಿದ್ಯಾವಂತ ಯುವಕರು ಕೃಷಿಯತ್ತ ಮುಖಮಾಡಿದ್ದರು. ಕೃಷಿ ವಿಜ್ಞಾನ ಪದವೀಧರರೊಬ್ಬರು ಈ ಚಿತ್ರ ನೋಡಿ, ತಮ್ಮ ಊರಿಗೆ ತೆರಳಿ, ಸರ್ಕಾರದ ದರ್ಖಾಸ್ತು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದಿರುವ ಉದಾಹರಣೆ ಇದೆ. ಅದಕ್ಕೆ ‘ಬಂಗಾರದ ಮನುಷ್ಯ ಎಸ್ಟೇಟ್’ ಎಂದೇ ಹೆಸರಿಟ್ಟಿರುವುದು ವಿಶೇಷ. ಈ ಚಿತ್ರದಿಂದಾಗಿಯೇ ಹೆಚ್ಚು ಜನ ಹೊಲದಲ್ಲಿ ಬೋರ್ವೆಲ್ ಹಾಕಿಸಲು ಮುಂದಾಗಿದ್ದರು. ‘ರಾಶಿ ರೊಕ್ಕ ಇರೋರೆಲ್ಲಾ ರಾಚೋಟಪ್ನಂಗ ಇರಬೇಕು’ ಎಂಬ ಹಾಡಿನ ಸಾಲಿನ ಸ್ಫೂರ್ತಿಗೊಂಡು ಹಳ್ಳಿಯ ಜಿಪುಣನೊಬ್ಬ ಉದಾರ ಗುಣ ಬೆಳಸಿಕೊಂಡಿರುವ ಬಗ್ಗೆಯೂ ಅಂದು ವರದಿಯಾಗಿತ್ತು.
ವಿಮಾನ ಮಿಸ್ ಆದ ಪ್ರಸಂಗ: ಮದ್ರಾಸ್ನಲ್ಲಿ ತೀರಿಹೋದ ಪತ್ನಿಯ ಸಮಾಧಿ ಬಳಿ ಅಣ್ಣಾವ್ರ ಭಾವತೀವ್ರವಾಗಿ ನಟಿಸುವ ದೃಶದ ಶೂಟಿಂಗ್ ನಡೆಯುತ್ತಿತ್ತು. ಆ ಬಳಿಕ ರಾಜ್ ಮದ್ರಾಸ್ನಿಂದ ಬೆಂಗಳೂರಿಗೆ ಮರಳಬೇಕಿತ್ತು. ಅದಕ್ಕಾಗಿ ವಿಮಾನದ ಟಿಕೆಟ್ ಕೂಡ ಬುಕ್ ಆಗಿತ್ತು. ಆದರೆ, ರಾಜ್ ನಟನೆಯಲ್ಲಿ ಮುಳುಗಿಬಿಟ್ಟರು. ವಿಮಾನದ ವಿಚಾರವನ್ನ ಪಾರ್ವತಮ್ಮನವರು ಕೂಡ ಅಣ್ಣಾವ್ರ ಗಮನಕ್ಕೆ ತರಲು ಹಿಂಜರಿದರು. ಕೊನೆಗೆ ವಿಮಾನ ಮಿಸ್ ಆಯಿತು. ಆದರೆ, ದೃಶ್ಯ ಮಾತ್ರ ಸಿನಿಮಾದಲ್ಲಿ ಅದ್ಭುತವಾಗಿ ಬಂದಿದೆ ಎಂದು ಲೇಖಕ ಜಗನ್ನಾಥ್ ರಾವ್ ಬಹುಳೆ ನೆನಪಿಸುತ್ತಾರೆ.
ಡಾ.ರಾಜ್ ಸಿನಿಮಾಗಳು ಸಮುದಾಯದ ಪ್ರಜ್ಞೆಯನ್ನು ಎಚ್ಚರಿಸುವಂತೆ ಇರುತ್ತಿದ್ದವು. ಅವರು ದೊಡ್ಡ ಸಿನಿಮಾಗಳಲ್ಲಿ ನಟಿಸಿ, ಯಶಸ್ವಿಯಾದ ಮೇಲೂ ಮುಂದೆ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. ಅದು ಅವರ ದೊಡ್ಡ ಗುಣ. ಅಂತಹ ವಿಭಿನ್ನ ಪಾತ್ರಗಳಿಂದಾಗಿ ಚಿತ್ರ್ಯೋದ್ಯಮ ವೇಗೋತ್ಕರ್ಷಕ್ಕೆ ಕಾರಣವಾಯಿತು.
ಹರಿಹರಪುರ ಮಂಜುನಾಥ್, ಹಿರಿಯ ಪತ್ರಕರ್ತರು