ಬೆಂಗಳೂರು: ವರನಟ ರಾಜಕುಮಾರ್ ಮುಖದಲ್ಲಿ ಎಂದಿಗೂ ರಾಜಕಳೆ. ಇನ್ನು ಅದಕ್ಕೆ ಒಪ್ಪುವ ಗಂಭೀರ ನೋಟ, ಮಂದಸ್ಮಿತ ನಗು, ಚೂಪಾದ ಮೀಸೆ ಹಾಗೂ ವ್ಯಾಯಾಮದಿಂದ ಗಟ್ಟಿಗೊಳಿಸಿರುವ ವಜ್ರದೇಹ. ಇವೆಲ್ಲಕ್ಕೂ ಮಿಗಿಲಾಗಿ ರಾಜನಂತಹ ವ್ಯಕ್ತಿತ್ವ. ಇಂತಹ ಮಹಾನ್ ಕಲಾವಿದ ರಾಜಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ರಾಜ ಪೋಷಾಕು ಧರಿಸಿ, ರಾಜನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ‘ಮಯೂರ’, ‘ಬಬ್ರುವಾಹನ’, ‘ಇಮ್ಮಡಿ ಪುಲಕೇಶಿ’, ‘ಶ್ರೀಕೃಷ್ಣ ದೇವರಾಯ’.. ಹೀಗೆ ಸಾಗುತ್ತದೆ. ಅಣ್ಣಾವ್ರ ಮೊದಲ ಬಾರಿಗೆ ರಾಜನ ಪಾತ್ರ ಮಾಡಿದ್ದು, ತಮ್ಮ 15ನೇ ಸಿನಿಮಾ ‘ರಣಧೀರ ಕಂಠೀರವ’ ದಲ್ಲಿ. ಇದು ಮೈಸೂರು ಮಹಾರಾಜ ರಣಧೀರ ಕಂಠೀರವ ಅವರ ಆಳ್ವಿಕೆ ಹಿನ್ನೆಲೆಯ ಕಥೆಯಾಗಿತ್ತು. ಹಿಂದಿನ 14 ಸಿನಿಮಾಗಳಲ್ಲಿ ರಾಜಕುಮಾರ್ ಪೌರಾಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಪಾತ್ರಗಳಲ್ಲಿ ಮಿಂಚಿದ್ದರು. ಇದೇ ಮೊದಲ ಬಾರಿಗೆ ರಾಜನ ಪಾತ್ರ ನಿರ್ವಹಿಸಿದ್ದರು. ಅವರ ನಟನಾ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ಘನತೆಗೆ ಒಲಿದಂತಹ ಪಾತ್ರವಾಗಿತ್ತು. ಇದು ರಾಜ್ ಅವರ 15ನೇ ಸಿನಿಮಾವಾದರೆ, ಕನ್ನಡ ಚಿತ್ರರಂಗದ 100ನೇ ಸಿನಿಮಾವಾಗಿತ್ತು. ಕನ್ನಡ ಚಿತ್ರರಂಗವೂ ‘ಶತಕ’ ಪೂರೈಸಿದ್ದು ರಾಜಕುಮಾರ್ ಸಿನಿಮಾದಿಂದಲೇ ಎಂಬುದು ಗಮನಾರ್ಹ ಸಂಗತಿ. ರಾಜಕುಮಾರ್ ಜತೆಗೆ ಆರ್.ನಾಗೇಂದ್ರ ರಾವ್, ಉದಯ್ಕುಮಾರ್, ಟಿ.ಎನ್.ಬಾಲಕೃಷ್ಣ, ಲೀಲಾವತಿ, ಸಂಧ್ಯಾ ಶಾಂತರಾಮ, ನರಸಿಂಹರಾಜು, ಜಿ.ವಿ.ಅಯ್ಯರ್ ಕಲಾ ಬಳಗದಲ್ಲಿದ್ದರು.

ಕಲಾವಿದರೇ ನಿರ್ಮಿಸಿದ್ದ ಸಿನಿಮಾ: 1950ರ ದಶಕದಲ್ಲಿ ಪರಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಬರುತ್ತಿದ್ದ ಸಿನಿಮಾಗಳು ವಿರಳ. ಇದರಿಂದಾಗಿ ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದರು. ಅಲ್ಲದೇ, ಆಗಿನ ಕಾಲದಲ್ಲಿ ಸಿನಿಮಾಗಳಿಗೆ ಬಂಡವಾಳದಾರರನ್ನು ಹುಡುಕುವುದೇ ಒಂದು ಸವಾಲಾಗಿತ್ತು. ಇದನ್ನು ಅರಿತಿದ್ದ ರಾಜಕುಮಾರ್, ಕಲಾವಿದರಿಂದಲೇ ಒಂದು ಸಿನಿಮಾ ನಿರ್ಮಾಣ ಮಾಡುವ ಚಾಲೆಂಜ್ ಸ್ವೀಕರಿಸಿದರು. ಅದಕ್ಕಾಗಿ ‘ಕನ್ನಡ ಕಲಾವಿದರ ಸಂಘ’ ಎಂಬ ತಂಡ ಕಟ್ಟಿಕೊಂಡು, ಇಡೀ ರಾಜ್ಯಾದ್ಯಂತ ಸಂಚರಿಸಿ ನಾಟಕ ಮಾಡಿದರು. ನಾಟಕದಿಂದ ಬಂದ ಹಣದಲ್ಲಿ ಎಲ್ಲ ಕಲಾವಿದರಿಗೆ ಸಂಭಾವನೆ ನೀಡಿದರು. ಉಳಿದ ಲಾಭವನ್ನು ಮೊದಲಿಗೆ ಮುಖ್ಯಸ್ಥರು ತೆಗೆದುಕೊಳ್ಳಬೇಕು ಎಂಬ ಮಾತಾಯಿತು. ಆದರೆ, ಅಣ್ಣಾವ್ರ ಸುತಾರಂ ಒಪ್ಪಲಿಲ್ಲ. ಕಲಾವಿದರೂ ಎಲ್ಲರೂ ಒಂದೇ. ಸಣ್ಣ-ಪುಟ್ಟ ಅಂತಾ ಭೇದ ಭಾವ ಬೇಡ. ಎಲ್ಲ ಕಲಾವಿದರಿಗೆ ಸಮವಾಗಿ ಸಂಭಾವನೆ ನೀಡೋಣ ಎಂದರು. ಅದಕ್ಕೆ ಎಲ್ಲರೂ ಒಪ್ಪಿದರು. ಅದೇ ಸಮಯದಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ಉಪಾಯ ಹೇಳಿ, ಲಾಭವನ್ನು ಹಂಚಿಕೊಳ್ಳುವುದಕ್ಕಿಂತ ಒಂದು ಚಿತ್ರ ಮಾಡಿ. ಇದರಿಂದ ಕಲಾವಿದರಿಗೆ ಕೆಲಸ ಸಿಕ್ಕಂತಾಗುತ್ತದೆ. ಕನ್ನಡಕ್ಕೂ ಒಂದು ಸಿನಿಮಾ ನೀಡಿದಂತಾಗುತ್ತದೆ ಎಂದರು. ಆಗ ತಯಾರಾಗಿದ್ದೆ ‘ರಣಧೀರ ಕಂಠೀರವ’ ಸಿನಿಮಾ. ಇದರ ಜತೆಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘವು ಹುಟ್ಟುಕೊಂಡಿತು. ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ ಹಾಗೂ ಜಿ.ವಿ.ಅಯ್ಯರ್ ಈ ಸಂಘದಿಂದ ನಿರ್ಮಾಪಕರಾದರು. ಜಿ.ವಿ.ಅಯ್ಯರ್ ಮೈಸೂರು ರಾಜಮನೆತನದ ಬಗ್ಗೆ ಕಥೆಯನ್ನು ಮಾಡಿಕೊಂಡಿದ್ದರು. ರಾಜಕುಮಾರ್ ಬಳಿ ಹೇಳಿ, ಅದೇ ಕಥೆ ಮಾಡೋಣ ಎಂದು ನಿರ್ಧರಿಸಿದರು. ಈ ಮೊದಲು ಸಂಕಲನಕರಾಗಿದ್ದ ಎನ್.ಸಿ.ರಾಜನ್ ಈ ಚಿತ್ರದ ಮೂಲಕ ನಿರ್ದೇಶಕರಾದರು. 1960ರ ೆಬ್ರವರಿ 10ರಂದು ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.
‘ರಣಧೀರನ’ ಮೂರು ಸಾಹಸಗಳು: ರಾಜಕುಮಾರ್ ನಟನೆಯಲ್ಲಿ ನಿಪುಣರಾಗಿದ್ದರು. ಹಾಗೆ ದೃಶ್ಯಗಳ ನೈಜತೆಗೆ ವಿಶೇಷ ಒತ್ತು ನೀಡುತ್ತಿದ್ದರು. ಯಾರು ಮಾಡುದಂತಹ ಕಾರ್ಯವನ್ನು ಮಾಡುವುದೇ ಅವರ ನಟನೆಯ ವಿಶೇಷತೆ. ಉದಾಹರಣೆಗೆ, ‘ರಣಧೀರ ಕಂಠೀರವ’ ಚಿತ್ರದ ಮೂರು ಸಾಹಸಗಳು ಗಮನಸೆಳೆಯುತ್ತವೆ. ಮಹಾರಾಜ ರಣಧೀರ ಕಂಠೀರವ ಕುಸ್ತಿ ಪಟುವಾಗಿದ್ದರು. ಹಾಗೆಯೇ ಈ ಚಿತ್ರದಲ್ಲಿ ಕುಸ್ತಿ ಆಡುವ ಒಂದು ದೃಶ್ಯ ಬರುತ್ತದೆ. ಅಲ್ಲಿ ರಾಜ್ ಎದುರಾಳಿ 100 ಕೆಜಿ ತೂಕದ ದಢೂತಿ ಬಜ್ಜಯ್ಯ. ಅವರನ್ನು ಮೇಲಕ್ಕೆ ಎತ್ತಿ, ತಿರುಗಿಸಿ ನೆಲಕ್ಕೆ ಬೀಳಿಸಬೇಕಿತ್ತು. ವೃತ್ತಿಪರ ಕುಸ್ತಿಪಟುವಾಗಿದ್ದ ಬಜ್ಜಯ್ಯರನ್ನು ಅವರ ಶಿಷ್ಯರೇ ಎತ್ತಲು ಆಗಿರಲಿಲ್ಲ. ಅಂತಹರಲ್ಲಿ ಅಣ್ಣಾವ್ರ, ದೃಶ್ಯಕ್ಕಾಗಿ ಬಜ್ಜಯ್ಯ ಎತ್ತಿ ನೆಲಕ್ಕೆ ಹಾಕಿದ್ದರು. ಇನ್ನೊಂದು ಆನೆ ಕಾಳಗದ ದೃಶ್ಯ. ನಿಜವಾದ ಆನೆಯ ಜತೆ ಇಲ್ಲಿ ಅಣ್ಣಾವ್ರ ಫೈಟ್ ಮಾಡಿದ್ದರು. ಕೊನೆಯ ಕ್ಲೈಮ್ಯಾಕ್ಸ್ನಲ್ಲಿ 25 ಜನರ ವಿರುದ್ಧ ಹೋರಾಡುವಾಗ ದೊಡ್ಡ ಕಂಬವೊಂದು ಎತ್ತಬೇಕಾಗುತ್ತದೆ. ಮದ್ರಾಸ್ನಲ್ಲಿ ಆ ಕಂಬ ಸಿಗದಿದ್ದಾಗ ತಂಡವು ಕೇರಳದಿಂದ ತರಿಸಲಾಗಿತ್ತು. ಅಂತಹ ದೊಡ್ಡ ಕಂಬವನ್ನು ರಾಜ್ ಎತ್ತಿ ‘ಒಂದು ಸಿಂಹದ ಮರಿ, 25 ಕುರಿ ಮರಿಗಳಿಗೆ ಸಮ’ ಎಂದು ಗರ್ಜಿಸಿದ್ದರು.
ಮಹಾರಾಜರ ಪ್ರಶಂಸೆ: ‘ರಣಧೀರ ಕಂಠೀರವ’ ಚಿತ್ರವು ಮೊದಲಿಗೆ ಮೈಸೂರಿನಲ್ಲಿ ಬಿಡುಗಡೆಯಾಗಿ, ಪ್ರಶಂಸೆಗೆ ಒಳಗಾಗಿತ್ತು. ಆದರೆ, ಪರಭಾಷೆಗಳ ಸಿನಿಮಾಗಳಿಂದಾಗಿ ಬೆಂಗಳೂರಿನಲ್ಲಿ ಥಿಯೇಟರ್ ಸಮಸ್ಯೆ ಎದುರಿಸಿತ್ತು. ಆಗ, ಕನ್ನಡಪರ ಸಂಘಟನೆಗಳು ಹೋರಾಟ ಮಾಡಿ, ಥಿಯೇಟರ್ ದಕ್ಕಿಸಿಕೊಂಡಿದ್ದವು. ‘ರಣಧೀರ ಕಂಠೀರವ’ ಚಿತ್ರವನ್ನು ಅಂದಿನ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಆರಮನೆಯಲ್ಲಿ ವೀಕ್ಷಿಸಿ, ರಾಜ್ ಅಭಿನಯಕ್ಕೆ ಮನಸೋತಿದ್ದರು. ಹಾಗೆಯೇ ಅವರಿಗೆ ಮುಂದಿನ ವರ್ಷದ ದಸರಾ ಮೆರವಣಿಗೆ ವೀಕ್ಷಣೆಗೆ ಆಹ್ವಾನಿಸಿದ್ದರು. ಅಂತೆಯೇ ರಾಜಕುಮಾರ್ ತಮ್ಮ ತಾಯಿ ಜತೆ ಹೋಗಿ ದಸರಾ ವೈಭೋಗವನ್ನು ಕಣ್ತುಂಬಿಕೊಂಡಿದ್ದರು.