ಬೆಂಗಳೂರು: ಪ್ರಕೃತಿ ಹಾಗೂ ಮನುಷ್ಯನ ಸಂಬಂಧ ಅನನ್ಯವಾದುದು. ಕಾಡು ಇದ್ದರಷ್ಟೇ ನಾವು ಎಂಬ ಮಾತು ಸಾರ್ವಕಾಲಿಕ. ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಒಡಲನ್ನೇ ನಾಶಗೊಳಿಸುತ್ತಿದ್ದಾನೆ. ಮುಂದೊಂದು ದಿನ ಇದರ ಪರಿಣಾಮ ತಾನೇ ಎದುರಿಸುತ್ತೇನೆ ಎಂಬ ಅರಿವಿಲ್ಲದೇ ನಿರಂತರ ದಾಳಿ ನಡೆಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ನಾಶದ ವಿರುದ್ಧ 1970ರ ದಶಕದಲ್ಲಿಯೇ ರಾಜಕುಮಾರ್ ಧ್ವನಿ ಎತ್ತಿದ್ದರು. ‘ಕಾಡು ಬೆಳೆಸಿ, ನಾಡು ಉಳಿಸಿ. ಯಾವುದೇ ಕಾರಣಕ್ಕೆ ಪ್ರಕೃತಿಯನ್ನು ನಾಶ ಮಾಡಬೇಡಿ’ ಎಂಬ ಕರೆಯನ್ನು ‘ಗಂಧದ ಗುಡಿ’ ಮೂಲಕ ನೀಡಿದ್ದರು. ಇದು ಅಣ್ಣಾವ್ರ 150ನೇ ಸಿನಿಮಾ ಎನ್ನುವುದು ವಿಶೇಷ. ಇನ್ನು ಈ ಚಿತ್ರದಲ್ಲಿ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಇಬ್ಬರು ಒಟ್ಟಿಗೆ ನಟಿಸಿದ್ದರು. ಆ ಮೂಲಕ ಕನ್ನಡದ ಇಬ್ಬರು ದಿಗ್ಗಜ ಕಲಾವಿದರ ‘ಅಪೂರ್ವ ಸಂಗಮ’ವಾಗಿತ್ತು. ಇನ್ನು, ನಿರ್ದೇಶಕ ವಿಜಯ್, ಅಣ್ಣಾವ್ರಿಗೆ ನಿರ್ದೇಶಿಸಿದ ಮೊದಲ ಸಿನಿಮಾ ಇದಾಗಿದೆ. ಅಷ್ಟಕ್ಕೂ, ‘ಗಂಧದ ಗುಡಿ’ ಚಿತ್ರವನ್ನು ಮೊದಲಿಗೆ ಗೀತಪ್ರಿಯ ನಿರ್ದೇಶಿಸುವುದು ಎಂದಾಗಿತ್ತು. ಈ ಸಿನಿಮಾಕ್ಕೆ ಅರ್ಥಿಕ ಸಹಾಯ ಮಾಡಿದ್ದ ವೀರಾಸ್ವಾಮಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಜಯ್ ಹೆಸರು ಮುಂದಿಟ್ಟರು. ನಿರ್ಮಾಪಕ ಎಂ.ಪಿ.ಶಂಕರ್ ಕೂಡ ಅದಕ್ಕೆ ಒಪ್ಪಿದರು. ಕೊನೆಗೆ, ವಿಜಯ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿ ಶಹಬ್ಬಾಸ್ ಎನಿಸಿಕೊಂಡರು. ಆ ಕಾಲದಲ್ಲಿ ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯದಲ್ಲಿ ಶೂಟಿಂಗ್ ನಡೆಸಲಾಗಿತ್ತು. ಇದಕ್ಕಾಗಿ ಚಿತ್ರತಂಡ ಸರ್ಕಾರದ ಅನುಮತಿ ಪಡೆದು ‘ಖೆಡ್ಡಾ ಕಾರ್ಯಾಚರಣೆ’ ಮಾಡಿತ್ತು ಎಂಬ ಮಾಹಿತಿ ಇದೆ. ಚಿತ್ರ ಬಿಡುಗಡೆಯಾಗಿ ಉತ್ತಮ ಸ್ಪಂದನೆ ದೊರೆಕಿತ್ತು. ಆ ಸಮಯದಲ್ಲಿ ಕನ್ನಡದಲ್ಲಿ ಮಕ್ಕಳ ಸಿನಿಮಾ ವಿರಳವಾಗಿದ್ದ ಕಾರಣ ಶಾಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ‘ಗಂಧದ ಗುಡಿ’ ತೋರಿಸಲಾಗಿತ್ತು ಎಂದು ‘ಹಾಲುಜೇನು’ ರಾಮಕುಮಾರ್ ಮಾಹಿತಿ ನೀಡುತ್ತಾರೆ.

ಪುಟ್ಟಣ್ಣರ ಔದಾರ್ಯ: ನಿರ್ದೇಶಕ ಪುಟ್ಟಣ್ಣ ಕಣಗಾಲ್ ಒಂದು ಸಾಮಾಜಿಕ ಸಿನಿಮಾ ಮಾಡುತ್ತಿದ್ದು, ಅದಕ್ಕೆ ‘ಗಂಧದ ಗುಡಿ’ ಎಂದು ಟೈಟಲ್ ನಿರ್ಧರಿಸಿರುತ್ತಾರೆ. ಆಗ ಅರಣ್ಯ ಸಂರಕ್ಷಣೆ ಕುರಿತು ಡಾ. ರಾಜಕುಮಾರ್ ಚಿತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಪುಟ್ಟಣ್ಣರಿಗೆ ತಿಳಿಯಿತೋ, ಕೂಡಲೇ ಅವರು, ನಿರ್ಮಾಪಕ ಎಂ.ಪಿ.ಶಂಕರ್ರನ್ನು ಸಂಪರ್ಕಿಸಿ, ನಿಮ್ಮ ಸಿನಿಮಾ ಒಳ್ಳೆಯ ಪ್ರಯತ್ನ. ಇದಕ್ಕೆ ‘ಗಂಧದ ಗುಡಿ’ ಟೈಟಲ್ ಸೂಕ್ತ ಎಂದು ಶೀರ್ಷಿಕೆಯನ್ನು ಬಳಸುವಂತೆ ಹೇಳಿ ಔದಾರ್ಯ ಮೆರೆಯುತ್ತಾರೆ. ಈ ಕೃತಜ್ಞತೆಗಾಗಿ ಚಿತ್ರತಂಡವು 100 ದಿನ ಪೂರೈಸಿದ ಸಮಾರಂಭದಲ್ಲಿ ಪುಟ್ಟಣ್ಣರನ್ನು ಅತಿಥಿಯಾಗಿ ಆಮಂತ್ರಿಸಿದ್ದರು.
ಗಟ್ಟಿ ನಿಲುವಿನ ಅಣ್ಣಾವ್ರ: ಹಿರಿಯ ನಟ ಎಂ.ಪಿ.ಶಂಕರ್, ಈ ಸಿನಿಮಾ ನಿರ್ಮಿಸಲು ₹1 ಲಕ್ಷ ಖರ್ಚು ಮಾಡಿ, ಪ್ರಿ-ಪ್ರೊಡಕ್ಷನ್ ಕೆಲಸ ಆರಂಭಿಸಿರುತ್ತಾರೆ. ಆಗ ಕೆಲವರು ರಾಜಕುಮಾರ್ ಮುಂದೆ ಬಂದು ಎಂ.ಪಿ.ಶಂಕರ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಸಿನಿಮಾ ಮಾಡಬಾರದು ಎನ್ನುತ್ತಾರೆ. ಆದರೆ, ಗಟ್ಟಿನಿಲುವಿನ ಅಣ್ಣಾವ್ರ, ನಾನು ಮಾತು ಕೊಟ್ಟಿದ್ದೇನೆ. ಸಿನಿಮಾ ಮಾಡಿಯೇ ಸಿದ್ಧ ಎನ್ನುತ್ತಾರೆ. ‘ಗಂಧದ ಗುಡಿ’ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿ, ಎಂ.ಪಿ.ಶಂಕರ್ ಆರ್ಥಿಕ ಮುಗ್ಗಟ್ಟಿನಿಂದ ಹೊರಬಂದರು.
ಮಾದರಿ ಕಥೆ: ‘ಗಂಧದ ಗುಡಿ’ ಚಿತ್ರ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಜತೆಗೆ ವಿದ್ಯಾವಂತರಿಗೆ ಪ್ರೇರಣೆಯಾಗಿತ್ತು. ವೈದ್ಯ, ಇಂಜಿನಿಯರ್, ಉದ್ಯಮಿಗಳಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ಎಷ್ಟೋ ಯುವಕರು ಈ ಸಿನಿಮಾ ನೋಡಿ, ಸ್ಫೂರ್ತಿಗೊಂಡು ಅರಣ್ಯ ಇಲಾಖೆ ಸೇರಿದ ಉದಾಹರಣೆಗಳಿವೆ. ಹಾಗೇ, ಕಡೆಗಣೆನೆಗೆ ಒಳಗಾಗಿದ್ದ ಅರಣ್ಯ ಇಲಾಖೆಯ ಹುದ್ದೆಗಳಿಗೆ ಬೇಡಿಕೆ ಹೆಚ್ಚಿತ್ತು. ಅಲ್ಲದೇ, ಅರಣ್ಯ ಅಧಿಕಾರಗಳು ಈ ಸಿನಿಮಾ ನೋಡಿ, ಅರಣ್ಯ ಸಂರಕ್ಷಣೆಗೆ ಪಣ ತೊಟ್ಟಿದ್ದರು.