ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಕ್ರಮ ಇ-ಟಿಕೆಟ್ ದಂಧೆ ಸಂಬಂಧ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್) ಜಾರ್ಖಂಡ್ ಮೂಲದ ಸಾಫ್ಟ್ವೇರ್ ಡೆವಲಪರ್ ಗುಲಾಮ್ ಮುಸ್ತಫಾ ಎಂಬುವವನನ್ನು ಇತ್ತೀಚೆಗೆ ಬಂಧಿಸಿದೆ. ಇ-ಟಿಕೆಟ್ ದಂಧೆಗೆ ಉಗ್ರರಿಗೆ ಹಣಕಾಸು ನೆರವಿನ ನಂಟಿರುವ ಶಂಕೆ ವ್ಯಕ್ತವಾಗಿದ್ದು, ವಿವಿಧ ಭದ್ರತಾ ಸಂಸ್ಥೆಗಳು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿವೆ.
ಗುಲಾಮ್ ಮುಸ್ತಫಾನನ್ನು ಭುವನೇಶ್ವರದಲ್ಲಿ ಬಂಧಿಸಲಾಗಿದ್ದು, ಅವನ ಬಳಿ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) 563 ವೈಯಕ್ತಿಕ ಐಡಿಗಳು, ಎಸ್ಬಿಐನ 2,400 ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ 600 ಶಾಖೆಗಳ ಮಾಹಿತಿ ಪಟ್ಟಿ ಲಭ್ಯವಾಗಿದೆ. ಈ ಬ್ಯಾಂಕ್ ಶಾಖೆಗಳಲ್ಲಿ ಮುಸ್ತಫಾ ನಕಲಿ ಖಾತೆಗಳನ್ನು ಹೊಂದಿರುವ ಶಂಕೆ ಇದೆ ಎಂದು ಆರ್ಪಿಎಫ್ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.
ಕಳೆದ 10 ದಿನಗಳಿಂದ ಗುಲಾಮ್ ಮುಸ್ತಫಾನನ್ನು ಗುಪ್ತಚರ ದಳ, ಸ್ಪೆಷಲ್ ಬ್ಯೂರೊ, ಜಾರಿ ನಿರ್ದೇಶನಾಲಯ, ಎನ್ಐಎ ಹಾಗೂ ಕರ್ನಾಟಕ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮುಸ್ತಫಾ 2015ರಲ್ಲಿ ಬೆಂಗಳೂರಿನಲ್ಲಿ ರೈಲು ನಿಲ್ದಾಣದಲ್ಲಿ ಟಿಕೆಟ್ ವೆಂಡಿಂಗ್ ಮಿಷನ್ ಮೂಲಕ ಟಿಕೆಟ್ ಮಾರಾಟ ಮಾಡುತ್ತಿದ್ದ. ಬಳಿಕ ನಕಲಿ ಸಾಫ್ಟ್ವೇರ್ ಬಳಸಿ ಅಕ್ರಮ ಇ-ಟಿಕೆಟ್ ಮಾರಾಟ ಜಾಲಕ್ಕಿಳಿದಿದ್ದ. ಮುಸ್ತಫಾನಿಂದ ವಶಪಡಿಸಿಕೊಂಡಿರುವ ಮೊಬೈಲ್ನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳ ಜನರ ನಂಬರ್ಗಳು ಪತ್ತೆಯಾಗಿವೆ. ಹೀಗಾಗಿ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವಿನ ಜಾಲದ ನಂಟು ಈತನಿಗೆ ಇರಬಹುದು ಎಂಬ ಗುಮಾನಿ ಇದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.
ಹಮೀದ್ ಅಶ್ರಫ್ ಎಂಬುವವನು ಇ-ಟಿಕೆಟ್ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದು, ಪ್ರತಿ ತಿಂಗಳು ಇದರಿಂದ -ಠಿ; 10 ರಿಂದ 15 ಕೋಟಿ ಹಣ ಗಳಿಸುತ್ತಿದ್ದಾರೆ. ಸಾಫ್ಟ್ವೇರ್ ಡೆವಲಪರ್ ಆಗಿರುವ ಅಶ್ರಫ್ 2019ರಲ್ಲಿ ಗೊಂಡಾ ಶಾಲೆಯ ಮೇಲೆ ನಡೆದ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ. ಈಗ ದುಬೈಗೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ ಎಂದು ಆರ್ಪಿಎಫ್ ಡಿಜಿ ಹೇಳಿದ್ದಾರೆ. ಇದರ ಜತೆಗೆ ಭಾರತದಾದ್ಯಂತ ಶಾಖೆಗಳನ್ನು ಹೊಂದಿರುವ ಸಾಫ್ಟ್ವೇರ್ ಕಂಪನಿಯೊಂದು ಕೂಡ ಈ ಜಾಲದಲ್ಲಿ ಶಾಮೀಲಾಗಿದೆ. ಇದೇ ಕಂಪನಿ ಸಿಂಗಾಪುರದಲ್ಲಿ ಸಹ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.