ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ಮೂರು ದಿನಗಳ ಕೃಷಿ ಮೇಳಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಭರ್ಜರಿ ತಯಾರಿ ಮಾಡಿಕೊಂಡಿದ್ದು ಸಿರಿಧಾನ್ಯಗಳ ಸಾರ, ಜೀವನಕ್ಕೆ ಆಧಾರ ಎನ್ನುವ ಘೋಷವಾಕ್ಯದೊಂದಿಗೆ ಜ.10ರಂದು ಚಾಲನೆ ದೊರೆಯಲಿದೆ.
ಅಂದು ಬೆಳಗ್ಗೆ ಗೋಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಯದ್ದಲಗೊಡ್ಡಿಯ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ, ಕುಲಪತಿ ಡಾ.ಎಂ.ಹನುಮಂತಪ್ಪ ಅಧ್ಯಕ್ಷತೆ ವಹಿಸುವರು. ಶಾಸಕರಾದ ಡಾ.ಶಿವರಾಜ್ ಪಾಟೀಲ್, ಕೆ.ಶಿವನಗೌಡ ನಾಯಕ ಅತಿಥಿಗಳಾಗಿ ಭಾಗವಹಿಸುವರು.
ಮಧ್ಯಾಹ್ನ 2 ಗಂಟೆಗೆ ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸಿರಿಧಾನ್ಯಗಳ ಉತ್ಪಾದನೆ ಹಾಗೂ ಸಂಸ್ಕೃರಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿವೆ. ಧಾರಾವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ್, ಡಾ.ಎಸ್.ವಿ.ಸುರೇಶ, ಡಾ.ಎಂ.ಜಿ.ಪಾಟೀಲ್, ಡಾ.ಎ.ಎಸ್.ವಸ್ತ್ರದ, ಡಾ.ಎನ್.ಎ.ಪಾಟೀಲ್ ಪಾಲ್ಗೊಳ್ಳುವರು.
ನೈಸರ್ಗಿಕ ಕೃಷಿಯಲ್ಲಿ ಜೈವಿಕ ಸಂರಕ್ಷತೆಯ ಮಹತ್ವ, ನೈಸರ್ಗಿಕ ಸಾವಯವ ಕೃಷಿ ಆಯಾಮಗಳು, ಸಾವಯವ ಮತ್ತು ಸಿರಿ ಧಾನ್ಯಗಳ ಸಂರಕ್ಷಣೆ, ಸಿರಿಧಾನ್ಯಗಳ ಉತ್ಪಾದನೆ, ಸಂರಕ್ಷಣೆ, ಮೌಲ್ಯವರ್ಧನೆ ಮತ್ತು ಮಾರಾಟ ಕುರಿತು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.
30ಕ್ಕೂ ಹೆಚ್ಚು ಕೌಂಟರ್: ಜ.10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಇಲಾಖೆ ಭರದಿಂದ ತಯಾರಿ ನಡೆಸಿದೆ. ಮುಖ್ಯ ವೇದಿಕೆ ಕಾರ್ಯಕ್ರಮದ ಜತೆಗೆ ಸುಮಾರು 30ಕ್ಕೂ ಹೆಚ್ಚು ಕೌಂಟರ್ಗಳನ್ನು ತೆರೆಯಲಾಗಿದೆ. ವಿವಿಧ ಕೃಷಿ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ, ಯಂತ್ರಗಳು, ಕೃಷಿ ಉತ್ಪನ್ನಗಳು, ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಅಲ್ಲದೆ ಜಾನುವಾರುಗಳು, ಕುರಿ, ಮೇಕೆ, ಕೋಳಿ ಸೇರಿ ವಿವಿಧ ಪ್ರಾಣಿಗಳ ಪ್ರದರ್ಶನ ಕೂಡ ಹಮ್ಮಿಕೊಳ್ಳಲಾಗಿದೆ.