ರಾಯಚೂರು: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಭಾರತ ಕುಸ್ತಿಪಟುಗಳ ಒಕ್ಕೂಟ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಸಿಂಗ್ನನ್ನು ಬಂಧಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿಐಟಿಯು, ಕೆಪಿಆರ್ಎಸ್, ಜಿಎಂಎಸ್, ಕೃಷಿ ಕೂಲಿಕಾರರ ಸಂಘಟನೆ, ಎಸ್ಎಫ್ಐ, ದೇವದಾಸಿ ಮಹಿಳಾ ವಿಮೋಚನಾ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಲೈಂಗಿಕ ಕಿರುಕುಳ ವಿರೋಧಿಸಿ ಕುಸ್ತಿ ಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದನೆ ನೀಡದಿರುವುದು ಸರಿಯಲ್ಲ.
ಒಲಂಪಿಕ್ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಹೋರಾಟ ನಡೆಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಸಂಸದನನ್ನು ರಕ್ಷಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬ್ರಿಜ್ ವಿರುದ್ಧ ಮುಂದುವರಿದ ಧರಣಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಂದೆ 4 ಬೇಡಿಕೆಯಿಟ್ಟ ಕುಸ್ತಿಪಟುಗಳು
ಕ್ರೀಡಾಪಟುಗಳ ಹೋರಾಟಕ್ಕೆ ಸ್ಪಂದಿಸಬೇಕಾಗಿದ್ದ ಸರ್ಕಾರ ಹೋರಾಟವನ್ನು ತಡೆಯುವ ಮತ್ತು ಕ್ರೀಡಾಪಟುಗಳು ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದೆ. ಕೂಡಲೇ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಸಿಂಗ್ರನ್ನು ತೆಗೆದು ಹಾಕಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಪದಾಧಿಕಾರಿಗಳಾದ ಕೆ.ಜಿ.ವೀರೇಶ, ವರಲಕ್ಷ್ಮಿ, ಮಹಾದೇವಿ, ಅಕ್ಕಮಹಾದೇವಿ, ಕಲ್ಯಾಣಮ್ಮ, ನಾಗಮ್ಮ, ನಿರ್ಮಲಾ, ಶಕುಂತಲಾ, ರಹಿಮತ್ ಬೇಗಂ, ವೆಂಕಟಲಕ್ಷ್ಮಿ ಪಾಲ್ಗೊಂಡಿದ್ದರು.