ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 69ರಿಂದ ಕೆಳ ಭಾಗದ ರೈತರಿಗೆ ಪ್ರಸ್ತುತ ಬೆಳೆ ಹಾಗೂ ಬೇಸಿಗೆ ಅವಧಿಯ ಬೆಳೆಗಳಿಗೆ ಅವಶ್ಯಕತೆಗನುಗುಣವಾಗಿ ನೀರು ಪೂರೈಕೆ ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆಯಿಂದ ಡಿಸಿ ಕೆ.ನಿತೀಶಗೆ ಮಂಗಳವಾರ ಡಿಸಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ತುಂಗಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಡಿ.1ರಿಂದ 15ರವರೆಗೆ 1500 ಕ್ಯೂಸೆಕ್ ನೀರು ಹರಿಸಿ ಕಾಲುವೆ ಕೆಳಭಾಗದಲ್ಲಿ ಬೆಳೆದ ಬೆಳೆಗಳಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದು, ಆದರೆ ಡಿ.5ರಿಂದ ಮೈಲ್ 69ರ ನಂತರದ ಮೈಲುಗಳಲ್ಲಿ ನೀರು ಬರುವುದು ನಿಂತು ಹೋಗಿದೆ. ಇದರಿಂದ ಕೆಳ ಭಾಗದ ರೈತರು ಪರದಾಡುವಂತಾಗಿದೆ ಎಂದು ರೈತರು ಅಸಮಧಾನ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಉತ್ತಮ ರೀತಿಯ ಮಳೆಯಾಗಿದ್ದರಿಂದ ಕಾಲುವೆಯ ನೀರು ಅವಶ್ಯಕತೆ ಇರಲಿಲ್ಲ ಆದರೆ ಮುಂದಿನ ಬೇಸಿಗೆಯಲ್ಲಿ ಜಿಲ್ಲೆಯ ಹಾಗೂ ಕಾಲುವೆಯ ಕೊನೆ ಭಾಗದ ರೈತರು ಸಂಪೂರ್ಣವಾಗಿ ಕಾಲುವೆ ನೀರಿಗೆ ಅವಲಂಭಿರಾಗಿರುತ್ತಾರೆ. ಆದ್ದರಿಂದ ಕಾಲುವೆ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಒದಗಿಸಬೇಕು. ಕಾಲಬುವೆ ಮೇಲ್ಭಾಗದಲ್ಲಿ ಅಕ್ರಮವಾಗಿ ನೀರನ್ನು ಬಿಟ್ಟುಕೊಳ್ಳಲಾಗುತ್ತಿದ್ದು, ಇದರಿಂದ ಮೈಲ್ 69ರಲ್ಲಿ ಗೇಜ್ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಶಂಕರಗೌಡ ಹರವಿ, ಅಮರೇಶ ಹೊಸಮನಿ, ಆರ್.ಎಸ್.ಪಾಟೀಲ್, ಎಚ್.ವಿಶ್ವನಾಥ, ಕರಿಯಪ್ಪ ಪಾಟೀಲ್, ಅಯ್ಯನಗೌಡ, ಶಿವಕುಮಾರ, ಡಾ.ಶಿವಶರಣಯ್ಯ ಸ್ವಾಮಿ, ರಾಮೇಶಗೌಡ, ಮಲ್ಲಭದ್ರಗೌಡ, ಲವಕುಮಾರ, ರಾಜೇಂದ್ರ ಪಾಟೀಲ್, ಈರಪ್ಪ, ರಾಕೇಶ ಪಾಟೀಲ್ ಸೇರಿದಂತೆ ಇತರರಿದ್ದರು.