ರಾಯಚೂರು: ನಗರದ ಬಸವೇಶ್ವರ ವೃತ್ತದ ಬಳಿಯಿರುವ ವಾಲ್ಕಾಟ್ ವೃತ್ತದಲ್ಲಿ ಲೋಕಕಲ್ಯಾಣಾರ್ಥವಾಗಿ ಎನ್.ಎಸ್.ಬೋಸರಾಜು ಫೌಂಡೇಷನ್ನಿಂದ ಗುರುವಾರ ಅಯ್ಯಪ್ಪಸ್ವಾಮಿ ಮಹಾಮಂಡಲ ಪಡಿಪೂಜೆ ಹಾಗೂ ಹೋಮ ಹಮ್ಮಿಕೊಳ್ಳಲಾಗಿತ್ತು.


ಬೆಳಗ್ಗೆ ಹೋಮ, ಹವನ ನಡೆಸಿದ ನಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ವಾಲ್ಕಾಟ್ ವೃತ್ತದವರೆಗೆ ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಮೆರವಣಿಯಲ್ಲಿ ಕೇರಳದ ಚಂಡಿಮೇಳದ ತಂಡಗಳು ಪಾಲ್ಗೊಂಡಿದ್ದವು. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾದ ಪ್ರತಿಕೃತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಖಂಡ ರವಿ ಬೋಸರಾಜು ದಂಪತಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದರು. ಸಂಜೆ ಚಕ್ರ ಕರ್ಪೂರ ದರ್ಶನ ಹಾಗೂ ಶಬರಿಮಲೆಯಲ್ಲಿ ನಡೆಯುವ ಜ್ಯೋತಿ ದರ್ಶನ ನೇರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು, ಮುಖಂಡರಾದ ಜಿ.ಬಸವರಾಜ ರೆಡ್ಡಿ, ಕೇಶವರೆಡ್ಡಿ, ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ ಡಿ.ವೀರೇಶ, ಗುರು ವಿಶ್ವಕರ್ಮ, ಸಂಜೀವ ಆಚಾರ್ಯ, ಮಹೇಂದ್ರ ಹಾಗೂ ಇತರರಿದ್ದರು.