ರಾಯಚೂರು: ಎರಡು ದಿನಗಳಿಂದ ಕಚೇರಿಗೆ ಆಗಮಿಸದ, ಮೊಬೈಲ್ ಸಂಪರ್ಕಕ್ಕೂ ಸಿಗದ ಡಿಡಿಪಿಐ ಬಿ.ಎಚ್.ಗೋನಾಳ ಅವರು ಕರ್ತವ್ಯಕ್ಕೆ ಗೈರಾಗಿದ್ದಾರೆ ಎಂದು ಹಾಜರಿ ಪುಸ್ತಕದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಗುರುವಾರ ಸಂಜೆ ನಮೂದಿಸಿದ್ದಾರೆ.


ಡಿಡಿಪಿಐ ಬಿ.ಎಚ್.ಗೋನಾಳ ಬುಧವಾರ ಮತ್ತು ಗುರುವಾರದಂದು ಕಚೇರಿಗೆ ಆಗಮಿಸಿರಲಿಲ್ಲ. ರಜೆಯನ್ನೂ ಹಾಕಿರಲಿಲ್ಲ. ಶಾಲೆಗಳ ವೀಕ್ಷಣೆಗೆ ತೆರಳಿರುವ ಕುರಿತು ಕಚೇರಿ ಸಿಬ್ಬಂದಿಗೆ ಮಾಹಿತಿಯನ್ನೂ ನೀಡಿರಲಿಲ್ಲ. ಸಿಇಒ ಕರೆ ಮಾಡಿದರೂ ಸ್ಪಂದನೆ ನೀಡಿರಲಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಈ ಕುರಿತು ಡಿಡಿಪಿಐಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.