ಮಹಾಲಿಂಗಪುರ: ಪ್ರವಾಸಕ್ಕೆಂದು ತೆರಳಿದ್ದ ಮುಗ್ಧ ನಾಗರಿಕರನ್ನು ಕೊಂದು ಉಗ್ರರು ಹಾಗೂ ಅವರ ಪೋಷಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಆಗ್ರಹಿಸಿದರು.

ಪಹಲ್ಗಾಮ್ ನರಮೇಧ ಖಂಡಿಸಿ ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಸಂಜೆ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಲು ಬಲಿಷ್ಠವಾಗಿದೆ. ಯಾವುದೇ ಕರುಣೆ ತೋರದೆ ನರಪಿಶಾಚಿಗಳನ್ನು ಹೊಸಕಿಹಾಕಬೇಕು ಎಂದರು.
ದೇಶದ ಸರ್ಕಾರ ಮತ್ತು ಜನತೆ ಒಗ್ಗಟ್ಟಿನಿಂದ ಬಾಹ್ಯ ಶಕ್ತಿಗಳನ್ನು ಎದುರಿಸಲು ಸಮರ್ಥರಿದ್ದಾರೆ. ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದು ಸಕಾಲ. ಭಾರತೀಯರ ಒಳ್ಳೆಯತನವನ್ನೇ ಬಂಡವಾಳ ಮಾಡಿಕೊಂಡಿರುವ ಪಾಕ್ ತನ್ನ ನರಿಬುದ್ಧಿಯನ್ನು ಪದೇಪದೆ ಪ್ರದರ್ಶಿಸಿ ತಾನು ನಂಬಿಕೆಗೆ ಅನರ್ಹ ದೇಶ ಎಂದು ಬಿಂಬಿಸುತ್ತಿದೆ. ಕಾರಣ ಇಂತಹ ಘಟನೆಗಳನ್ನು ತಡೆಗಟ್ಟಲು ಸ್ಪಷ್ಟ ಮತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ ಎಂಬುದು ನಮ್ಮೆಲ್ಲರ ಹೆಬ್ಬಕೆಯಾಗಿದೆ ಎಂದರು.
ಬಿಜೆಪಿ ಮುಖಂಡ ಮನೋಹರ ಶಿರೋಳ ಮಾತನಾಡಿ, ಗುಂಡಿನ ದಾಳಿಗೆ ರಾಜ್ಯದ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ ಉಗ್ರರು ನಡೆಸಿದ ಹೇಡಿತನದ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಬಯಲಿಗೆ ಎಳೆದು ಅಂತಕವಾದಿಗಳು, ಪಾಪಿ ಪಾಕಿಸ್ತಾನಿಗಳ ವಿರುದ್ಧ ಪ್ರತೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.
ಬಿಜೆಪಿ ಹಿರಿಯ ಮುಖಂಡರಾದ ಬಸನಗೌಡ ಪಾಟೀಲ, ಶೇಖರ ಅಂಗಡಿ, ಚನಬಸು ಯರಗಟ್ಟಿ, ಶಿವಾನಂದ ಅಂಗಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಚೆನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಕುಲ್ಲೊಳ್ಳಿ, ಪ್ರಕಾಶ ಜಿರಗಾಳ, ಡಾ.ಅಶೋಕ ದಿನ್ನಿಮನಿ, ವಿಷ್ಣುಗೌಡ ಪಾಟೀಲ, ಜಿ.ಎಸ್. ಗೊಂಬಿ, ಗುರುಪಾದ ಅಂಬಿ, ಮಾರುತಿ ಕರೋಶಿ, ಶಿವಬಸು ಗೌಂಡಿ, ಶಿವನಗೌಡ ಪಾಟೀಲ, ವೀರೇಶ ಮುಂಡಗನೂರ, ವಿಜಯಕುಮಾರ ಸಬಕಾಳೆ, ಹನುಮಂತ ಜಮಾದಾರ, ಕುಮಾರ ನಾರಾಯಣಕರ ಇದ್ದರು.