ಚುನಾವಣೆ ಸಮೀಪಿಸಿದಾಗಲೆಲ್ಲ ಮಹಾರಾಷ್ಟ್ರ ಸರ್ಕಾರ ಗಡಿ ಸಮಸ್ಯೆಗೆ ಜೀವ ತುಂಬುವ ಪ್ರಯತ್ನ ಮಾಡುತ್ತದೆ. ಮತ್ತೊಂದೆಡೆ ಕರ್ನಾಟಕ ಸರ್ಕಾರ ಗಡಿಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಈಗಾಗಲೇ ಬೆಳಗಾವಿ ಮಹಾನಗರ ಸೇರಿ ಕರ್ನಾಟಕದ ಒಳಗಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹೋರಾಟ ನಡೆಸಿದೆ. ಈ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದ್ದರೂ ಕರ್ನಾಟಕ ಸರ್ಕಾರ ಯಾವುದೇ ದೂರು ನೀಡುತ್ತಿಲ್ಲ. ಹಾಗಾಗಿಯೇ ಮಹಾರಾಷ್ಟ್ರ ಗಡಿಭಾಗದಲ್ಲಿ ತನ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ ಎಂಬುದು ಕನ್ನಡಪರ ಹೋರಾಟಗಾರರ ಅಭಿಪ್ರಾಯ. ಈ ಹಿಂದೆಯೂ ಮಹಾರಾಷ್ಟ್ರ ಸರ್ಕಾರ ಜನಾರೋಗ್ಯ ಯೋಜನೆಯನ್ನು ಕರ್ನಾಟಕದ ಐದು ಜಿಲ್ಲೆಗಳ 865ಕ್ಕೂ ಅಧಿಕ ಹಳ್ಳಿಗಳ ಮರಾಠಿಗರು ಹಾಗೂ ಇತರ ಭಾಷಿಕರಿಗೂ ವಿಸ್ತರಿಸಲು ಹೊರಟಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ತೆರೆದಿದ್ದ ಯೋಜನೆಯ ನೋಂದಣಿ ಕೇಂದ್ರಗಳನ್ನು ಬಂದ್ ಮಾಡಿದೆ.

ಈ ನಡುವೆ ಹೊಸ ಕುತಂತ್ರ ರಚಿಸಿರುವ ಮಹಾರಾಷ್ಟ್ರ ಸರ್ಕಾರ, ಬೆಳಗಾವಿ ನಗರದಿಂದ ಕೇವಲ 15 ಕಿಮೀ ದೂರದಲ್ಲಿರುವ ಶಿನೋಳ್ಳಿ ಗ್ರಾಮದಲ್ಲಿ ತಾಲೂಕುಮಟ್ಟದ ಸರ್ಕಾರಿ ಕಚೇರಿ ಆರಂಭಿಸಲು ಭರದ ಸಿದ್ಧತೆ ನಡೆಸಿದೆ. ಈ ಕಚೇರಿಗೆ ತಹಸೀಲ್ದಾರ್ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಆ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಲು ಹೊಂಚು ಹಾಕಿದೆ. ಅಲ್ಲದೆ ಶಿನೋಳ್ಳಿಯಲ್ಲಿ ಮರಾಠಿ ಭಾಷಿಕರ ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಿದ್ದು, ಕರ್ನಾಟಕ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಈ ಬೆಳವಣಿಗೆಗಳ ಬಗ್ಗೆ ಗಮನ ಹರಿಸಬೇಕು. ಮತ್ತು ಕನ್ನಡಿಗರ ಹಿತ ಕಾಯಲು ಮುಂದಾಗಬೇಕು. ಸರ್ಕಾರಿ ಕಚೇರಿಗಳನ್ನು ಸ್ಥಾಪಿಸುವ ಮೂಲಕ ಆ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಷಡ್ಯಂತ್ರ ಮಹಾರಾಷ್ಟ್ರ ಸರ್ಕಾರದ್ದು. ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಮುಖಂಡರು ಮತ್ತೆ ಮರಾಠಿ ಭಾಷಿಕರ ಸಮಾವೇಶದ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ತಡೆಯಲೇ ಬೇಕು.
ಇಂತಹ ಕುತಂತ್ರಗಳನ್ನು ಈ ಹಿಂದೆಯೂ ಮಹಾರಾಷ್ಟ್ರ ಮಾಡುತ್ತ ಬಂದಿದೆ. ಕರ್ನಾಟಕ ಸರ್ಕಾರ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸುವ ಮೂಲಕ, ಗಡಿ ಭಾಗದಲ್ಲಿನ ಸಮಸ್ಯೆಗಳಿಗೆ ರ್ತಾಕ ಪರಿಹಾರ ಒದಗಿಸಬೇಕು. ಇಂಥ ಬೆಳವಣಿಗೆಗಳನ್ನು ನಿರ್ಲಕ್ಷಿಸದೆ ಕೂಡಲೇ ತಕ್ಕ ಪ್ರತ್ಯುತ್ತರ ನೀಡಬೇಕು. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ಈ ಬಗೆಯ ವಿವಾದಗಳನ್ನು ಸೃಷ್ಟಿಸುವ ಚಾಳಿ ತೊರೆಯಬೇಕು.