ಚಂಡೀಗಢ: ಟೀಮ್ ಇಂಡಿಯಾ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂಬರುವ ಐಪಿಎಲ್ಗೆ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಭಾನುವಾರ ಬಿಗ್ಬಾಸ್ ಹಿಂದಿ ಕಾರ್ಯಕ್ರಮದ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್, ಶ್ರೇಯಸ್ ನೇಮಕವನ್ನು ಘೋಷಿಸಿದ್ದರು. 2024ರ ಪ್ರಶಸ್ತಿ ವಿಜೇತ ಕೆಕೆಆರ್ಗೆ ನಾಯಕರಾಗಿದ್ದ ಶ್ರೇಯಸ್ ಕಳೆದ ಮೆಗಾ ಹರಾಜಿನಲ್ಲಿ 26.75 ಕೋಟಿ ರೂ.ಗೆ ಪಂಜಾಬ್ ಸೇರಿದ್ದರು.
ಶ್ರೇಯಸ್ ಈ ಮುನ್ನ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ನಾಯಕರಾಗಿದ್ದರು. ಆಗ ಡೆಲ್ಲಿ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಇದೀಗ ಪಂಜಾಬ್ ಕಿಂಗ್ಸ್ ತರಬೇತುದಾರರಾಗಿದ್ದಾರೆ. ಹೀಗಾಗಿ ಅವರಿಬ್ಬರ ಕೋಚ್-ಕ್ಯಾಪ್ಟನ್ ಕಾಂಬಿನೇಷನ್ ಮತ್ತೆ ಒಗ್ಗೂಡಿದಂತಾಗಿದೆ.
ಪಂಜಾಬ್ ತಂಡ ನನ್ನ ಮೇಲೆ ನಂಬಿಕೆ ಇಟ್ಟಿರುವುದು ದೊಡ್ಡ ಗೌರವವೆನಿಸಿದೆ. ಕೋಚ್ ಪಾಂಟಿಂಗ್ ಜತೆಗೆ ಮತ್ತೊಮ್ಮೆ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿರುವೆ. ತಂಡ ಬಲಿಷ್ಠವಾಗಿ ಕಾಣಿಸುತ್ತಿದೆ. ತಂಡದ ಮ್ಯಾನೇಜ್ಮೆಂಟ್ ನನ್ನ ಮೇಲೆ ಇಟ್ಟ ನಂಬಿಕೆಗೆ ಋಣ ಸಂದಾಯ ಮಾಡುವ ಭರವಸೆಯಲ್ಲಿದ್ದೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಕಳೆದ ವರ್ಷ ಶ್ರೇಯಸ್ ಪಾಲಿಗೆ ಸ್ಮರಣೀಯವಾಗಿತ್ತು. ಐಪಿಎಲ್ ನಾಯಕರಾಗಿ ಪ್ರಶಸ್ತಿ ಗೆದ್ದಿದ್ದಲ್ಲದೆ, ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ನಾಯಕರಾಗಿ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.
ಐಪಿಎಲ್ನಲ್ಲಿ ಇನ್ನು ಲಖನೌ ಸೂಪರ್ಜೈಂಟ್ಸ್, ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ ನೈಟ್ರೈಡರ್ಸ್ ತಂಡಗಳು ನಾಯಕನನ್ನು ನೇಮಿಸುವುದು ಬಾಕಿ ಇದೆ. ಮುಂಬೈ ಇಂಡಿಯನ್ಸ್ (ಹಾರ್ದಿಕ್ ಪಾಂಡ್ಯ), ಸನ್ರೈಸರ್ಸ್ (ಪ್ಯಾಟ್ ಕಮ್ಮಿನ್ಸ್), ರಾಜಸ್ಥಾನ ರಾಯಲ್ಸ್ (ಸಂಜು ಸ್ಯಾಮ್ಸನ್), ಚೆನ್ನೈ ಸೂಪರ್ಕಿಂಗ್ಸ್ (ಋತುರಾಜ್ ಗಾಯಕ್ವಾಡ್) ಮತ್ತು ಗುಜರಾತ್ ಟೈಟಾನ್ಸ್ (ಶುಭಮಾನ್ ಗಿಲ್) ಕಳೆದ ಆವೃತ್ತಿಯ ನಾಯಕರನ್ನೇ ಮುಂದುವರಿಸಲಿವೆ. ಈ ಪೈಕಿ ಗುಜರಾತ್ ಮಾತ್ರ ಈ ಬಾರಿ ಗಿಲ್ ಬದಲಿಗೆ ರಶೀದ್ ಖಾನ್ರನ್ನು ನಾಯಕರಾಗಿ ನೇಮಿಸಲಿದೆ ಎಂದು ಬೆನ್ನುಡಿ (ಗಾಸಿಪ್) ಹರಡಿತ್ತು.
ಮೆಲ್ಬೋರ್ನ್ ಟೆಸ್ಟ್ ಬಳಿಕ ರೋಹಿತ್ ಶರ್ಮ ನಿವೃತ್ತಿಗೆ ಮುಂದಾದರೂ ಹಿತೈಷಿಗಳಿಂದ ತಡೆ! ಸಿಟ್ಟಾಗಿದ್ದರು ಗಂಭೀರ್!