ಬಂಕಾಪುರ: ಕಳೆದ ನಾಲ್ಕು ದಿನಗಳಿಂದ ಬಿತ್ತನೆ ಬೀಜಕ್ಕಾಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಬಿರು ಬಿಸಿಲಿನಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಂತ ರೈತರಿಗೆ ಪಟ್ಟಣದ ಪಿಎಸ್ಐ ಪರಶುರಾಮ ಕಟ್ಟಿಮನಿ ಅವರು ಬಾಳೆಹಣ್ಣು ಮತ್ತು ನೀರಿನ ಬಾಟಲ್ ವಿತರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜೂನ್ ಒಂದರಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಆದರೆ, ಈ ಬಾರಿಯ ಬೀಜ ವಿತರಣಾ ಮಾರ್ಗಸೂಚಿ ಕಂಪ್ಯೂಟರ್ ಆಧಾರಿತವಾಗಿರುವುದರಿಂದ ಸರ್ವರ್ ಸೇರಿ ಇತರ ಕಾರಣಗಳಿಂದ ವಿತರಣೆ ವಿಳಂಬವಾಗುತ್ತಿದೆ. ಇದರಿಂದಾಗಿ ರೈತರು ದಿನಗಟ್ಟಲೇ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತು ಕುಡಿಯಲು ನೀರಿಗಾಗಿ ಪರದಾಡುವಂತಾಗಿತ್ತು.
ಗದ್ದಲವನ್ನು ನಿಯಂತ್ರಿಸಲು ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಆಗಮಿಸಿದ ಪರಶುರಾಮ ಕಟ್ಟಿಮನಿ ಅವರು ರೈತರ ಸ್ಥಿತಿ ಗಮನಿಸಿ ಸರತಿಯಲ್ಲಿ ನಿಂತಿದ್ದ ನೂರಕ್ಕೂ ಅಧಿಕ ರೈತರಿಗೆ ನಿತ್ಯ ನೀರಿನ ಬಾಟಲ್ ಮತ್ತು ಬಾಳೆಹಣ್ಣು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರೈತ ಕುಟುಂಬದಿಂದ ಬಂದಿರುವ ನಾನು ರೈತರ ಕಷ್ಟಗಳನ್ನು ಅರಿತುಕೊಂಡಿದ್ದೇನೆ. ಇಲಾಖೆ ಸೇರುವ ಮುನ್ನ ನಾನೂ ಒಬ್ಬ ರೈತ. ಹೀಗಾಗಿ ಬಿಸಿಲಿನಲ್ಲಿ ಬೀಜಕ್ಕಾಗಿ ನಿಂತಿರುವ ರೈತರಿಗೆ ಸಹಾಯವಾಗಲಿ ಎಂದು ಸಾಧ್ಯವಾದಷ್ಟು ಸ್ಪಂದಿಸುತ್ತಿದ್ದೇನೆ. ರೈತರು ಗಲಾಟೆ ಮಾಡದೇ ಸಮಾಧಾನದಿಂದ ಬೀಜ ಪಡೆದುಕೊಳ್ಳಬೇಕು.
ಪರಶುರಾಮ ಕಟ್ಟಿಮನಿ ಪಿಎಸ್ಐ, ಬಂಕಾಪುರ
ಬಿತ್ತನೆ ಬೀಜ ವಿತರಣೆ ವಿಳಂಬದಿಂದ ಪಟ್ಟಣದ ಕೃಷಿ ಸಂಪರ್ಕ ಕೇಂದ್ರದ ಮುಂದೆ ದಿನಗಟ್ಟಲೇ ಬಿಸಿಲಿನಲ್ಲಿ ಸರದಿಯಲ್ಲಿ ನಿಲ್ಲಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಕೃಷಿ ಅಧಿಕಾರಿಗಳು ಕೃಷಿ ಸಂಪರ್ಕ ಕೇಂದ್ರದ ಮುಂದೆ ಪೆಂಡಾಲ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ರೈತರ ಬಗ್ಗೆ ಅವರಿಗಿರುವ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಬಂದೋಬಸ್ತ್ತ್ಗೆ ಬಂದಿರುವ ಪೊಲೀಸರು ರೈತರ ಬಗ್ಗೆ ತೋರುತ್ತಿರುವ ಕಾಳಜಿಗೆ ಧನ್ಯವಾದಗಳು.
ಮಧುಕುಮಾರ ಜಂಗಳಿ ರೈತ, ಬಂಕಾಪುರ