ಕನಕಪುರ: “ಕಂದಾಯ ಇಲಾಖೆಯಿಂದ 30-40 ಸಿಬ್ಬಂದಿ ಒದಗಿಸಿದರೆ ನಾನೇ ಮುಂದೆ ನಿಂತು ಮುಂದಿನ ನಾಲ್ಕು ತಿಂಗಳಲ್ಲಿ ತಾಲೂಕಿನಲ್ಲಿ ಮರು ಭೂಮಾಪನ ಯೋಜನೆ ಪೂರ್ಣಗೊಳಿಸುತ್ತೇನೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಭಾನುವಾರ ನಡೆದ ಮರು ಭೂಮಾಪನ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಲಾದ ಕರಡು ಆರ್ಟಿಸಿ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಸುರೇಶ್ ಅವರು ಭಾಗವಹಿಸಿ ಮಾತನಾಡಿದರು. “ಕಂದಾಯ ಇಲಾಖೆಯಲ್ಲಿ ಇದೊಂದು ಐತಿಹಾಸಿಕ ದಿನ. 100 ವರ್ಷಕ್ಕೂ ಹೆಚ್ಚು ಕಾಲ ಅಳವಡಿಸಿಕೊಂಡಿದ್ದ ಭೂಮಾಪನ ಪದ್ಧತಿ ಹೊರತಾಗಿ ಈಗ ಹೊಸ ಮಾದರಿಯ ಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆ ಮೂಲಕ ದೊಡ್ಡಆಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಮಾಡಲಾಗಿದೆ” ಎಂದರು.
“ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಸರ್ವೇ ಇಲಾಖೆ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸುತ್ತೇನೆ. ಸರ್ವೇ ಕಚೇರಿ ಎಂದರೆ ರೈತರ ಪಾಲಿನ ಸಿಂಹಸ್ವಪ್ನ. ಇದಕ್ಕೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ಈ ಪ್ರಾಯೋಗಿಕ ಪ್ರಯತ್ನ ಮಾಡಿದೆ. ಮೊದಲು ಯಾವ ಜಿಲ್ಲೆಯಲ್ಲಿ ಮಾಡಬೇಕು ಎಂದು ಚಿಂತನೆ ನಡೆಸುವಾಗ ನಾನು ನಮ್ಮ ರಾಮನಗರ ಜಿಲ್ಲೆಯ ನಮ್ಮ ಕ್ಷೇತ್ರದಲ್ಲೇ ಮಾಡಿ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ| New State President of JDS
ಉಯ್ಯಂಬಳ್ಳಿ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿದ್ದು, 33 ಗ್ರಾಮಗಳಲ್ಲಿ 23,469 ರೈತರ ಭೂಮಿಯ ಸರ್ವೇ ಮಾಡಲಾಗಿದೆ. ಕೆಲವರು ಸರಪಳಿ ಹಾಕಿ ಅಳತೆ ಮಾಡಿದರೆ ಮಾತ್ರ ಸರ್ವೇ ಎಂದು ಭಾವಿಸಿದ್ದಾರೆ. ಹೀಗಾಗಿ ಅನೇಕರು ನಮ್ಮ ಜಮೀನು ಸರ್ವೇ ಆಗಿದೆ ಎಂದರೆ ನಂಬುತ್ತಿಲ್ಲ. ರೋವರ್ ತಂತ್ರಜ್ಞಾನದ ಮೂಲಕ ಬಹಳ ಸರಳೀಕರಣವಾಗಿ, ಬಹಳ ನಿಖರವಾಗಿ ಭೂ ಮಾಪನ ಮಾಡಲಾಗಿದೆ. ಈ ತಂತ್ರಜ್ಞಾನ ಮೂಲಕ ಅಳತೆಯಲ್ಲಿ ವ್ಯತ್ಯಾಸ ಕಂಡುಬರುವುದು ಕೇವಲ 1 ಸೆ.ಮೀ ಮಾತ್ರ. ಈ ರೀತಿ 97 ಸಾವಿರ ಎಕರೆ ಜಮೀನು ಸರ್ವೇ ಮಾಡಲಾಗಿದೆ” ಎಂದರು.
“ಪಹಣಿಯಲ್ಲಿ ನಕ್ಷೆ, ನಕಾಶೆ, ಕ್ಯೂಆರ್ ಕೋಡ್ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಭೂಮಿಯ ಅಳತೆ ದಾಖಲೆ ಮಾಹಿತಿ ಲಭ್ಯವಾಗುತ್ತದೆ. ರೈತರಿಗೆ ಜಮೀನಿನಲ್ಲಿ ವ್ಯತ್ಯಾಸ ಕಂಡು ಬಂದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಒಂದೇ ಪಹಣಿಯಲ್ಲಿ ಹಲವಾರು ಹೆಸರುಗಳಿದ್ದು, ಅದನ್ನು ಸರಿಪಡಿಸಲು ಅವಕಾಶವಿದೆ. ಆಕ್ಷೇಪಗಳಿದ್ದರೆ ಅದನ್ನು ಉಚಿತವಾಗಿ ಸರಿಪಡಿಸಲು 1 ತಿಂಗಳು ಕಾಲಾವಕಾಶವಿದೆ. ಒಂದು ತಿಂಗಳ ನಂತರ ಇದಕ್ಕೆ ಶುಲ್ಕ ಪಾವತಿಸಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ| New State President of JDS
“ಈ ಹೋಬಳಿಯಲ್ಲಿ 5 ಸಾವಿರ ಸರ್ವೇ ನಂಬರ್ಗಳು ಇದ್ದವು. ಈ ಕಾರ್ಯಕ್ರಮದ ನಂತರ ಸರ್ವೇ ನಂಬರ್ ಗಳ ಸಂಖ್ಯೆ 23 ಸಾವಿರಕ್ಕೆ ಏರಿಕೆಯಾಗಿವೆ. ಈ ಸೌಲಭ್ಯವನ್ನು ಇಡೀ ತಾಲೂಕು ಹಾಗೂ ಜಿಲ್ಲೆಗೆ ವಿಸ್ತರಿಸಬೇಕು ಎಂದು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿಲ್ಲ. ಇಂದು ಬೆಳಗ್ಗೆ ಅವರಿಗೆ ಕರೆ ಮಾಡಿ ಮಾತನಾಡುವಾಗ ನಮ್ಮ ಬೇಡಿಕೆ ಇನ್ನು ಇವೆ ಎಂದು ಕೇಳಿದೆ. ಅವರು ನಿಮ್ಮ ಬೇಡಿಕೆ ಏನೇ ಇದ್ದರೂ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು” ಎಂದರು.
“ಇನ್ನು ಈ ಆರ್ ಟಿಸಿ ಒಳಗೆ ಜಮೀನು ಮಾಲೀಕರ ಹೆಸರಿನ ಜತೆಗೆ ಅವರ ಫೋಟೋ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸುವ ಕೆಲಸ ಮಾಡಬೇಕು. ಆಗ ಒಂದೇ ಹೆಸರಿನ ಹಲವು ವ್ಯಕ್ತಿಗಳಿದ್ದರೂ ಗೊಂದಲ ಆಗುವುದಿಲ್ಲ” ಎಂದು ಸಲಹೆ ನೀಡಿದರು.