ಭದ್ರಾವತಿ: ಮಕ್ಕಳಿಗೆ ಹೇರಿಕೆಯ ಶಿಕ್ಷಣದ ಬದಲಿಗೆ, ಅವರ ಇಚ್ಛಾ ರೀತಿಯ ಶಿಕ್ಷಣ ನೀಡಿದರೆ ಮಕ್ಕಳ ಭವಿಷ್ಯದ ಚಿಂತೆ ದೂರವಾಗುತ್ತದೆ ಎಂದು ಶಿರಸಿ ಕನ್ಹೇರಿ ಮಠದ ಸಿದ್ದಗುರುಕುಲದ ಪ್ರಧಾನ ಆಚಾರ್ಯ ವಿ.ಎಸ್.ಗುರುಮೂರ್ತಿ ಅಭಿಪ್ರಾಯಪಟ್ಟರು.
ನ್ಯೂಟೌನ್ ತರಂಗ ಅಂಗವಿಕಲರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸಂತ ಶಿಬಿರದಲ್ಲಿ ಮಾತನಾಡಿದ ಅವರು, ಜನಿಸಿದ ಪ್ರತಿ ಮಕ್ಕಳಿಗೂ ಭಗವಂತ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ನೀಡಿರುತ್ತಾನೆ. ಅದನ್ನು ಅರಿತು ಅವರ ವಿದ್ಯಾಭ್ಯಾಸಕ್ಕೆ ಪಾಲಕರು ಗಮನಹರಿಸಬೇಕು. ಅದನ್ನ ಬಿಟ್ಟು ಮಕ್ಕಳನ್ನು ವೈದ್ಯರು, ಡಾಕ್ಟರ್ ಆಗಬೇಕು ಎಂದು ಒತ್ತಡಕ್ಕೆ ಸಿಲುಕಿಸಬಾರದು ಎಂದರು.
ಇಂದಿನ ಮೆಕಾಲೆ ಆಧಾರಿತ ಕಾನ್ವೆಂಟ್ ಶಿಕ್ಷಣದಲ್ಲಿ ಕೇವಲ ಆರು ವಿಷಯಗಳ ಪಠ್ಯ ಕಲಿಯಲು ಮಕ್ಕಳು ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಜೀವನವನ್ನೇ ಕಳೆದುಕೊಂಡ ಸಂಗತಿಗಳಿವೆ. ಆದರೆ ಹಿಂದಿನ ಕಾಲದಲ್ಲಿ ಗುರುಕುಲ ಪದ್ಧತಿ ಶಿಕ್ಷಣ ನೀಡಲಾಗುತ್ತಿದ್ದು, ಅದರಲ್ಲಿ 64 ಕಲೆ, 14 ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಈ ಪದ್ಧತಿಯಲ್ಲಿ ಕಲಿತ ವಿದ್ಯಾರ್ಥಿ ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುತ್ತಾನೆ. ಇಲ್ಲಿ ಯಾವುದೇ ರೀತಿಯ ಸರ್ಟಿಫಿಕೆಟ್ಗಳ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಲ್.ತಾರಾಮಣಿ ಮಾತನಾಡಿ, ವಸಂತ ಶಿಬಿರಗಳಿಂದ ಅಂಗವಿಕಲ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆದು, ಆ ಪ್ರತಿಭೆಗೆ ತಕ್ಕಂತೆ ಉನ್ನತ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು ಶಿಬಿರದ ಮೂಲ ಉದ್ದೇಶ. ತರಂಗ ಅಂಗವಿಕಲರ ಶಾಲೆಯಲ್ಲಿ ಬಹಳ ವರ್ಷಗಳ ನಂತರ ವಸಂತ ಶಿಬಿರ ಆಯೋಜಿಸಲಾಗಿದೆ. ಇಲ್ಲಿ ದೃಶ್ಯದ ಮೂಲಕ ಯೋಗ, ಧ್ಯಾನ, ಮಾದರಿಗಳ ತಯಾರಿಕೆ, ಹೊಲಿಗೆ ತರಬೇತಿ, ಮೆಹಂದಿ, ಕರಕುಶಲ ಕಲೆ, ಅಭಿನಯ ಇತ್ಯಾದಿಗಳನ್ನು ಪಾಲಕರ ಜತೆಯಲ್ಲಿ ಕಲಿಸಿಕೊಡಲಾಗುತ್ತಿದೆ ಎಂದರು.
ಎಸ್.ಎನ್.ಸುಭಾಷ್, ಗೀತಾಲಕ್ಷ್ಮೀ, ಪ್ರಸನ್ನಕುಮಾರ್, ಗಂಗಾ ಭವಾನಿ, ನಿಹಾರಿಕಾ, ಸತೀಶ್ಕುಮಾರ್, ರೂಪಾ, ಶಾಲಾ ಸಿಬ್ಬಂದಿ, ಪಾಲಕರು ಇದ್ದರು.
