ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ಯುಜಿಸಿ ಮತ್ತು ಇತರ ಸಂಸ್ಥೆಗಳು ವಿಶ್ವವಿದ್ಯಾಲಯಗಳಿಗೆ ಸಮರ್ಪಕವಾಗಿ ಅನುದಾನ ಒದಗಿಸದಿರುವ ಹಿನ್ನೆಲೆಯಲ್ಲಿ ವಿವಿಗಳಲ್ಲಿ ಸಂಶೋಧನೆ, ನೇಮಕಾತಿ ಮತ್ತಿತರ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ನ್ಯಾಕ್ ಮಾಜಿ ಅಧ್ಯಕ್ಷ ಪ್ರೊ. ಎಚ್.ಎ.ರಂಗನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಯ ವಿಷನ್ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದಲ್ಲಿ ಉನ್ನತ ಶಿಕ್ಷಣದ ಪ್ರಸ್ತುತತೆ ಬಗ್ಗೆ ಗಂಭೀರವಾದ ಪ್ರಶ್ನೆಗಳು ಕೇಳಿಬರುತ್ತಿವೆ. ಉನ್ನತ ಶಿಕ್ಷಣ ಸಂಸ್ಥೆಗಳು ಪದವೀಧರರನ್ನು ಹೊರತರುತ್ತಿದ್ದರೂ ಅವರಲ್ಲಿ ಬಹುತೇಕ ಮಂದಿ ಉದ್ಯೋಗ ಪಡೆದುಕೊಳ್ಳುವಲ್ಲಿ ಸೋಲುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಗಳು ಸಾಂಪ್ರದಾಯಿಕ ಆಲೋಚನೆಗಳನ್ನು ಬದಿಗಿರಿಸಿ ಭವಿಷ್ಯದ ಔದ್ಯೋಗಿಕ ಮಾರುಕಟ್ಟೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ. ಕಾರ್ಪೋರೇಟ್ ಸಂಸ್ಥೆಗಳು ವೃತ್ತಿಪರ ತರಬೇತಿ ನೀಡುವುದಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು, ಅದರಲ್ಲಿಯೂ ಸಾರ್ವಜನಿಕ ವಿವಿಗಳು ವೃತ್ತಿಪರರನ್ನು ತಯಾರು ಮಾಡುವ ಹೊಣೆ ಇದೆ ಎಂದು ತಿಳಿಸಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿವಿಗಳಲ್ಲಿ ಪ್ರಾಧ್ಯಾಪಕರು ದಂತಗೋಪುರಗಳಲ್ಲಿ ಕೂರದೆ ಬಹುಶಿಸ್ತೀಯ ಅಧ್ಯಯನ ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂದರು.
ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್.ಎನ್.ರಮೇಶ್, ವಿಜ್ಞಾನ ನಿಕಾಯದ ಡೀನ್ ಪ್ರೊ. ಎಸ್.ವಿ.ಕೃಷ್ಣಮೂರ್ತಿ ಇದ್ದರು.