ನವದೆಹಲಿ: ಭಾರತ್ ಬಂದ್ ಹೆಚ್ಚಾಗಿ ಪರಿಣಾಮ ಬೀರಿದ್ದು ಪಶ್ಚಿಮ ಬಂಗಾಳದಲ್ಲಿ ಎನ್ನಲಾಗಿದೆ. ಯಾವುದೇ ಪ್ರತಿಭಟನೆ, ಹೋರಾಟ, ಬಂದ್ ಇದ್ದರೂ ಅದು ಪಶ್ಚಿಮ ಬಂಗಾಳದಲ್ಲಿ ತುಸು ಮಿತಿಮೀರುತ್ತದೆ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದ್ದು ಈ ಭಾರತ್ ಬಂದ್ ಕೂಡ ಅದನ್ನು ಸಾಕ್ಷೀಕರಿಸಿದೆ.
ಉತ್ತರ 24 ಪರಗಣದ ಹೃದಯಪುರ ರೈಲ್ವೆ ಸ್ಟೇಶನ್ ಬಳಿ ಹಳಿಗಳ ಮೇಲೆ ಇಡಲಾದ 4 ಕಚ್ಚಾಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹೌರಾಹ್ನಲ್ಲಿ ರೈಲ್ವೆ ಹಳಿಗಳನ್ನು ಪ್ರತಿಭಟನಾಕಾರರು ಬ್ಲಾಕ್ ಮಾಡಿದ್ದಾರೆ. ಕೂಚ್ ಬೆಹಾರ್ದಲ್ಲಿ ಬಸ್ಗಳನ್ನು ಒಡೆದು ಧ್ವಂಸ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಮಾಲ್ಡಾದಲ್ಲಿ ಪ್ರತಿಭಟನಾಕಾರರು ಪೊಲೀಸ್ ವಾಹನಗಳಿಗೇ ಬೆಂಕಿ ಹಚ್ಚಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರ್ಕಾರದ ಬೆಂಬಲ
ಇನ್ನು ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಬೆಂಬಲ ನೀಡುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ. ಹಾಗಾಗಿ ನಾವೂ ಭಾರತ್ ಬಂದ್ಗೆ ಕೈಜೋಡಿಸುತ್ತಿದ್ದೇವೆ ಎಂದು ಮೈತ್ರಿ ಸರ್ಕಾರದ ಪಿಡಬ್ಲ್ಯೂಡಿ ಸಚಿವ ಅಶೋಕ್ ಚವ್ಹಾಣ್ ಹೇಳಿದ್ದಾರೆ.
ಪಂಜಾಬ್ನಲ್ಲೂ ಕೂಡ ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಇನ್ನು ತಮಿಳುನಾಡಿನದಲ್ಲಿ ಮೌಂಟ್ ರಸ್ತೆಯಲ್ಲಿ ಕಾರ್ಮಿಕ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಬ್ಯಾಂಕಿಂಗ್ ಸೇವೆ ಮೇಲೆ ಪರಿಣಾಮ
ತೆಲಂಗಾಣದಲ್ಲಿ ಬ್ಯಾಂಕಿಂಗ್ ಸೇವೆ ಮೇಲೆ ಭಾರತ್ ಬಂದ್ ಪರಿಣಾಮ ಬೀರಿದೆ. ಅಲ್ಲದೆ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಸಾರಿಗೆ ವ್ಯವಸ್ಥೆ ಸ್ಥಗಿತವಾಗಿದೆ. ತೆಲಂಗಾಣದಲ್ಲಿ ಸುಮಾರು 3 ಲಕ್ಷ ವಿವಿಧ ಸಂಘಟನೆಗಳ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಬ್ಯಾಂಕ್ ಸೇರಿ ಬಹುತೇಕ ಎಲ್ಲ ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಿದೆ.