ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಹಿಂದು ಪ್ರವಾಸಿಗರ ಮೇಲೆ ನಡೆಸಿರುವ ಹತ್ಯಾಕಾಂಡ ಖಂಡಿಸಿ ಕರ್ನಾಟಕ ಸೇನಾ ಪಡೆ ಹಾಗೂ ಒಕ್ಕಲಿಗ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ಕಪ್ಪು ಪಟ್ಟಿ ಧರಿಸಿ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಉಗ್ರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಮ್ಮು-ಕಾಶ್ಮೀರ ಭೂಲೋಕದ ಸ್ವರ್ಗ. ಆದರೆ ಅಲ್ಲಿ ಪದೇ ಪದೆ ಉಗ್ರಗಾಮಿಗಳಿಂದ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉಗ್ರಗಾಮಿಗಳು ಯಾವುದೇ ಬಿಲದಲ್ಲಿ ಅಡಗಿ ಕುಳಿತಿದ್ದರು ಅವರನ್ನು ನಿರ್ನಾಮ ಮಾಡಬೇಕು. ಮತ್ತೊಮ್ಮೆ ಯಾವ ಉಗ್ರರು ನಮ್ಮ ದೇಶದೊಳಗೆ ನುಸುಳದಂತೆ, ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಧರ್ಮದ ಕಾರಣಕ್ಕಾಗಿ ಅಧರ್ಮದಿಂದ ಅಮಾಯಕ ಹಿಂದುಗಳನ್ನು ಕೊಂದ ಪಾಪಿಗಳನ್ನು ನರಕಕ್ಕೆ ಕಳುಹಿಸಲೇಬೇಕು ಎಂದು ಆಗ್ರಹಿಸಿದರು.
ಇಡೀ ಜಗತ್ತು ಭಾರತದ ಪರವಾಗಿದೆ. ಆದರೆ, ಭಾರತದಲ್ಲಿನ ಕೆಲ ವಿರೋಧ ಪಕ್ಷಗಳು ಪಾಕಿಸ್ತಾನದ ಪರವಾಗಿರುವುದು ಅತ್ಯಂತ ನೋವಿನ ಸಂಗತಿ. ಈ ವಿಚಾರದಲ್ಲಿ ಸಮಸ್ತ ಭಾರತೀಯರು, ಸರ್ವ ಪಕ್ಷಗಳು ಒಂದಾಗಬೇಕು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಈ ದುಷ್ಕೃತ್ಯವನ್ನು ಎಲ್ಲರೂ ಖಂಡಿಸಲೇಬೇಕು. ಸ್ಥಳೀಯರ ಸಹಕಾರವಿಲ್ಲದೇ ಈ ಕೃತ್ಯ ಎಸಗಲು ಉಗ್ರರಿಗೆ ಸಾಧ್ಯವಿಲ್ಲ. ಉಗ್ರರಿಗೆ ಸಹಕಾರ ನೀಡುತ್ತಿರುವವರ ಮೇಲೂ ತೀವ್ರ ನಿಗಾ ಇರಿಸಿ ಅಮಾಯಕ ಹಿಂದುಗಳ ಸಾವಿಗೆ ಕಾರಣವಾಗಿರುವವರ ಮೇಲೆ ಸಹ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ಉಗ್ರರನ್ನೆಲ್ಲ ಒಂದು ಕಡೆಯಿಂದ ಹೊಡೆದು ಹಾಕುತ್ತಾ, ಪಾಕಿಸ್ತಾನದ ಮೇಲೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ. ಪ್ರಪಂಚದಲ್ಲಿ ಕ್ರೈಸ್ತರಿಗೆ ನೂರಾರು ದೇಶಗಳಿವೆ. ಹಾಗೆಯೇ ಮುಸ್ಲಿಮರಿಗೂ ಹಲವಾರು ದೇಶಗಳಿವೆ. ಆದರೆ, ಹಿಂದುಗಳಿಗೆ ಇರುವುದೊಂದೇ ದೇಶ, ಅದುವೇ ಭಾರತ. ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸೇನೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ ಸಿ.ಜಿ.ಗಂಗಾಧರ್, ಲತಾ ರಂಗನಾಥ್, ಗೋವಿಂದೇಗೌಡ, ಶಿವಲಿಂಗಯ್ಯ, ಚರಣ್ರಾಜ್, ಮಂಜುನಾಥ್, ಲಿಂಗಪ್ಪ, ಪ್ರಭುಶಂಕರ, ನೇಹಾ, ಕೆ.ಪಿ.ನಾಗಣ್ಣ, ಮಧುವನ ಚಂದ್ರು, ಯಶ್ವಂತ್, ಪದ್ಮ್ಮಾ, ರಘುರಾಂ, ಸುಶೀಲಾ ನಂಜಪ್ಪ, ಭಾಗ್ಯಮ್ಮ, ಜಗದೀಶ್, ದೀಪಕ್ ಗೌಡ ಇತರರಿದ್ದರು.