ಕುರುಗೋಡು: ದೇವದಾಸಿ ಪದ್ಧತಿಗೆ ಬಲಿಯಾಗುತ್ತಿದ್ದ ಯುವತಿಯನ್ನು ರಕ್ಷಿಸಿ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಿ ಬದುಕು ಕಲ್ಪಿಸಿಕೊಟ್ಟ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:ಶಿಕ್ಷಣದಿಂದ ದೇವದಾಸಿ ಪದ್ಧತಿ ನಿಮೂರ್ಲನೆ
ಸಮೀಪದ ವದ್ದಟ್ಟಿ ಕ್ರಾಸ್ ನಿವಾಸಿ ಯುವತಿಯ ಕುಟುಂಬಸ್ಥರು ಮೂಢನಂಬಿಕೆಯಿಂದ ದೇವದಾಸಿ ಪದ್ಧತಿಯಲ್ಲಿ ಮುತ್ತು ಕಟ್ಟಲು ಮುಂದಾಗಿದ್ದರು. ಇದರಿಂದ ಎಚ್ಚತ್ತ ಯುವತಿ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ಸಂಬಂಧಿಕರಿಗೆ ತಿಳಿಸಿ ಅವರ ನೆರವಿನಿಂದ ದೇವದಾಸಿ ಮಹಿಳಾ ವಿಮೋಚನಾ ಸಂಘದ ಮೊರೆ ಹೋಗಿದ್ದಳು.
ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಎಚ್.ಯಂಕಮ್ಮ ಯುವತಿ ಮತ್ತು ಯುವಕನೊಂದಿಗೆ ಪೊಲೀಸ್ ಠಾಣೆಗೆ ಹೋದಾಗ ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ ಅವರು ಎರಡೂ ಕುಟುಂಬದ ಸದಸ್ಯರನ್ನು ಕರೆಸಿ ವಿಚಾರಿಸಿದರು. ಅನಿಷ್ಟ ದೇವದಾಸಿ ಪದ್ಧತಿ ಬಗ್ಗೆ ಕಾನೂನಿನ ಅರಿವು ಮೂಡಿಸಿದರು. ಕುಟುಂಬದವರ ಮನವೊಲಿಸಿ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮುಖಂಡರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಯುವಕ-ಯುವತಿ ಪರಸ್ಪರ ಹಾರ ಬದಲಾಯಿಸಿ ನೂತನ ಬದುಕಿಗೆ ಕಾಲಿಟ್ಟರು.