ಹಾನಗಲ್ಲ: ದುರಾಸೆ ಕೇಂದ್ರೀಕೃತವಾಗಿ ಜೀವನ ಶೈಲಿ ಕಾಪಾಡಿಕೊಳ್ಳಲು ನಮಗೆ ಇದೊಂದೇ ಭೂಮಿ ಸಾಲದು. ಹಾಗಂತ ಮತ್ತೊಂದು ಭೂಮಿ ಸೃಷ್ಟಿಸಲು ಆಗದು. ಆದ್ದರಿಂದ ಪರಿಸರ ಸ್ನೇಹಿಗಳಾಗಿ ಭೂಮಿ ಉಳಿಸುವುದೊಂದೇ ಮಾರ್ಗ ಎಂದು ಪ್ರಾಚಾರ್ಯ ಡಾ.ಎಂ.ಎಚ್. ಹೊಳಿಯಣ್ಣನವರ ಹೇಳಿದರು.

ಪಟ್ಟಣದ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ವಿಭಾಗದಿಂದ ಭೂ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ವಿವಿಧ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಜೀವನಾನುಕೂಲ ಒದಗಿಸಿಕೊಳ್ಳಲು ಅತಿಯಾದ ಸಂಪನ್ಮೂಲಗಳ ಬಳಕೆ, ಅರಣ್ಯ ತೆರವುಗೊಳಿಸುತ್ತಿರುವುದರಿಂದ ಭೂಮಂಡಲದ ತಾಪಮಾನ ಹೆಚ್ಚಾಗುತ್ತಿದೆ ಎಂದರು.
ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ಹೊಳೇರ ಉಪನ್ಯಾಸ ನೀಡಿ, ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೆ ಪರಿಣಾಮ ಬೀರುವ ಮಾನವ ಜನಸಂಖ್ಯೆಯು ನೈಸರ್ಗಿಕ ಸಂಪನ್ಮೂಲಗಳನ್ನು ಶೇ. 175ರಷ್ಟು ವೇಗದಲ್ಲಿ ಬಳಸುತ್ತಿದೆ. ವಾಸಯೋಗ್ಯ ಹವಾಮಾನ, ಆರೋಗ್ಯಕರ ಸಮುದಾಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಕೃತಿಯೊಂದಿಗೆ ಭವಿಷ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಭೂ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ಸಸಿ ನೆಡುವುದು, ಪ್ರಬಂಧ ಸ್ಪರ್ಧೆ, ಪರಿಸರ ರಕ್ಷಣೆಗೆ ಜಾಗೃತಿ ಮೂಡಿಸುವ ಘೊಷ ವಾಕ್ಯಗಳ ಮೂಲಕ ಸಂದೇಶ ರವಾನಿಸುವ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ಪ್ರಾಧ್ಯಾಪಕರಾದ ಡಾ. ಸತ್ಯಸಾವಿತ್ರಿ ವಿ.ಬಿ., ಸೋಮನಕಟ್ಟಿ ಭೀಮಾವತಿ, ಶಿಲ್ಪಾ ಟಿ., ಡಾ.ಬಿ.ಎಸ್.ಲಕ್ಷೆ್ಮೕಶ್ವರ, ಪಂಪಾಪತಿ ಕಾಗಿನಲ್ಲಿ, ಸುಶೀಲಾ ಬಡಿಗೇರ, ಸುಚಿತ್ರಾ, ಸುಶ್ಮಾ, ಪ್ರಿಯಾ, ಜಗದೀಶ ಜವಳಿ, ಉಮಾ ಮಹೇಶ್ವರಿ ಇದ್ದರು. ಉಪನ್ಯಾಸಕಿ ಸುಶೀಲಾ ಬಡಿಗೇರ ಸ್ವಾಗತಿಸಿದರು. ರಾಜೇಶ್ವರಿ ತಳಗೇರಿ ವಂದಿಸಿದರು. ರಂಜಿತಾ ಚಿಕ್ಕಣ್ಣನವರ ನಿರೂಪಿಸಿದರು.