ಗಂಗಾವತಿ: ವಾಸದ ಆಸ್ತಿಗಳಿಗೆ ಗ್ರಾಪಂನಿಂದ ಅಧಿಕೃತ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿ ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿ ನರೇಗಾ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಮತ್ತು ಪಿಡಿಒ ರವೀಂದ್ರ ಕುಲ್ಕರ್ಣಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಬುಮ್ರಾ-ಬೌಲ್ಟ್ ದಾಳಿಗೆ ತತ್ತರಿಸಿದ ಲಖನೌ: ಐಪಿಎಲ್ನಲ್ಲಿ ವಿಶಿಷ್ಠ ದಾಖಲೆ ಬರೆದ ಮುಂಬೈ ಇಂಡಿಯನ್ಸ್
ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಚಿಕ್ಕರಾಂಪುರ, ಚಿಕ್ಕರಾಂಪುರ 1, ಕಡೇಬಾಗಿಲು, ಬಸವನದುರ್ಗ, ಆನೆಗೊಂದಿಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿದ್ದು, ದಾಖಲೆ ವಂಚಿತರಾಗಿದ್ದಾರೆ. ಬಡ ಕೂಲಿಕಾರರೇ ಹೆಚ್ಚಿರುವ ಗ್ರಾಪಂ ವ್ಯಾಪ್ತಿಯ ನಿವಾಸಿಗಳು 50ವರ್ಷಗಳಿಂದ ವಾಸಿಸುತ್ತಿದ್ದರೂ ಅಧಿಕೃತ ದಾಖಲೆಗಳಿಲ್ಲ.
ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ಕಂದಾಯ ಮತ್ತು ಗ್ರಾಪಂ ನೆಪ ಹೇಳುತ್ತಿದ್ದು, 9/11ಬಿ ದಾಖಲೆಗಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಮಸ್ಯೆ ಇತ್ಯರ್ಥ ನೆಪದಲ್ಲಿ ಮತ ಪಡೆಯುವ ಜನಪ್ರತಿನಿಧಿಗಳು ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತಿಲ್ಲ.
ಕೇಂದ್ರ ಪುರಸ್ಕೃತ ಆವಾಸ್ ಯೋಜನೆಯಡಿ 150 ಅರ್ಜಿ ಸಲ್ಲಿಕೆಯಾದರೂ, ಇದುವರೆಗೆ ಜಿಪಿಎಸ್ಗೆ ಅವಕಾಶ ನೀಡುತ್ತಿಲ್ಲ. ಸಮಸ್ಯೆ ಇತ್ಯರ್ಥಪಡಿಸುವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪಟ್ಟು ಹಿಡಿದರು. ಪ್ರಮುಖರಾದ ದುರ್ಗಾಪ್ರಸಾದ, ಲಕ್ಷ್ಮಣ ನಾಯಕ, ವೆಂಕೋಬಿ, ದೊಡ್ಡಪ್ಪ, ಶಾಂತಮ್ಮ, ಉಮೇಶನಾಯ್ಕ, ಶಂಕರ, ಹುಲಿಗೇಶ ಇತರರಿದ್ದರು.