ತುಮಕೂರು: ಕಾಡು ಪ್ರಾಣಿ ಹಾಗೂ ಪಕ್ಷಿಗಳ ಮಾಂಸದಿಂದ ಆಹಾರ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳು ಖಾಸಗಿ ಹೊಟೇಲ್ ಮೇಲೆ ದಾಳಿ ನಡೆಸಿದ್ದಾರೆ.
ಕುಣಿಗಲ್ ತಾಲೂಕಿನ ಅಂಚೆಪಾಳ್ಯ ಸಮೀಪದಲ್ಲಿರುವ ಖಾಸಗಿ ಹೋಟೆಲ್ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹೋಟೆಲ್ನಲ್ಲಿ 5 ಕೆ.ಜಿ. ಮಾಂಸ ಪತ್ತೆಯಾಗಿದ್ದು, ಮಾಂಸವನ್ನು ಪರೀಕ್ಷೆಗಾಗಿ ಹೈದ್ರಾಬಾದ್ನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಹೋಟೆಲ್ನಲ್ಲಿ ಜಿಂಕೆ ಹಾಗೂ ನವಿಲು ಮಾಂಸದಲ್ಲಿ ಆಹಾರ ತಯಾರಿಸಿ ಗ್ರಾಹಕರಿಗೆ ಅಧಿಕ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಅರಣ್ಯ ಅಧಿಕಾರಿಗಳು ಸತೀಶ್ ಎಂಬುವನನ್ನು ಬಂಧಿಸಿದ್ದಾರೆ. ಕುಣಿಗಲ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವಲಯ ಅರಣ್ಯ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.